Advertisement

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

11:45 PM Mar 31, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಹದಿಮೂರು ಮಂದಿ ಶಾಸಕರನ್ನು ಹೊಂದಿದ್ದರೂ ಪಕ್ಷದಲ್ಲಿ ನೆಮ್ಮದಿ ಇಲ್ಲ. ಅಸಮಾಧಾನ ಮತ್ತು ಅತೃಪ್ತಿ ಪ್ರತೀ ಕ್ಷೇತ್ರದಲ್ಲೂ ಕಾಣುತ್ತಿದೆ. ಜಿಲ್ಲೆಯ ನಾಯಕರ ಮಧ್ಯೆ ಹೆಚ್ಚುತ್ತಿರುವ ಅಂತರ ಹಾಗೂ ಸಮನ್ವಯದ ಕೊರತೆ ಪಕ್ಷದೊಳಗೆ ಸಾಕಷ್ಟು ಬೇಗುದಿಗೆ ಕಾರಣವಾಗಿದೆ. ಪಕ್ಷದಲ್ಲಿ ಒಗ್ಗ ಟ್ಟಿಗಿಂತ ನಾಯಕರ ನಡುವಿನ ಪ್ರತಿಷ್ಠೆ ಮತ್ತು ವೈಮನಸ್ಸು ಹೆಚ್ಚು ಸುದ್ದಿ ಮಾಡುತ್ತಿದೆ. ಈ ವೈಮನಸ್ಸು ಪಕ್ಷದ ವರಿಷ್ಠರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.

Advertisement

ಹದಿನೆಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಇಂಥವರಿಗೇ ಟಿಕೆಟ್‌ ಸಿಗುತ್ತದೆ. ಶಾಸಕರು ಆತಂಕಪಡಬೇಕಿಲ್ಲ ಎಂದು ಹೇಳುವ ಸ್ಥಿತಿ ಇಲ್ಲ. ಶಾಸಕರು ಸಹ ನಮಗೇ ಟಿಕೆಟ್‌ ಸಿಗುತ್ತದೆ ಎಂದೂ ಧೈರ್ಯದಿಂದ ಹೇಳಿಕೊಂಡು ಓಡಾಡುತ್ತಿಲ್ಲ. ಇದಕ್ಕೆ ಪಕ್ಷದೊಳಗಿನ ಆಕಾಂಕ್ಷಿಗಳ ಪಟ್ಟಿ ಮತ್ತು ಮನಸ್ತಾಪ ಪ್ರಮುಖ ಕಾರಣ. ಭಿನ್ನಮತ ಶಮನಕ್ಕೆ ರಾಜ್ಯಮಟ್ಟದ ನಾಯಕರ ಸಮ್ಮುಖದಲ್ಲಿ ಸಾಕಷ್ಟು ಸಭೆಗಳು ನಡೆದಿದ್ದರೂ ಆಂತರಿಕ ಬೇಗುದಿ ಇನ್ನೂ ಕುದಿಯುತ್ತಲೇ ಇದೆ.

ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಭಿನ್ನಮತ ಬದಿಗಿರಿಸಲೇಬೇಕಿದೆ. ಹೀಗಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮಣ ಸವದಿ ಮತ್ತು ರಮೇಶ್‌ ಜಾರಕಿಹೊಳಿ ಜತೆ ಖುದ್ದಾಗಿ ಮಾತುಕತೆ ನಡೆಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಸಾಕ್ಷಿ.

ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಹುಕ್ಕೇರಿ, ನಿಪ್ಪಾಣಿ, ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ರಾಮದುರ್ಗ, ಸವದತ್ತಿ ಮತ್ತು ಕಿತ್ತೂರು ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ. ಇದರಲ್ಲಿ ಕಾಗವಾಡ, ರಾಯಬಾಗ, ಕುಡಚಿ, ನಿಪ್ಪಾಣಿ, ಹುಕ್ಕೇರಿ, ಅರಭಾವಿ ಮತ್ತು ಕಿತ್ತೂರು ಕ್ಷೇತ್ರಗಳಲ್ಲಿ ಸಮಸ್ಯೆ ಇಲ್ಲ. ಉಳಿದ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಬೇರೆಯವರ ಹಸ್ತಕ್ಷೇಪ ಸಮಸ್ಯೆಯನ್ನು ಜಟಿಲ ಮಾಡಿದೆ. ಹೀಗಾಗಿ ಒಂದೆರಡು ಕ್ಷೇತ್ರಗಳಲ್ಲಿ ಬದಲಾವಣೆಯಾದರೂ ಅಚ್ಚರಿ ಪಡಬೇಕಿಲ್ಲ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಅಥಣಿ ಕ್ಷೇತ್ರದ ವಿಷಯ ತೆಗೆದುಕೊಂಡರೆ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಆಪ್ತನ ಟಿಕೆಟ್‌ಗಾಗಿ ನಿರೀಕ್ಷೆ ಮಾಡದಷ್ಟು ಜಿದ್ದಿಗೆ ಬಿದ್ದಿದ್ದಾರೆ. ನಿಪ್ಪಾಣಿ ಕ್ಷೇತ್ರದಲ್ಲಿ ಸಹ ಬೇರೆಯವರ ಹಸ್ತಕ್ಷೇಪದಿಂದ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಬೇಸರಗೊಂಡು ಸವಾಲಿನ ತಿರುಗೇಟು ನೀಡಿದ್ದಾರೆ. ಇನ್ನೊಂದು ಕಡೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ತೀವ್ರ ಸ್ವರೂಪದಲ್ಲಿ ಜಾತಿ ಆಧಾರದ ಮೇಲೆ ಟಿಕೆಟ್‌ಗೆ ಬೇಡಿಕೆ ಎದ್ದಿದೆ. ಸಹಜವಾಗಿಯೇ ಇದು ನಾಯಕರ- ಕಾರ್ಯಕರ್ತರ ನಡುವೆ ಅಂತರ ಹಾಗೂ ಮನಸ್ತಾಪ ಹೆಚ್ಚಾಗಲು ಕಾರಣವಾಗಿದೆ ಎಂದರೆ ತಪ್ಪಿಲ್ಲ.

