Advertisement

ವೈಯಕ್ತಿಕ ವರ್ಚಸ್ಸು, ತಾಕತ್ತಿನ ಶ್ರೇಯಸ್ಸು: ಬೆಳಗಾವಿ ಜಿಲ್ಲೆ ರಾಜಕಾರಣದ ವಿಶಿಷ್ಟ ಗುಣ

01:03 AM Jan 21, 2023 | Team Udayavani |

ಬೆಳಗಾವಿ: ಹತ್ತು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ವಿಭಾಗ ಸದ್ಯ ಬಿಜೆಪಿ ಭದ್ರಕೋಟೆಯಾಗಿ ನಿಂತಿದೆ. ಈ ವಿಭಾಗದಲ್ಲಿ ಸತತವಾಗಿ ಗೆದ್ದ, ಅದಕ್ಕಿಂತ ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಸುದ್ದಿ ಮಾಡಿದ ನಾಯಕರಿದ್ದಾರೆ. ಸರಕಾರದ ಪತನ ಮತ್ತು ಹೊಸ ಸರಕಾರದ ರಚನೆಗೆ ಕಾರಣರಾದ ಪ್ರಭಾವಿ ನಾಯಕರಿದ್ದಾರೆ. ಪಕ್ಷಗಳ ತಣ್ತೀ – ಸಿದ್ಧಾಂತಗಳನ್ನು ಬದಿಗಿಟ್ಟು ವೈಯಕ್ತಿಕ ಪ್ರತಿಷ್ಠೆಗಾಗಿ ಕಾದಾಡಿದ ರಾಜಕಾರಣಿಗಳಿದ್ದಾರೆ.

Advertisement

2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆಯಾದ ಅನಂತರ ಬೆಳಗಾವಿ ನಗರ ಒಂದು ಮತ್ತು ಎರಡು, ಬಾಗೇವಾಡಿ ಹಾಗೂ ಉಚಗಾವ್‌ ಕ್ಷೇತ್ರಗಳು ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಾಗಿ ಬದಲಾದವು. ಕಳೆದ ಚುನಾವಣೆಯಲ್ಲಿ ಹತ್ತು ಕ್ಷೇತ್ರಗಳ ಪೈಕಿ ಬಿಜೆಪಿ ಏಳು ಕ್ಷೇತ್ರಗಳಲ್ಲಿ ಜಯ ಗಳಿಸಿದರೆ ಕಾಂಗ್ರೆಸ್‌ ಕೇವಲ ಮೂರು ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಜಾರಕಿಹೊಳಿ ಸಹೋದರರು ಬೆಳಗಾವಿ ರಾಜಕಾರಣದಲ್ಲಿ ಹಿಡಿತ ಸಾಧಿಸಿಕೊಂಡು ಬರುತ್ತಿದ್ದಾರೆ. ಅಂದರೆ ರಮೇಶ್‌ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಲ್ಲಿ ಅಗ್ರ ನಾಯಕರು. ಇಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಮರಾಠಿ-ಕನ್ನಡ ವಿಚಾರವನ್ನು ಇಟ್ಟುಕೊಂಡೂ ಚುನಾವಣೆ ಎದುರಿಸಿಕೊಂಡು ಬರಲಾಗುತ್ತಿದೆ.

