Advertisement

ಬೇಡಿಕೆ ಈಡೇರಿಕೆಗೆ “ಅತಿಥಿ’ಗಳ ಬೆಳಗಾವಿ ಚಲೋ

06:00 AM Nov 15, 2018 | Team Udayavani |

ಕೊಪ್ಪಳ: ರಾಜ್ಯಾದ್ಯಂತ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 12 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯ ವೇದನೆ ಅರಣ್ಯ ರೋದನವಾಗಿದೆ. ಸರ್ಕಾರದ ನಡೆಗೆ ಬೇಸತ್ತು ಪ್ರಸಕ್ತ ಚಳಿಗಾಲ ಅಧಿವೇಶನದ ವೇಳೆ ಬೆಳಗಾವಿ ಚಲೋ ನಡೆಸಲು ಇವರು ಸಿದ್ಧರಾಗಿದ್ದಾರೆ.

Advertisement

ಹಿಂದಿನ ಯಾವುದೇ ಸರ್ಕಾರಗಳು ಅತಿಥಿ ಉಪನ್ಯಾಸಕರ ನೋವು ಆಲಿಸಿಲ್ಲ. ಸೇವೆ ಕಾಯಂ ಮಾಡಿಕೊಳ್ಳಲು ಕಾನೂನು ತೊಡಕಿದೆ ಎನ್ನುವ ಮಾತು ಹೇಳಿಕೊಂಡೇ ಎಲ್ಲ ಸರ್ಕಾರಗಳೂ ದಿನಗಳನ್ನು ಮುಂದೂಡುತ್ತ ಬಂದಿವೆ. ಸರ್ಕಾರಿ ಕಾಲೇಜುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉಪನ್ಯಾಸಕರ ಜೀವನವೇ ಅತಂತ್ರವಾಗಿದೆ. ಸರ್ಕಾರವೂ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಇತ್ತ ಸಾವಿರಾರು ಉಪನ್ಯಾಸಕರ ವಯೋಮಿತಿಯೂ ಮುಗಿದು ಹೋಗಿದೆ. ಸರ್ಕಾರದ ಮೇಲೆ ನಂಬಿಕೆಯಿಡುತ್ತಲೇ ನಿರಂತರ ಹೋರಾಟ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಇಂದಿಗೂ ಸೇವಾ ಭದ್ರತೆಯ ಅಭದ್ರತೆ ಕಾಡುತ್ತಿದೆ.

ರಾಜ್ಯದಲ್ಲಿ ನೇಮಕಾತಿ ಹೊಂದಿದ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಬಹುಪಾಲಿದೆ. ಅದೆಷ್ಟೋ ಕಾಲೇಜುಗಳಲ್ಲಿ ಇವರ ಸೇವೆ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳುವ ನಮಗೆ ಸೇವಾ ಭದ್ರತೆ ಕೊಡಿ ಎಂದು ಅತಿಥಿ ಉಪನ್ಯಾಸಕರು ನಿರಂತರ ಸರ್ಕಾರದ ಮುಂದೆ ಮಂಡಿಯೂರಿ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಇವರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಜೆಡಿಎಸ್‌ ಪ್ರಣಾಳಿಕೆಯಲ್ಲಿ ಭರವಸೆ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಕುರಿತು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಭರವಸೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ರಚನೆಯಾಗಿ ಐದು ತಿಂಗಳು ಪೂರೈಸುತ್ತಾ ಬಂದರೂ ಸ್ಪಷ್ಟ ಸಂದೇಶ ಮುಖ್ಯಮಂತ್ರಿ ಅವರಿಂದ ಸಿಗುತ್ತಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳಿ ಎಂದು ಉಪನ್ಯಾಸಕರು ಸಿಎಂ ಮುಂದೆ ಗೋಗರೆದಾಗ ಭರವಸೆಯ ಮಾತನ್ನಾಡಿದ್ದಾರೆ. ಆದರೆ, ಇಲಾಖೆಯ ಹಂತದಲ್ಲಿ ಯಾವುದೇ ಸಭೆಗಳು ನಡೆದಿಲ್ಲ. ನಾವು ಹೊರಗಡೆ ಕೂಲಿ ಮಾಡಿದರೆ ತಿಂಗಳಿಗೆ 15 ಸಾವಿರದಷ್ಟು ಹಣ ಸಿಗುತ್ತೆ. ಆದರೆ, ಉಪನ್ಯಾಸಕ ಸ್ಥಾನದ ಹುದ್ದೆ ಅದಕ್ಕಿಂತಲೂ ಕಡೆಯಾಗಿದೆ. ಹೆಸರಿಗಷ್ಟೇ ಗೌರವ, ಆದರೆ ಉಪಜೀವನ ನಡೆಸೋದು ಕಷ್ಟವಾಗಿದೆ ಎನ್ನುತ್ತಿದ್ದಾರೆ ಅತಿಥಿ ಉಪನ್ಯಾಸಕರು.

