Advertisement

Belagavi ಭೀಕರ ಅಪಘಾತ: ಧಾರವಾಡದ ಲಂಗೋಟಿ ಓಣಿಯಲ್ಲಿ ಸ್ಮಶಾನ ಮೌನ

11:06 PM Feb 22, 2024 | Team Udayavani |

ಧಾರವಾಡ : ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ತಾಯಿ-ಮಕ್ಕಳನ್ನೇ ಬಲಿ ತೆಗೆದುಕೊಂಡಿದ್ದು, ಹೀಗಾಗಿ ನಗರದ ತಡಕೋಡ (ಲಂಗೋಟಿ) ಓಣಿಯಲ್ಲಿ ಸ್ಮಶಾನ ಮೌನವೇ ಆವರಿಸಿದೆ.

Advertisement

ಶಬಾನಾ (38) ಮಕ್ಕಳಾದ ಸಾನಿಯಾ (18), ಉಮ್ರಾ (16) ಮೃತಪಟ್ಟವರು. ಅಂಜುಮನ್ ಇಸ್ಲಾಂ ಸಂಸ್ಥೆಯ ಪಿಯುಸಿ ವಿಭಾಗದಲ್ಲಿ ಸಾನಿಯಾ, ಎಸ್‌ಎಸ್‌ಎಲ್‌ಸಿಯಲ್ಲಿ ಉಮ್ರಾ ಓದುತ್ತಿದ್ದಲ್ಲದೇ ಪರೀಕ್ಷೆಯ ತಯಾರಿಯಲ್ಲಿದ್ದರು. ಆದರೆ ಶಬಾನಾಳ ಪತಿಯಾದ ಮಹಮ್ಮದ ಅಸ್ಲಂನ ಚಿಕ್ಕಮ್ಮಳ ಮಗಳ ಮದುವೆಗೆ ತೆರಳಿದ್ದು, ಈ ವೇಳೆ ನಡೆದ ಅಪಘಾತದಲ್ಲಿ ತಾಯಿ-ಮಕ್ಕಳ ಜೀವವೇ ಹೋಗಿದೆ. ಶಬಾನಾಗೆ ಇನ್ನೂ ಇಬ್ಬರು
ಗಂಡು ಮಕ್ಕಳಿದ್ದು, ಅವರಿಬ್ಬರೂ ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಣ್ಣ-ತಮ್ಮ ಹೋಗಿರಲಿಲ್ಲ
ಮಹಮ್ಮದ್ ಅಸ್ಲಾಂ ಲಂಗೋಟಿ ಹಾಗೂ ವಾಸೀಮ್ ಲಂಗೋಟಿ ಅಣ್ಣ-ತಮ್ಮಂದಿರಾಗಿದ್ದು, ಇಬ್ಬರೂ ಲಾರಿ ಚಾಲಕರು. ಹೀಗಾಗಿ ಕೆಲಸವಿದ್ದ ಕಾರಣ ಚಿಕ್ಕಮ್ಮಳ ಮಗಳ ಮದುವೆಗೆ ಹೋಗಲು ಆಗಿರಲಿಲ್ಲ. ಈ ಕಾರಣದಿಂದ ಇಬ್ಬರು ತಮ್ಮ ಪತ್ನಿ-ಮಕ್ಕಳನ್ನು
ಮದುವೆಯಲ್ಲಿ ಪಾಲ್ಗೊಳ್ಳಲು ಕಿತ್ತೂರಿಗೆ ಕಳುಹಿಸಿ, ಕೊಟ್ಟಿದ್ದಾರೆ. ಕಿತ್ತೂರಿನಲ್ಲಿ ಬುಧವಾರ ಮದುವೆ ಮುಗಿಸಿ ಬಂದಿದ್ದ ಕುಟುಂಬಗಳು, ಮತ್ತೆ ಗುರುವಾರ ಬೆಳಿಗ್ಗೆ ಬೀಡಿಯಲ್ಲಿ ನಿಗದಿಯಾಗಿದ್ದ ಆರಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದೆ.

ಈ ಹಿಂದಿನ ದಿನವೂ ಮದುವೆಗೂ ಧಾರವಾಡದಿಂದ ಬಸ್ಸಿನಲ್ಲಿಯೇ ಹೋಗಿ ಬಂದಿದ್ದ ಕುಟುಂಬವು, ಆರಕ್ಷತೆಗೂ ಕಿತ್ತೂರಿನವರೆಗೆ ಬಸ್ಸಿನಲ್ಲಿಯೇ ತೆರಳಿದೆ. ಆ ಬಳಿಕ ಕಿತ್ತೂರಿನಿಂದ ಬೀಡಿ ಗ್ರಾಮದವರೆಗೆ ತೆರಳಲು ಸಂಬಂಧಿಕರ ಕಾರು ಹತ್ತಿದ್ದು, ಈ ಕಾರೇ ಜವರಾಯನಂತೆ ಈ ಮೂವರ ಬಲಿ ಪಡೆದುಕೊಂಡಿದೆ. ಇದಲ್ಲದೇ ವಾಸೀಮ್‌ನ ಪತ್ನಿ ಸೋಫಿಯಾ ಹಾಗೂ ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆಯಷ್ಟೇ ಆರಕ್ಷತೆಗೆಂದು ಹೋಗಿದ್ದವರ ಸಾವಿನ ಸುದ್ದಿ ಆಘಾತದಂತೆ ತಲುಪಿಸಿದ್ದು, ಇಡೀ ತಡಕೋಡ ಓಣಿಯಲ್ಲಿ ಸ್ಮಶಾನ ಮೌನವೇ ಆವರಿಸುವಂತೆ ಮಾಡಿದೆ. ಎಲ್ಲರೂ ತಾಯಿ-ಮಕ್ಕಳ ಸಾವಿನ ಸುದ್ದಿಗೆ ಎಲ್ಲರೂ ಮರುಗಿದ್ದು ಕಂಡು ಬಂದರೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ತಡರಾತ್ರಿವರೆಗೂ ಮೃತರ ಪಾರ್ಥಿವ ಶರೀರಗಳು ತಲುಪಲಿದ್ದು, ಶುಕ್ರವಾರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next