ಬೆಳಗಾವಿ ಉತ್ತರ
2008ರ ಬಳಿಕ, ಅಂದರೆ ಕ್ಷೇತ್ರ ಪುನರ್‌ ವಿಂಗಡಣೆಯ ಬಳಿಕ ಉದ್ಭವವಾದ ಕ್ಷೇತ್ರವಿದು. ಮೊದಲಿನಿಂದಲೂ ಕಾಂಗ್ರೆಸ್‌ ಹಿಡಿತದಲ್ಲೇ ಇದ್ದ ಕ್ಷೇತ್ರವಿದು. ಲಿಂಗಾಯತ ಮತ್ತು ಮರಾಠಿ ಭಾಷಿಕರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಜತೆಗೆ ಜಾತಿ ಆಧಾರಿತ ಹಾಗೂ ಗಡಿ ವಿವಾದ ವಿಷಯಗಳು ಬಹಳ ಪರಿಣಾಮ ಬೀರುತ್ತಿವೆ. ಕ್ಷೇತ್ರ ಪುನರ್‌ ವಿಂಗಡಣೆಯ ಮೊದಲು ಉಚಗಾವ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕ್ಷೇತ್ರವಿತ್ತು. ಆಗ ಇಲ್ಲಿ ಪಕ್ಷೇತರರು ಹೆಚ್ಚು ಪ್ರಭಾವಶಾಲಿಗಳಾಗಿದ್ದರು. 1967ರಿಂದ 2004ರವರೆಗೆ ನಡೆದ ಒಟ್ಟು ಒಂಬತ್ತು ಚುನಾವಣೆಗಳ ಪೈಕಿ ಎಂಟರಲ್ಲಿ ಪಕ್ಷೇತರರು ಗೆದ್ದಿರುವುದೇ ಇದಕ್ಕೆ ಸಾಕ್ಷಿ. 1999ರಲ್ಲಿ ಮಾತ್ರ ಬಿಜೆಪಿ ಜಯ ಗಳಿಸಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಅನಂತರ ಇಲ್ಲಿ ಎಂಇಎಸ್‌ ಪ್ರಾಬಲ್ಯ ಸಂಪೂರ್ಣ ಕುಸಿದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ. 2018ರಲ್ಲಿ ಅನಿಲ್‌ ಬೆನಕೆ ಅವರು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ.

ಬೆಳಗಾವಿ ದಕ್ಷಿಣ
2008ರ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಹುಟ್ಟಿಕೊಂಡ ಕ್ಷೇತ್ರವಾಗಿದೆ. ಆರಂಭದಿಂದಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಾಬಲ್ಯದಲ್ಲಿತ್ತು. ಆದರೆ ಕ್ಷೇತ್ರ ಪುನರ್‌  ವಿಂಗಡಣೆ ಬಳಿಕ ಈ ಕ್ಷೇತ್ರ ಬಿಜೆಪಿಗೆ ಒಲಿಯಿತು. ಅಂದರೆ ಅಭಯ ಪಾಟೀಲ್‌ ಅವರು ಇದನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡರು. ಇದಕ್ಕೂ ಮುನ್ನ 2004ರಲ್ಲಿ ಅಭಯ ಪಾಟೀಲ ಬಾಗೇವಾಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಯಾಗಿದ್ದರು. ಈ ಕ್ಷೇತ್ರ ಮುಂದೆ ಬೆಳಗಾವಿ ಗ್ರಾಮೀಣದಲ್ಲಿ ವಿಲೀನವಾಯಿತು. 2013ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿಯಲ್ಲಿನ ಒಡಕಿನ ಲಾಭ ಎಂಇಎಸ್‌ಗೆ ದಕ್ಕಿತ್ತು. ಸಂಭಾಜಿ ಪಾಟೀಲ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕಳಪೆ ಪ್ರದರ್ಶನ ನೀಡಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಗೆ ಬರುವ ಮರಾಠಿ ಭಾಷಿಕ ಮತಗಳನ್ನು ಒಡೆಯಬೇಕೆಂಬ ಉದ್ದೇಶದಿಂದ ಎಂಇಎಸ್‌ ಸಹಿತ ಐವರು ಮರಾಠಿ ಭಾಷಿಕ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತ ಬಂದಿದ್ದಾರೆ. ಇಲ್ಲಿ ಜಾತಿಯ ಪೈಪೋಟಿ ಕಾಣುತ್ತಿಲ್ಲ. ಆದರೆ ಕನ್ನಡ ಮತ್ತು ಮರಾಠಿ ಭಾಷಿಕ ಹಾಗೂ ಗಡಿ ವಿವಾದ ಪ್ರಮುಖ ವಿಷಯವಾಗಿದೆ.

