Advertisement

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

11:29 AM May 04, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕಳೆದೆರಡು ದಶಕಗಳಿಂದ ಬಿಜೆಪಿ ಭದ್ರಕೋಟೆ ಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು ಎದುರಾಗಿದೆ. ಬಿಜೆಪಿ ಈ ಬಾರಿ ಕ್ಷೇತ್ರದಿಂದ ಅತ್ಯಂತ ಅನುಭವಿ ಮತ್ತು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಯುವ ಮುಖ, ರಾಜ್ಯದ ಪ್ರಭಾವಿ ನಾಯಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಪುತ್ರ ಮೃಣಾಲ್‌ಗೆ ಆವಕಾಶ ಕೊಟ್ಟಿದೆ. ಬೆಳಗಾವಿ ಕ್ಷೇತ್ರದ ಸ್ಪರ್ಧೆ ವಿಷಯದಲ್ಲಿ ಇಬ್ಬರಿಗೂ ಇದು ಮೊದಲ ಚುನಾವಣೆ. ಮೃಣಾಲ್‌ ಅವರ ವಯಸ್ಸಿಗಿಂತಲೂ ಹೆಚ್ಚು ರಾಜಕೀಯ ಅನುಭವ ಶೆಟ್ಟರ್‌ ಅವರಿಗಿದೆ. ಮಗನಿಗಿಂತ ಮುಖ್ಯವಾಗಿ ಸಚಿವೆ ಹೆಬ್ಬಾಳಕರ್‌ ಈ ಚುನಾವಣೆಯನ್ನು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಚುನಾವಣೆಗೆ ಎಲ್ಲಿಲ್ಲದ ಮಹತ್ವ ಹಾಗೂ ಕುತೂಹಲ ಬಂದಿದ್ದು ಸಮಬಲದ ಪೈಪೋಟಿ ನಿರೀಕ್ಷಿಸಲಾಗಿದೆ.

Advertisement

ಈ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿ ಆರು ಮತ್ತು ಕಾಂಗ್ರೆಸ್‌ ಇಬ್ಬರು ಶಾಸಕರನ್ನು ಹೊಂದಿತ್ತು. ಈಗ ಬಿಜೆಪಿ ಮೂವರು ಹಾಗೂ ಕಾಂಗ್ರೆಸ್‌ ಐದು ಶಾಸಕರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜ ಕಾರಣ ಬಹಳ ಎದ್ದು ಕಾಣುತ್ತಿದೆ. 2004 ರಿಂದ ಸತತ ನಾಲ್ಕು ಬಾರಿ ಜಯಗಳಿಸಿ ಕಾಂಗ್ರೆಸ್‌ನ ಸಿದ್ನಾಳ ಅವರ ದಾಖಲೆ ಸರಿ ಗಟ್ಟಿದ್ದ ಸುರೇಶ ಅಂಗಡಿ ನಾಲ್ಕೂ ಸಲವೂ
ಒಂದಿಲ್ಲಾ ಒಂದು ಅಲೆಗಳ ಮೇಲೆಯೇ ಗೆದ್ದು ಬಂದವರು.

ಕಳೆದ ಚುನಾವಣೆಯಲ್ಲಿ ಗೆದ್ದು ರೈಲ್ವೆ ಸಚಿವರಾದ ನಂತರ ಬೆಳಗಾವಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ
ಆರಂಭವಾಗಿತ್ತು. ಆದರೆ ಈ ಬಾರಿ ಚುನಾವಣೆ ಸಂಪೂರ್ಣ ಭಿನ್ನವಾಗಿದೆ. ಎರಡೂ ಪಕ್ಷಗಳಲ್ಲಿ ಟಿಕೆಟ್‌ ವಿಚಾರದಲ್ಲಿ ಸಮಾಧಾನ ಇಲ್ಲ. ಪ್ರಭಾವ ಮತ್ತು ಪ್ರಭಾವಿಗಳಿಗೆ ಮಣೆ ಹಾಕಲಾಗಿದೆ ಎಂಬ ಅಭಿಪ್ರಾಯವಿದೆ. ಇದು ಚುನಾವಣೆ ಮೇಲೆ ಯಾವ ರೀತಿ
ಪರಿಣಾಮ ಬೀರುತ್ತದೆ ಎಂಬುದು ಎಲ್ಲರ ಮುಂದಿರುವ ಕುತೂಹಲ. ಸ್ಥಳೀಯವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರಿಗೆ ಹೇಳಿಕೊಳ್ಳುವಂತಹ ಅಸ್ತ್ರಗಳಿಲ್ಲ. ಹೀಗಾಗಿ ಶೆಟ್ಟರ್‌ ಹೊರಗಿನವರು. ಬೆಳಗಾವಿಗೆ ಯಾವಾಗಲೂ ಅನ್ಯಾಯ ಮಾಡಿ ದ್ದಾ
ರೆಂಬ ವಿಷಯವನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದಾರೆ. ಇದರ ಜತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಹಳ ನಂಬಿಕೊಂಡಿದ್ದಾರೆ.

