ಬೆಂಗಳೂರು/ಬೆಳಗಾವಿ/ವಿಜಯಪುರ: ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿರುವ ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ಸಂಬಂಧ ಕರ್ನಾಟಕ ಸರಕಾರ ಸರ್ವಪ್ರಯತ್ನಗಳನ್ನು ನಡೆಸುತ್ತಿದ್ದರೆ, ಅತ್ತ ಮಹಾರಾಷ್ಟ್ರ ಸುಖಾಸುಮ್ಮನೆ ವಿವಾದವನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ.
ನ. 30ರಂದು ಸುಪ್ರೀಂ ಕೋರ್ಟ್ನಲ್ಲಿ ಬೆಳಗಾವಿ ಗಡಿ ವಿವಾದ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಕರ್ನಾಟಕ ಸರಕಾರ ಸಮರ್ಥ ವಾದ ಮಂಡನೆಗೆ ಸಜ್ಜಾಗಿದೆ. ಈ ಮಧ್ಯೆ ಡಿ. 3ರಂದು ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಬರಲು ಸಿದ್ಧತೆ ನಡೆಸಿದ್ದು, ಇಲ್ಲಿನ ಎಂಇಎಸ್ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.
ಬೆಳಗಾವಿ ಗಡಿವಿವಾದದ ಜತೆ ಜತೆಗೆ ಎರಡೂ ರಾಜ್ಯಗಳ ನಡುವೆ ಹಲವಾರು ವರ್ಷಗಳಿಂದ ಶಾಂತಿ ನೆಲೆಸಿದೆ. ಈಗ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಇಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರೊಂದಿಗೆ ಸಭೆ ನಡೆಸಲು ಮುಂದಾಗಿರುವುದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಸದ್ಯ ಮಹಾ ಸರಕಾರವು ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರನ್ನು ಗಡಿ ವಿವಾದ ಸಂಬಂಧ ಕಾನೂನು ತಂಡದ ಸಮನ್ವಯಕ್ಕಾಗಿ ನೇಮಕ ಮಾಡಿದೆ. ಹೀಗಾಗಿ ಇವರಿಬ್ಬರು ಬೆಳಗಾವಿಗೆ ಎಂಇಎಸ್ ನಾಯಕರು, ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸುವುದಕ್ಕಾಗಿ ಬರಲಿದ್ದಾರೆ.
Related Articles
ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿ ಕುರಿತಂತೆ ಬುಧವಾರ ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟಿಸಲಿದೆ. ಇದು ಮೆಂಟೈನಬಿಲಿಟಿ ಅರ್ಜಿಯಾಗಿದ್ದು, ಇದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಸುಪ್ರೀಂ ತೀರ್ಮಾನಿಸಲಿದೆ. ವಿಚಾರಣೆಗೆ ಕೈಗೆತ್ತಿಕೊಂಡರೆ ಸಮರ್ಥ ವಾದ ಮಂಡನೆಗೂ ರಾಜ್ಯ ಸರಕಾರ ತಯಾರಾಗಿದೆ. ಬೆಳಗಾವಿ ಗಡಿ ವಿವಾದದ ಬಗ್ಗೆ ತಜ್ಞರ ಜತೆಗೆ ಚರ್ಚಿಸಿರುವ ಬೊಮ್ಮಾಯಿ ಅವರು ಮಂಗಳವಾರ ದಿಲ್ಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿರುವ ಮುಕುಲ್ ರೋಹಟಗಿ ಅವರನ್ನು ಭೇಟಿಯಾಗಲಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಗಡಿ ಮತ್ತು ನದಿ ರಕ್ಷಣ ಆಯೋಗದ ಅಧ್ಯಕ್ಷ ನ್ಯಾ| ಶಿವರಾಜ ವಿ. ಪಾಟೀಲ್ ನೇತೃತ್ವದಲ್ಲಿ ಸಭೆ ನಡೆದಿದೆ. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತು ಹಿರಿಯ ವಕೀಲರ ಜತೆಯೂ ಸಿಎಂ ಚರ್ಚಿಸಿದ್ದಾರೆ.