ಬೆಳಗಾವಿ ಗ್ರಾಮೀಣ
ಜಿಲ್ಲೆಯ ಅತ್ಯಂತ ಕುತೂಹಲ ಹಾಗೂ ತುರುಸಿನ ಪೈಪೋಟಿ ಕಾಣುತ್ತಿರುವ ಮತ್ತು ಇಡೀ ರಾಜ್ಯದ ಗಮನ ಸೆಳೆಯುವ ಕ್ಷೇತ್ರ. ಕ್ಷೇತ್ರ ಪುನರ್‌ ವಿಂಗಡಣೆ ಅನಂತರ ಉಚಗಾವ್‌ ಮತ್ತು ಬಾಗೇವಾಡಿ ಕ್ಷೇತ್ರಗಳನ್ನೊಳಗೊಂಡು ಅಸ್ತಿತ್ವಕ್ಕೆ ಬಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ ಗಾಳಿ ಜೋರಾಗಿದೆ. 2013ರಲ್ಲಿ ಬಿಜೆಪಿ ಗೆದ್ದಿದ್ದರೆ, 2018ರಲ್ಲಿ ಲಕ್ಷ್ಮೀ ಹೆಬ್ಟಾಳ್‌Ûಕರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2008 ಮತ್ತು 2013ರಲ್ಲಿ ಬಿಜೆಪಿ ಈ ಕ್ಷೇತ್ರ ಗೆದ್ದು ಕೊಂಡಿತ್ತು. ಕ್ಷೇತ್ರ ಪುನರ್‌ ವಿಂಗಡಣೆಗೆ ಮುನ್ನ 1967ರಿಂದ 2004ರ ವರೆಗೆ ಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎರಡು, ಪಕ್ಷೇತರರು ಮೂರು, ಜನತಾಪಕ್ಷ ಒಂದು, ಜನತಾದಳ, ಬಿಜೆಪಿ ಒಂದು ಬಾರಿ ಗೆದ್ದಿದ್ದವು.

Advertisement

ಅರಭಾವಿ
ಒಂದು ಉಪ ಚುನಾವಣೆ ಸಹಿತ 1957ರಿಂದ ಇದುವರೆಗೆ 15 ಚುನಾವಣೆ ಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಮೂವರೇ ನಾಯಕರು ಪಾರುಪತ್ಯ ಮೆರೆದಿ ದ್ದಾರೆ. ಮೊದಲು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅರಭಾವಿ ಈಗ ಬಿಜೆಪಿ ಹಿಡಿತದ ಲ್ಲಿದೆ. 1957 ಮತ್ತು 1962ರಲ್ಲಿ ಗೋಕಾಕ ನಗರ-2 ಎಂಬ ಕ್ಷೇತ್ರವಾಗಿದ್ದ ಇಲ್ಲಿ ಕಾಂಗ್ರೆಸ್‌ನಿಂದ ಆಗ ಎ.ಆರ್‌. ಪಂಚಗಾವಿ ಸತತ ಮೂರು ಬಾರಿ ಗೆದ್ದಿದ್ದರು. 1967ರಲ್ಲಿ ಇದು ಅರಭಾವಿ ಕ್ಷೇತ್ರ ಎಂದು ಮರು ನಾಮ ಕರಣವಾಯಿತು. 1967ರಿಂದ ಕಾಂಗ್ರೆಸ್‌ನ  ವಿ.ಎಸ್‌.ಕೌಜಲಗಿ  ಸತತ  ಮೂರು ಬಾರಿ ಜಯ ಶಾಲಿಯಾದರು. 1985ರಲ್ಲಿ ಜನತಾ ಪಕ್ಷದ ಆರ್‌.ಎಂ.ಪಾಟೀಲ ಚುನಾಯಿತರಾದರು. 1989ರಿಂದ ಮತ್ತೆ ಸತತ ಮೂರು ಬಾರಿ ಕಾಂಗ್ರೆಸ್‌ನ ವಿ.ಎಸ್‌.ಕೌಜಲಗಿ ಆಯ್ಕೆಯಾಗಿ ಇತಿಹಾಸ ಬರೆದರು. 2004ರಿಂದ ಇಲ್ಲಿಯವರೆಗೆ ಜಾರಕಿಹೊಳಿ ಕುಟುಂಬದ ದರ್ಬಾರ್‌ ಮುಂದುವರಿದಿದೆ. ಸತತ ಐದು ಚುನಾವಣೆಗಳನ್ನು ಎದುರಿಸಿ ಗೆದ್ದಿರುವ ಬಾಲಚಂದ್ರ ಜಾರಕಿಹೊಳಿ ದಾಖಲೆ ನಿರ್ಮಿಸಿದ್ದಾರೆ. 2004 ಹಾಗೂ 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಬಾಲಚಂದ್ರ ಅವರು 2008ರಲ್ಲಿ ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿ ಜಯಶಾಲಿಯಾದರು.