Advertisement

ಅಥಣಿಯಲ್ಲಿ ರಮೇಶ್‌ ಜಾರಕಿ ಹೊಳಿ ತಮ್ಮ ಆಪ್ತ ಹಾಗೂ ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಪರ ಟಿಕೆಟ್‌ಗೆ ಪಟ್ಟು ಹಿಡಿದಿದ್ದರೆ ಬೆಳಗಾವಿ ಉತ್ತರದಲ್ಲಿ ಲಿಂಗಾಯತ ಸಮಾಜದ ಮುಖಂಡರು ಮತ್ತು ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ಮರಾಠಾ ಸಮುದಾಯದವರು ಬೇಡಿಕೆ ಇಟ್ಟಿದ್ದಾರೆ. ಇದು ಪಕ್ಷದಲ್ಲಿ ಆಂತರಿಕ ಬೇಗುದಿ ಹೆಚ್ಚಾಗಲು ಕಾರಣವಾಗಿದೆ.

ಅಥಣಿ ಕ್ಷೇತ್ರದ ಜತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಅವರ ಹಸ್ತ ಕ್ಷೇಪ ಪಕ್ಷದ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ ಯಾರೂ ಧೈರ್ಯದಿಂದ ಮುಂದೆ ಬಂದು ಇದನ್ನು ಹೇಳುತ್ತಿಲ್ಲ. ಈ ಕ್ಷೇತ್ರ ದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಧನಂಜಯ ಜಾಧವ ಪ್ರಬಲ ಆಕಾಂಕ್ಷಿಗಳು. ಇವರಿಬ್ಬರ ಮಧ್ಯೆ ರಮೇಶ ಜಾರಕಿಹೊಳಿ ತಮ್ಮ ಆಪ್ತ ನಾಗೇಶ ಮುನ್ನೋಳಕರ ಅವರ ಹೆಸರನ್ನು ತಂದಿರುವುದು ಉಳಿದವರಿಗೆ ಸರಿ ಬಂದಿಲ್ಲ. ಇದು ಆಂತರಿಕವಾಗಿ ಸಮಸ್ಯೆ ತಂದಿಟ್ಟಿದೆ. ಮುಂದೆ ಇದು ಚುನಾವಣೆ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ.

ಇನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರದ ಪತನ ಮತ್ತು ಬಿಜೆಪಿ ಸರಕಾರದ ರಚನೆಗೆ ಪ್ರಮುಖ ಕಾರಣರಾಗಿದ್ದ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲಿ ಸಹ ಬೇರೆಯವರ ಹಸ್ತಕ್ಷೇಪ ಜೋರಾಗಿಯೇ ನಡೆದಿದೆ. ಪಕ್ಷದೊಳಗಿನ ಕೆಲವು ಪ್ರಭಾವಿ ನಾಯಕರು ಲಿಂಗಾಯತ ಸಮಾಜದವರನ್ನು ರಮೇಶ್‌ಜಾರಕಿಹೊಳಿ ವಿರುದ್ಧ ಎತ್ತಿ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಹಿರಂಗವಾಗಿ ಜಾರಕಿಹೊಳಿ ವಿರುದ್ಧ ಟೀಕಾ ಪ್ರಹಾರ ಮೂಲಕ ಅವರ ಟಿಕೆಟ್‌ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಈ ಎಲ್ಲ ಮನಃಸ್ತಾಪ, ಭಿನ್ನಮತದ ಮಧ್ಯೆ ಟಿಕೆಟ್‌ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜಿಲ್ಲೆಗೆ ಭೇಟಿ ನೀಡಿ ಯಾರಿಗೆ ಟಿಕೆಟ್‌ ನೀಡಬೇಕು. ಯಾರಿಗೆ ಗೆಲ್ಲುವ ಸಾಮ ರ್ಥ್ಯ ಇದೆ ಎಂಬುದರ ಬಗ್ಗೆ ಅಭಿಪ್ರಾಯ ಪಡೆದಿದ್ದಾರೆ. ಆದರೆ ಕೇಂದ್ರ ಸಚಿವರ ಈ ಅಭಿ ಪ್ರಾಯ ಸಂಗ್ರಹ ಪಕ್ಷದೊಳಗಿನ ಬೇಗುದಿ ಕಡಿಮೆ ಮಾಡಲಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next