Advertisement

ಮಗುವನ್ನು ರಕ್ಷಿಸಿದ್ದೇ ಜೀವನಕ್ಕೆ ಪ್ರೇರಣೆ

10:39 AM Feb 01, 2019 | Team Udayavani |

ಬೆಳಗಾವಿ: ಬಾವಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿದ್ದೇ ನನ್ನ ಜೀವನಕ್ಕೆ ಪ್ರೇರಣೆಯಾಗಿದ್ದು, ಇನ್ನು ಮುಂದೆ ಜೀವನದುದ್ದಕ್ಕೂ ಸಮಾಜ ಸೇವೆಯಲ್ಲಿ ತೊಡಗುತ್ತೇನೆ ಎಂದು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತ ವಿದ್ಯಾರ್ಥಿ ನಿಖೀಲ್‌ ಜಿತೂರಿ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ದಿನದಂದು ನಾನು ನಡೆದುಕೊಂಡು ಹೋಗುತ್ತಿದ್ದೆ. ನಗರದ ವಝೇ ಗಲ್ಲಿಯಲ್ಲಿ ಎರಡು ವರ್ಷದ ಮಗು ಬಾವಿಗೆ ಬಿದ್ದಿತ್ತು. ಆಗ ಅಲ್ಲಿ ನೆರೆದವರು ನನ್ನನ್ನು ಕರೆದು ಮಗು ಬಿದ್ದಿರುವುದನ್ನು ಗಮನಕ್ಕೆ ತಂದರು. ರಕ್ಷಿಸುವಂತೆ ಕೋರಿದರು. ಕೂಡಲೇ ನಾನು ನೇರವಾಗಿ ಬಾವಿಗೆ ಇಳಿದೆ. ಕತ್ತಲು ತುಂಬಿದ್ದ ಆ ಬಾವಿಯಲ್ಲಿ ಮಗು ತೇಲಾಡುತ್ತಿತ್ತು. ಮೊದಲು ಮಗುವನ್ನು ರಕ್ಷಿಸಿ ತೊಡೆಯ ಮೇಲೆ ಇಟ್ಟುಕೊಂಡು ಹೊಟ್ಟೆ ಹಿಸುಕಿ ನೀರು ಹೊರ ತೆಗೆದೆ. ಆಗ ಮಗುವಿನ ಪ್ರಾಣ ಉಳಿಸಿದ ಸಾರ್ಥಕ ಭಾವ ನನ್ನಲ್ಲಿ ಬಂತು ವಿನಾ ಯಾವುದೇ ಪ್ರಶಸ್ತಿ ನಿರೀಕ್ಷೆ ನನ್ನಲ್ಲಿರಲಿಲ್ಲ ಎಂದರು.

ಮಗುವಿನ ಪ್ರಾಣ ಉಳಿಸಿದ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ ಶೌರ್ಯ ವಿಭಾಗದಲ್ಲಿ ಪುರಸ್ಕಾರ ನೀಡಿದ್ದು ಸಂತಸ ತಂದಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಪುರಸ್ಕಾರ ಸ್ವೀಕರಿಸಿರುವುದರಿಂದ ಇನ್ನೂ ಹೆಚ್ಚು ಸಮಾಜ ಸೇವೆ ಮಾಡಬೇಕೆಂಬ ಪ್ರೇರಣೆ ಸಿಕ್ಕಿದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಅನೇಕರನ್ನು ಭೇಟಿಯಾಗಿದ್ದೇನೆ. ಪ್ರಧಾನಿ ಮೋದಿ ತಮ್ಮ ಹಸ್ತಾಕ್ಷರ ಮತ್ತು ನನ್ನ ಹೆಸರಿರುವ ಗಡಿಯಾರ ನೀಡಿದ್ದಾರೆ ಎಂದು ಹೇಳಿದರು.

ಸೆಂಟ್ರಲ್‌ ರೋಟರಿ ಕ್ಲಬ್‌, ವಸಂತರಾವ್‌ ಪಾಲಿಟೆಕ್ನಿಕ್‌ ಸೇರಿದಂತೆ ಅನೇಕ ಸಂಸ್ಥೆಗಳು ನಗದು ಬಹುಮಾನ, ಸತ್ಕಾರ ನೀಡಿರುವುದನ್ನು ಸ್ಮರಿಸಿದರು. ನಿಖೀಲ್‌ ತಂದೆ ದಯಾನಂದ, ತಾಯಿ ರಾಧಾ, ಕೆಎಲ್‌ಎಸ್‌ ಸಂಸ್ಥೆಯ ಚೇರಮನ್‌ ಆರ್‌.ಎಸ್‌. ಮುತಾಲಿಕದೇಸಾಯಿ, ಪ್ರಾಚಾರ್ಯ ಎಸ್‌.ಕೆ. ಅಂಬೇಕರ ಮಾತನಾಡಿದರು.

ರೈಲ್ವೆ ನಿಲ್ದಾಣದಲ್ಲಿ ಸ್ವಾಗತ
ಬೆಳಗಾವಿ:
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ನಿಖೀಲ ಜಿತೂರಿ ಅವರನ್ನು ನಗರದ ರೈಲು ನಿಲ್ದಾಣದಲ್ಲಿ ಬರಮಾಡಿಕೊಂಡು ಸ್ವಾಗತಿಸಲಾಯಿತು. ಎಸ್‌ಎಸ್‌ಕೆ ಸಮಾಜ, ವಸಂತರಾವ್‌ ಪೋತದಾರ ಪಾಲಿಟೆಕ್ನಿಕ್‌ ಸಿಬ್ಬಂದಿ ಹಾಗೂ ವಿವಿಧ ಸಾಮಾಜಿಕ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಕಾರ್ಯಕರ್ತರು ನಿಖೀಲ್‌ಗೆ ಪುಷ್ಪಗುಚ್ಛ ನೀಡಿ, ಹಾರ ಹಾಕಿ ಸ್ವಾಗತಿಸಿಕೊಂಡರು. ವಸಂತರಾವ್‌ ಪೋತದಾರ ಪಾಲಿಟೆಕ್ನಿಕ್‌ ಪ್ರಾಚಾರ್ಯ ಎಸ್‌.ಕೆ. ಅಂಬೇಕರ, ಎಚ್.ಡಿ. ಕಾಟವಾ, ಪ್ರಭಾಕರ ಚೌಧರಿ, ಗಿರೀಶ ಧೋಂಗಡಿ, ರಮೇಶ ಧೋಂಗಡಿ, ಜಿ.ಡಿ. ಕಾಟವಾ, ಅರುಣ ಕೋಸಣದಾರ, ರಾಧಾ ಜಿತೂರಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next