ಗೋಕಾಕ
ಜಿಲ್ಲೆಯ ಬಹಳ ಜಿದ್ದಾಜಿದ್ದಿನ ಹಾಗೂ ಕುತೂಹಲಕಾರಿ ಕ್ಷೇತ್ರ. 1999ರಿಂದ ಕಾಂಗ್ರೆಸ್‌ನ ಅದಕ್ಕಿಂತ ಮುಖ್ಯವಾಗಿ ಜಾರಕಿಹೊಳಿ ಕುಟುಂಬದ ಭದ್ರಕೋಟೆ. ಒಂದು ಉಪ ಚುನಾವಣೆ ಸಹಿತ ಇದುವರೆಗೆ 15 ಚುನಾವಣೆಗಳನ್ನು ಎದುರಿಸಿದೆ. ಇದರಲ್ಲಿ ಕಾಂಗ್ರೆಸ್‌ 11 ಬಾರಿ ಜಯ ಗಳಿಸಿದ್ದರೆ ಜನತಾ ಪಕ್ಷ ಎರಡು, ಜನತಾ ದಳ ಒಂದು ಹಾಗೂ ಬಿಜೆಪಿ ಒಂದು ಬಾರಿ ಗೆದ್ದಿದೆ. 1999ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮೊದಲ ಸಲ ವಿಧಾನಸಭೆ ಮೆಟ್ಟಿಲು ಹತ್ತಿದ್ದ ರಮೇಶ ಜಾರಕಿಹೊಳಿ ಅನಂತರ ಒಮ್ಮೆಯೂ ಹಿಂದಿರುಗಿ ನೋಡಿಲ್ಲ. ಉಪಚುನಾವಣೆ ಸಹಿತ  ಸತತ ಆರು ಬಾರಿ ಗೆದ್ದು ದಾಖಲೆ ಬರೆದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

ಖಾನಾಪುರ
ಇದುವರೆಗೆ 14 ಚುನಾವಣೆಗಳನ್ನು ಎದುರಿಸಿರುವ ಖಾನಾಪುರ ಕ್ಷೇತ್ರ 1957ರಿಂದ 2004ರವರೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಭದ್ರಕೋಟೆ. 2008ರಲ್ಲಿ ಬಿಜೆಪಿಯ ಪ್ರಹ್ಲಾದ ರೇಮಾಣಿ ಈ ಭದ್ರಕೋಟೆ ಮುರಿದರು. ಕ್ಷೇತ್ರದಲ್ಲಿ ಅಂದಿನಿಂದ ಬದಲಾವಣೆ ಪರ್ವ ಆರಂಭವಾಯಿತು. ಎಂಇಎಸ್‌ ನಂಬಿದರೆ ಭವಿಷ್ಯವಿಲ್ಲ ಎಂಬುದು ಕ್ಷೇತ್ರದ ಜನರಿಗೆ ಮನ ವರಿಕೆಯಾಯಿತು. ಇದರ ಪರಿಣಾಮವಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಿ ತನ್ನ ಖಾತೆ ತೆರೆಯಿತು. 2013ರಲ್ಲಿ ಎಂಇಎಸ್‌ನಿಂದ ಗೆದ್ದಿದ್ದ ಅರವಿಂದ ಪಾಟೀಲ ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಗ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ್‌ ಅವರು ಶಾಸಕರಾಗಿದ್ದಾರೆ.