ಮಹಾ, ಕರ್ನಾಟಕಕ್ಕೆ ಮನವಿಗೆ ಸಿದ್ಧತೆ
ಮಹಾರಾಷ್ಟ್ರ ಸರಕಾರದ ಮಲತಾಯಿ ಧೋರಣೆ ವಿರುದ್ಧ ಸಿಡಿದೆದ್ದಿರುವ ಗಡಿನಾಡ ಕನ್ನಡಿಗರು ಕರ್ನಾಟಕಕ್ಕೆ ಸೇರುತ್ತೇವೆ ಎಂಬ ಹೋರಾಟ ತೀವ್ರಗೊಳಿಸಿದ್ದಾರೆ. ಮಹಾರಾಷ್ಟ್ರ ಸರಕಾರದ ಸಹವಾಸ ಸಾಕು, ಮಾತೃಭಾಷಿಕ ರಾಜ್ಯ ಕರ್ನಾಟಕವನ್ನು ಸೇರಲು ಅನುಮತಿ ಬೇಕು ಎಂದು ಘೋಷಣೆ ಕೂಗಿದ್ದಾರೆ. ತಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸುವ ಅಭಿಯಾನ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನಿಂದ ಹತ್ತಿಕೊಂಡ ಗಡಿನಾಡ ಕನ್ನಡಿಗರ ಕಿಚ್ಚು ಈಗ
ಸೊಲ್ಲಾಪುರ ಜಿಲ್ಲೆಗೂ ವ್ಯಾಪಿಸಿದೆ. ಸೋಮವಾರ ಕನ್ನಡ ಧ್ವಜ ಹಿಡಿದು ಜತ್ ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಪ್ರತಿಭಟನ ಮೆರವಣಿಗೆ ನಡೆಸಿದ ಕನ್ನಡಿಗರು, ಮಹಾರಾಷ್ಟ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ, ಕರ್ನಾಟಕ ಸರಕಾರಕ್ಕೆ ಜೈಕಾರ ಹಾಕಿದ್ದಾರೆ.
ಕರ್ನಾಟಕದ ಒಂದಿಂಚು ಭೂಮಿಯೂ ಮಹಾರಾಷ್ಟ್ರಕ್ಕೆ ಹೋಗುವು ದಿಲ್ಲ. ಮಹಾರಾಷ್ಟ್ರದ ಒಂದಿಂಚು ಭೂಮಿ ಕರ್ನಾ ಟಕಕ್ಕೆ ಬರುವು ದಿಲ್ಲ. ನಮ್ಮಲ್ಲಿ ನುರಿತ ಕಾನೂನು ತಜ್ಞರಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಪರ ಫಲಿತಾಂಶ ಬರುವ ಭರವಸೆ ಇದೆ.
-ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಗಡಿ ವಿವಾದದ ಬಗ್ಗೆ ಚರ್ಚಿಸಲು ಕರ್ನಾಟಕಕ್ಕೆ ಬರುತ್ತೇವೆ ಎಂದು ಮಹಾ ರಾಷ್ಟ್ರದ ಇಬ್ಬರು ಸಚಿವರು ಹೇಳಿ ದ್ದಾರೆ. ಕರ್ನಾಟಕ ದಲ್ಲಿ ಶಾಂತಿಯ ವಾತಾವರಣವಿದೆ. ಕನ್ನಡಿಗರು- ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಈ ಹಾಲಿನಂಥ ವಾತಾವರಣಕ್ಕೆ ವಿಷ ಹಿಂಡುವುದು ಬೇಡ.
– ಸಿ.ಎಂ. ಇಬ್ರಾಹಿಂ,
ಜೆಡಿಎಸ್ ರಾಜ್ಯಾಧ್ಯಕ್ಷ