ಮೃಣಾಲ್‌ ಇದುವರೆಗೆ ನೇರವಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ ತಮ್ಮ ರಾಜಕೀಯ ಗುರುವಾದ ತಾಯಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಗರಡಿಯಲ್ಲಿ ಪಳಗಿದ್ದಾರೆ. ಜಾತಿ ಲೆಕ್ಕಾಚಾರ ಹಾಗೂ ಗೆಲುವಿಗಾಗಿ ಶ್ರಮಪಡುವ ಹುಮ್ಮಸ್ಸು ಎರಡನ್ನೂ ಲೆಕ್ಕಹಾಕಿ ಪಕ್ಷದ ವರಿಷ್ಠರು ಅಭ್ಯರ್ಥಿ ಆಯ್ಕೆಯಲ್ಲಿ ಜಾಣನಡೆ ಪ್ರದರ್ಶಿಸಿದ್ದಾರೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಬಿಜೆಪಿಯಿಂದ ಕಿತ್ತುಕೊಳ್ಳಬೇಕೆಂಬ ಗುರಿ ಹೊಂದಿರುವ ತಾಯಿ ಮತ್ತು ಮಗ ಇಬ್ಬರೂ ಎಡಬಿಡದೆ ಕ್ಷೇತ್ರ ಸಂಚಾರ ನಡೆಸಿದ್ದಾರೆ.

ಬಿಜೆಪಿ ವಲಯದಲ್ಲಿ ಶೆಟ್ಟರ್‌ ಬಗ್ಗೆ ಒಂದಿಷ್ಟು ಅಸಮಾಧಾನವಿದ್ದರೂ ನಾಯಕರು ಹಾಗೂ ಕಾರ್ಯಕರ್ತರು ಬೇರೆ ದಾರಿಯಿಲ್ಲದೇ ಮತ್ತೂಮ್ಮೆ ಮೋದಿ ಜಪ ಮಾಡುತ್ತಿದ್ದಾರೆ. ಹಿಂದಿನ ಸಂಸದರು ಸಾಕಷ್ಟು ಕೆಲಸ ಮಾಡಿರುವುದು ಪಕ್ಷಕ್ಕೆ ಸ್ವಲ್ಪ ಧೈರ್ಯ ತಂದಿದೆ. ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಮುನಿಸಿಕೊಂಡಿದ್ದ ಸ್ಥಳೀಯ ನಾಯಕರು ಈಗ ಶೆಟ್ಟರ್‌ಗೆ ಸಾಥ್‌ ನೀಡುತ್ತಿದ್ದಾರೆ.
ಇದರ ಮಧ್ಯೆ ಪ್ರಧಾನಿ ಮೋದಿ ಬೆಳಗಾವಿಗೆ ಬಂದು ಪ್ರಚಾರ ನಡೆಸಿದ್ದು ಅಭ್ಯರ್ಥಿ ಮತ್ತು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು
ಮೂಡಿಸಿದೆ. ಅಸಮಾಧಾನ ಮರೆಸಿದೆ.

Advertisement

ಜಗದೀಶ್‌ ಶೆಟ್ಟರ್‌; ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ
ಸಾಮರ್ಥ್ಯ
1)ಅಪಾರ ಅನುಭವ. ಶಿಸ್ತುಬದ್ಧ ರಾಜಕಾರಣ.
2)ಪ್ರಧಾನಿ ನರೇಂದ್ರ ಮೋದಿ ಅಲೆ.
3)ಸುರೇಶ ಅಂಗಡಿ ಮಾಡಿದ ಅಭಿವೃದ್ಧಿ ಕೆಲಸಗಳು.

ಪ್ರಧಾನಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು ಎಂಬುದು ಕ್ಷೇತ್ರದ ಎಲ್ಲ ಜನರ ಆಸೆ. ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇದು ನನಗೆ ದೊಡ್ಡ ಶಕ್ತಿ. ಕ್ಷೇತ್ರದ ಜತೆಗೆ ನನಗೆ ನಿರಂತರ ಸಂಪರ್ಕವಿದೆ. ಬೆಳಗಾವಿ ಅಭಿವೃದ್ಧಿ ಬಗ್ಗೆ
ನನ್ನದೇ ಆದ ಕನಸಿದೆ.
ಜಗದೀಶ್‌ ಶೆಟ್ಟರ್‌, ಬಿಜೆಪಿ ಅಭ್ಯರ್ಥಿ

ಮೃಣಾಲ್‌ ಹೆಬ್ಬಾಳಕರ್‌-ಕಾಂಗ್ರೆಸ್‌ ಅಭ್ಯರ್ಥಿ
ಸಾಮರ್ಥ್ಯ
1)ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಾಜಕೀಯ ಚಾಣಾಕ್ಷತನ.
2)ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕ
3)ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆ

ಚುನಾವಣಾ ಸ್ಪರ್ಧೆ ಹೊಸದು. ಎಲ್ಲ ಕಡೆ ಜನರು ಮುಕ್ತ ಮನಸ್ಸಿನಿಂದ ಸ್ವಾಗತ ನೀಡಿದ್ದಾರೆ. ಸರ್ಕಾರದ ಗ್ಯಾರಂಟಿ
ಯೋಜನೆಗಳ ಜತೆಗೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ತಾಯಿ ಮಾಡಿರುವ ಅಭಿವೃದ್ಧಿ ಕೆಲಸಗಳು ನನಗೆ ನೆರವಾಗಲಿವೆ.
●ಮೃಣಾಲ್‌ ಹೆಬ್ಬಾಳಕರ್‌, ಕಾಂಗ್ರೆಸ್‌ ಅಭ್ಯರ್ಥಿ

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next