ಕಿತ್ತೂರು
1957ರಲ್ಲಿ ಯಾವುದೇ ಚುನಾವಣೆ ನಡೆಯದೆ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ ಏಕೈಕ ಕ್ಷೇತ್ರ ಇದು. 1957 ಮತ್ತು 1962ರಲ್ಲಿ ಸಂಪಗಾವ್‌-2 ಕ್ಷೇತ್ರದ ಹೆಸರಿನಲ್ಲಿ ಚುನಾವಣೆ ನಡೆದಿತ್ತು. 1967ರಲ್ಲಿ ಈ ಕ್ಷೇತ್ರಕ್ಕೆ ಕಿತ್ತೂರು ವಿಧಾನಸಭಾ ಕ್ಷೇತ್ರವೆಂದು ಮರು ನಾಮಕರಣವಾಯಿತು. ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ 1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಎನ್‌. ನಾಗನೂರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದು ಇದುವರೆಗೆ ಅಳಿಸಲಾಗದ ದಾಖಲೆಯಾಗಿ ಉಳಿದಿದೆ. ಕ್ಷೇತ್ರದಲ್ಲಿ ಇದುವರೆಗೆ 14 ಚುನಾವಣೆಗಳು ನಡೆದಿದ್ದು ಕಾಂಗ್ರೆಸ್‌ ಏಳು, ಬಿಜೆಪಿ ಮೂರು, ಜನತಾ ಪಕ್ಷ ಮೂರು, ರಾಜ್ಯ ರೈತ ಸಂಘ ಒಂದು ಬಾರಿ ಗೆದ್ದಿವೆ. ಈಗ ಬಿಜೆಪಿಯ ದೊಡ್ಡಗೌಡರ್‌ ಮಹಾಂತೇಶ್‌ ಬಸವಂತರಾಯ್‌ ಶಾಸಕರಾಗಿದ್ದಾರೆ.

ರಾಮದುರ್ಗ
ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರದ ಮೇಲೆ ಕಠಿನ ಹಿಡಿತಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಇದೆ. ಇದುವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ ಒಂಬತ್ತು ಬಾರಿ ಜಯ ಗಳಿಸಿ ದಾಖಲೆ ಮಾಡಿದ್ದರೆ, ಬಿಜೆಪಿ ಎರಡು ಬಾರಿ, ಜನತಾಪಕ್ಷ, ಜನತಾ ದಳ ಮತ್ತು ಪಕ್ಷೇತರರು ಒಂದು ಬಾರಿ ಜಯ ಗಳಿಸಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಹದೇವಪ್ಪ ಪಟ್ಟಣ 1957ರಲ್ಲಿ ಪಕ್ಷೇತರರಾಗಿ ಮೊಟ್ಟ ಮೊದಲ ಬಾರಿಗೆ ಗೆದ್ದಿದ್ದರೆ, ಅವರ ಪತ್ನಿ ಶಾರದಾ ಪಟ್ಟಣ 1967ರಲ್ಲಿ ಕಾಂಗ್ರೆಸ್‌ನಿಂದ ಜಯ ಗಳಿಸಿದ್ದರು. ಅನಂತರ ಈ ದಂಪತಿ ಪುತ್ರರಾದ ಅಶೋಕ ಪಟ್ಟಣ ಕಾಂಗ್ರೆಸ್‌ನಿಂದ ಎರಡು ಬಾರಿ ಜಯ ಗಳಿಸಿರುವುದು ವಿಶೇಷ. ಸದ್ಯ ಇಲ್ಲಿ ರಾಮಲಿಂಗಪ್ಪ ಶಿವಲಿಂಗಪ್ಪ ಯಾದವಾಡ ಅವರು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ.