ಯುಜಿಸಿ ನಿಯಮವೂ ಪಾಲನೆಯಿಲ್ಲ:
ರಾಜ್ಯ ಸರ್ಕಾರ ಯುಜಿಸಿ ನಿಯಮಾವಳಿಯನ್ನೂ ಪಾಲನೆ ಮಾಡುತ್ತಿಲ್ಲ. ಒಂದು ತರಗತಿಗೆ ಸಾವಿರ ರೂ.ವೇತನ ನೀಡಬೇಕು. ಕನಿಷ್ಟ ಒಂದು ತಿಂಗಳಿಗೆ ಅತಿಥಿ ಉಪನ್ಯಾಸಕನಿಗೆ 25 ಸಾವಿರ ರೂ. ವೇತನ ನೀಡಬೇಕೆಂದು ಯುಜಿಸಿ ನಿಯಮವೇ ಹೇಳುತ್ತಿದೆ. ಆದರೆ, ಸರ್ಕಾರ ಎಂಎ, ಎಂಫಿಲ್‌ ಪದವಿ ಪೂರೈಸಿದವರಿಗೆ 11,500 ರೂ.ಹಾಗೂ ಪಿಎಚ್‌ಡಿ, ನೆಟ್‌, ಸ್ಲೆಟ್‌ ಆದವರಿಗೆ 13 ಸಾವಿರ ರೂ.ನೀಡುತ್ತಿದೆ.

Advertisement

ನಾಲ್ಕು ತಿಂಗಳಿಂದ ವೇತನವಿಲ್ಲ
ಅತಿಥಿ ಉಪನ್ಯಾಸಕರನ್ನು ಸರ್ಕಾರ ಸೇವೆಗೆ ತೆಗೆದುಕೊಂಡು ನಾಲ್ಕು ತಿಂಗಳು ಗತಿಸಿವೆ. ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ. ಪ್ರಾದೇಶಿಕ ಕಚೇರಿಗಳ ಹಂತದಲ್ಲಿ ಇನ್ನೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮೋದನೆಯೇ ದೊರೆತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ವೇತನವಿಲ್ಲದೇ ಉಪನ್ಯಾಸಕರು ಅವರಿವರ ಬಳಿ ಸಾಲ ಮಾಡಿ ಜೀವನ ನಡೆಸುವ ದು:ಸ್ಥಿತಿ ಬಂದೊದಗಿದೆ. ಇದಕ್ಕೆ ಬೇಸತ್ತು ಚಳಿಗಾಲದ ಅ ಧಿವೇಶನದ ವೇಳೆ ಬೆಳಗಾವಿ ಚಲೋ ನಡೆಸಿ ಮೈತ್ರಿ ಸರ್ಕಾರ ಎಚ್ಚರಿಸುವ ಕೆಲಸಕ್ಕೆ ಅಣಿಯಾಗುತ್ತಿದ್ದಾರೆ.

ಹಲವು ವರ್ಷದಿಂದ ನಾವು ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮಗೆ ಸೇವಾ ಭದ್ರತೆ ಕೊಡುತ್ತೇವೆ ಎಂದು ಮೂರೂ ಪಕ್ಷದವರು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದೇವೆ. ಸರ್ಕಾರ ಅಸ್ತಿತ್ವಕ್ಕೆ ಬಂದು 4 ತಿಂಗಳಾಗಿದ್ದರೂ ಭರವಸೆ ಈಡೇರುತ್ತಿಲ್ಲ. ಇದರಿಂದ ಬೇಸತ್ತು ಬೆಳಗಾವಿ ಚಲೋ ನಡೆಸಬೇಕೆಂದಿದ್ದೇವೆ.
– ಡಾ.ಎಚ್‌. ಸೋಮಶೇಖರ ಶಿವಮೊಗ್ಗಿ, ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ.

– ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next