Advertisement

ಗಡಿ ವಿಚಾರಣೆ: ಬೆಳಗಾವಿಯಲ್ಲಿ ಹೈ ಅಲರ್ಟ್‌; ಸಮರ್ಥ ವಾದ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧತೆ

09:30 PM Nov 29, 2022 | Team Udayavani |

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ವಿಷಯ ಈಗ ತಾರ್ಕಿಕ ಹಂತಕ್ಕೆ ಬಂದಿದೆ. ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

ರಾಜ್ಯದ ಗಡಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಡಿಜಿಪಿ ಅಲೋಕಕುಮಾರ ಅವರು ಮಂಗಳವಾರ ನಿಪ್ಪಾಣಿ ಗಡಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಜತೆ ಸಭೆ ನಡೆಸಿದರು. ಈ ಸಭೆಯಲ್ಲಿ ಮಹಾರಾಷ್ಟ್ರದ ಉನ್ನತ ಪೊಲೀಸ್‌ ಅಧಿಕಾರಿಗಳು ಸಹ ಭಾಗವಹಿಸಿದ್ದರು.

ಗಡಿ ವಿವಾದ ವಿಷಯ ಮುಂದಿಟ್ಟುಕೊಂಡು ಬೆಳಗಾವಿ ಸೇರಿ ಕರ್ನಾಟಕದ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004ರಲ್ಲಿ ಮಹಾರಾಷ್ಟ್ರ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈಗ ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದ್ದು ಸಹಜವಾಗಿಯೇ ಎಲ್ಲರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಎಲ್ಲರ ಗಮನ ಸರ್ವೋಚ್ಚ ನ್ಯಾಯಾಲಯದ ಮೇಲೆ ನೆಟ್ಟಿದೆ. ಕರ್ನಾಟಕ ಸರಕಾರ ಸಹ ಸಮರ್ಥವಾಗಿ ವಾದ ಮಂಡಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಇದರ ನಡುವೆ ಗಡಿ ಭಾಗದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಾರದು ಎಂಬ ಉದ್ದೇಶದಿಂದ ಸರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಹೆಚ್ಚಿನ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ.

ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಮಹಾರಾಷ್ಟ್ರದ ಜತ್‌ದಲ್ಲಿರುವ ಕನ್ನಡಿಗರು, ನಮ್ಮ ಪರವಾಗಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇವೆ. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಬೆಳಗಾವಿಯಲ್ಲಿ ಸಭೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

ಕಳೆದ 50 ವರ್ಷಗಳಿಂದ ನಮಗೆ ಮಹಾರಾಷ್ಟ್ರದಿಂದ ಕೇವಲ ಭರವಸೆಗಳು ಸಿಕ್ಕಿವೆ. ಮೈಸಾಳ್‌ ನೀರಾವರಿ ಯೋಜನೆ ಜಾರಿಮಾಡಿಲ್ಲ. ರಸ್ತೆಗಳು ಹಾಳಾಗಿವೆ. 200 ಮಕ್ಕಳಿಗೆ ಒಬ್ಬ ಕನ್ನಡ ಶಿಕ್ಷಕರು ಮಾತ್ರ ಇದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾವು ಕರ್ನಾಟಕಕ್ಕೆ ಬರಲು ಸಿದ್ಧ ಎಂದು ಹೇಳಿರುವುದು ಈ ಹಂತದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಚಿವರನ್ನು ಕಳುಹಿಸಿ: ಏತನ್ಮಧ್ಯೆ ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರು ಡಿಸೆಂಬರ್‌ 3ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಹಿರಿಯ ಸಚಿವರನ್ನು ಕೂಡಲೇ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂ ದಕ್ಷಿಣ ಸೊಲ್ಲಾಪುರ ಪ್ರದೇಶಗಳಿಗೆ ಕಳಿಸಬೇಕೆಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಭಾಗದಲ್ಲಿ ಸೌಹಾರ್ದ ವಾತಾವರಣವನ್ನು ಹದಗೆಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರ ಬೆಂಬಲಿತ ಶಕ್ತಿಗಳು ನಡೆಸುತ್ತಿವೆ ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದ ಸಚಿವರು ಬೆಳಗಾವಿಯಲ್ಲಿ ಸಭೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು. ಒಂದು ವೇಳೆ ಸಭೆ ನಡೆಸಿದ್ದೇ ಆದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.

ಮಹಾ ಸಚಿವರಿಗೆ ಬೆಳಗಾವಿ ಪ್ರವೇಶ ಬೇಡ
ಬೆಳಗಾವಿ: ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದನ್ನು ತಡೆ ಹಿಡಿಯಬೇಕು. ಅಧಿ ವೇಶನ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಹಾ ಮೇಳಾವ್‌ಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರಲು ಅನುಮತಿ ನೀಡಬಾರದು. ಮಹಾ ಮೇಳಾವ್‌ಗೆ ಅನುಮತಿ ನೀಡಬಾರದು. ಒಂದು ವೇಳೆ ಮೇಳಾವ್‌ಗೆ ಅನುಮತಿ ನೀಡಿದರೆ ಅದಕ್ಕೆ ಪ್ರತಿಯಾಗಿ ನಾವು ಒನಕೆ ಚಳವಳಿ ನಡೆಸುತ್ತೇವೆ. ಕನ್ನಡ ದ್ರೋಹದ ಕೆಲಸ ಮಾಡಲು ಜಿಲ್ಲಾಡಳಿತ ಮೇಳಾವ್‌ಗೆ ಅನುಮತಿ ಕೊಟ್ಟರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಾಂಗ್ಲಿ, ಜತ್ತ ಜನರ ಮನವೊಲಿಸುವುದು ಸೂಕ್ತ
ದೇವನಹಳ್ಳಿ: ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದು ಮಾತನಾಡುವುದಕ್ಕಿಂತ ಮಹಾರಾಷ್ಟ್ರದ ಸಾಂಗ್ಲಿ, ಜತ್ತ ತಾಲೂಕಿನ ಜನರ ಮನವೊಲಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದ ಸಚಿವರು ಬೆಳಗಾವಿಯಲ್ಲಿನ ಮರಾಠ ಸಂಘಟನೆಗಳೊಂದಿಗೆ ಮಾತನಾಡಲು ಆಗಮಿಸುವುದಕ್ಕಿಂತ ಜತ್ತ ಹಾಗೂ ಸಾಂಗ್ಲಿ ತಾಲೂಕಿನ ಜನರ ಮನವೊಲಿಸಲು ಹೋಗಬೇಕು. ಆ ಭಾಗದ ಜನರು ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ರಾಜಕಾರಣಿಗಳು ತಾವು ಬೆಳೆಯಲು ಈ ರೀತಿ ಕುತಂತ್ರ ಮಾಡಿ ಗಡಿ ಬಗ್ಗೆ ಪ್ರಚೋದನೆ ಮಾಡಿ, ಮರಾಠಿ ಹಾಗೂ ಕನ್ನಡಿಗರ ಮಧ್ಯದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಈಗ ಇದನ್ನು ಕರ್ನಾಟಕ-ಮಹಾಷ್ಟ್ರದಲ್ಲಿನ ಸಾಮಾನ್ಯ ಮರಾಠಿಗರು ಹಾಗೂ ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ. ಅವರಲ್ಲಿ ಸೌಹಾರ್ದ ವಾತಾವರಣ ಇದೆ.
-ಜಗದೀಶ ಶೆಟ್ಟರ, ಮಾಜಿ ಸಿಎಂ

 

Advertisement

Udayavani is now on Telegram. Click here to join our channel and stay updated with the latest news.

Next