ಸವದತ್ತಿ ಯಲ್ಲಮ್ಮ
ಇತಿಹಾಸ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ಕ್ಷೇತ್ರ (ಪರಸಗಢ‌ ಕ್ಷೇತ್ರ)ದಲ್ಲಿ ಬಿಜೆಪಿ ಭದ್ರಕೋಟೆ ಇದೆ. 1962ರಿಂದ 1983ರವರೆಗೆ ಈ ಕ್ಷೇತ್ರ ಸತತವಾಗಿ ಕಾಂಗ್ರೆಸ್‌ ವಶದಲ್ಲಿತ್ತು. ಕಳೆದ ಮೂರು ಚುನಾವಣೆಗಳಿಂದ ಬಿಜೆಪಿಯ ಆನಂದ ಮಾಮನಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.  ಇದುವರೆಗೆ 14 ಚುನಾ ವಣೆಗಳನ್ನು ಕಂಡಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಆರು, ಬಿಜೆಪಿ ಮೂರು, ಪಕ್ಷೇತರರು ನಾಲ್ಕು ಮತ್ತು ಜನತಾದಳ ಒಂದು ಬಾರಿ ಜಯ ಗಳಿಸಿದೆ. ಇತ್ತೀಚೆಗೆ ಆನಂದ ಮಾಮನಿ ಅವರು ಅನಾರೋಗ್ಯದಿಂದ ನಿಧನ ಹೊಂದಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.

ಬೈಲಹೊಂಗಲ
ಇದು ಜಿಲ್ಲೆಯ ಕುತೂಹಲಕಾರಿ ಕ್ಷೇತ್ರಗಳಲ್ಲಿ ಒಂದು. 1957 ಮತ್ತು 1962ರಲ್ಲಿ ಇದು ಸಂಪಗಾವ್‌-1 ಕ್ಷೇತ್ರವಾಗಿತ್ತು. 1967ರಲ್ಲಿ ಬೈಲಹೊಂಗಲ ಕ್ಷೇತ್ರವಾಗಿ ಉದಯವಾಯಿತು. ಅಲ್ಲಿಂದ ಇದುವರೆಗೆ 14 ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ ಏಳು ಬಾರಿ, ಬಿಜೆಪಿ ಎರಡು, ಜನತಾ ಪಕ್ಷ ಒಂದು, ಜನತಾದಳ ಮೂರು, ಕೆಜೆಪಿ ಒಂದು ಬಾರಿ ಜಯ ಗಳಿಸಿವೆ. ಕೌಜಲಗಿ ಮನೆತನ ಈ ಕ್ಷೇತ್ರದ ಮೇಲೆ ಬಲವಾದ ಹಿಡಿತ ಸಾಧಿಸಿದೆ. ಈ ಕುಟುಂಬದಲ್ಲಿ ಮೊದಲು ಎಚ್‌.ವಿ.ಕೌಜಲಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೆ, ಅನಂತರ ಅವರ ಪುತ್ರ ಶಿವಾನಂದ ಕೌಜಲಗಿ ಮೂರು ಬಾರಿ ಶಾಸಕರಾದರು. ಅನಂತರ ಅವರ ಪುತ್ರ ಮಹಾಂತೇಶ ಕೌಜಲಗಿ ಈ ಸಾಧನೆ ಮಾಡಿದ್ದಾರೆ. ಈಗಲೂ ಇವರೇ ಶಾಸಕರಾಗಿದ್ದಾರೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next