ಬೆಳಗಾವಿ: ಇದು ಕೇವಲ ಭಾವಸಂಗಮದ ಸಮಾಗಮವಲ್ಲ. ಬದಲಾಗಿ ಇದೊಂದು ಕಲಬೆರಿಕೆಯಿಲ್ಲದ ಪರಿಶುದ್ಧವಾದ ಸಾಹಿತ್ಯ ಸಮ್ಮೇಳನ ಎಂದು ಹಿರಿಯ ಸಾಹಿತಿ ಎಲ್.ಎಸ್. ಶಾಸ್ತ್ರಿ ಹೇಳಿದರು.
ನಗರದ ಕೋರ್ಟ್ ಆವರಣದಲ್ಲಿರುವ ಸರಕಾರಿ ನೌಕರರ ಭವನದಲ್ಲಿ ನಡೆದ ಭಾವ ಸಂಗಮ ವಾಟ್ಸಾಪ್ ಗ್ರೂಪ್ 9ನೇ ಸರ್ವ ಸದಸ್ಯರ ಮಹಾಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕವಿಯಾದವನು ಮೊದಲು ಕಾವ್ಯದ ಲಕ್ಷಣಗಳನ್ನು ತಿಳಿದುಕೊಂಡು ಕಾವ್ಯ ರಚನೆಗೆ ತೊಡಗಿದರೆ ಅಂತಹ ಕಾವ್ಯವು ಸತ್ವಯುತವಾಗಿರುತ್ತದೆ. ಅದು ಬಹಳ ಕಾಲ ಉಳಿದುಕೊಳ್ಳುತ್ತದೆ ಎಂದು ಹೇಳಿದರು.
ನಮ್ಮ ಭಾಷೆ, ಸಾಹಿತಿ, ಸಂಸ್ಕೃತಿಗೆ ಅನ್ಯಾಯವಾದಾಗ ಲೇಖಕ ಯಾವ ಮುಲಾಜಿಗೂ ಒಳಪಡದೆ ಧ್ವನಿ ಎತ್ತಬೇಕು. ಲೇಖನಿ ಖಡ್ಗಕ್ಕಿಂತ ಹರಿತವಾದುದು ಎಂಬ ದಿಟ್ಟತನವನ್ನು ತೋರಿಸಬೇಕು. ಪ್ರಾಮಾಣಿಕವಾದ ಬದ್ಧತೆಯನ್ನು ಇರಿಸಿಕೊಂಡು ನಾವು ನಮ್ಮ ಬರಹವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾವಸಂಗಮದ ಸಂಸ್ಥಾಪಕ, ಸಂಚಾಲಕ ರಾಜೇಂದ್ರ ಪಾಟೀಲ ಮಾತನಾಡಿ, ಈ ಸಾಹಿತ್ಯಿಕ ಸಾಂಸ್ಕೃತಿಕ ವಾಟ್ಯಾಪ್ ಗುಂಪನ್ನು ಪ್ರಾರಂಭಿಸಿ 9 ವರ್ಷಗಳಾದವು. ಕೆಲವು ಘಟನೆಗಳು ಈ ಗುಂಪನ್ನು ಏಕೆ ಪ್ರಾರಂಭಿಸಿದೆನೋ ಎಂದೆನಿಸಿದರೂ ಮರುಕ್ಷಣವೇ ಕಾರ್ಯಕ್ರಮಗಳ ಚಿತ್ರ ಕಣ್ಣಮುಂದೆ ಬಂದಾಗ ನೋವು ಮರೆತುಬಿಡುತ್ತಿದ್ದೆ.ಸಂಘಟನೆ ಎಂದರೇನೆ ಹೀಗೆ ನೋವು ನಲಿವುಗಳ ಸಂಗಮ ಎಂದು ಹೇಳಿದರು.
Related Articles
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಜ್ಯೋತಿ ಬದಾಮಿ ಮಾತನಾಡಿ, ಹಲವು ವರ್ಷಗಳಿಂದ ಭಾವ ಸಂಗಮದೊಂದಿಗೆ ನಾನು ಇದ್ದೇನೆ. ದೂರದೂರದಲ್ಲಿರುವ ಸಮಾನ ಮನಸ್ಕರನ್ನು ಒಂದೆಡೆ ಕೂಡಿಸುವ ಸಂಭ್ರಮಿಸುವ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಎಲ್. ಎಸ್. ಶಾಸ್ತ್ರಿ ಹಾಗೂ ಶಾರದಾ ಶಾಸ್ತ್ರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಲ್ಲದೆ 2021ನೇ ಸಾಲಿನ ಉಮಾಶಂಕರ ಪುಸ್ತಕ ಪ್ರಶಸ್ತಿಗೆ ಸಹನಾ ಕಾಂತಬೈಲ ಹಾಗೂ 2022ನೇ ಸಾಲಿಗೆ ಶಿರೀಷ ಜೋಶಿ ಭಾಜನರಾಗಿದ್ದರು. ಪ್ರೋತ್ಸಾಹಕರ ಬಹುಮಾನ ಪಡೆದಿರುವ ಸಿದ್ಧರಾಮ ಹೊನ್ಕಲ್ ಅನಸೂಯ ಜಹಗೀರದಾರ, ನಾಗ ಎಚ್. ಹುಬ್ಳಿ, ಜಯಶ್ರೀ ದೇಶಪಾಂಡೆ, ಸೋಮಲಿಂಗ ಬೇಡರ ಅಳೂರ, ಡಾ| ಅನ್ನಪೂರ್ಣ ಹಿರೇಮಠ, ಎ.ಎನ್. ಗುಬ್ಬಿ, ರಾಧಾ ಶಾಮರಾವ್, ಎ.ಎಸ್. ಮಕಾನದಾರ, ಡಾ| ಬದ್ರಾವತಿ ರಾಮಾಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಸೂಡಿ ಮತ್ತು ಸಂಗಡಿಗರಿಂದ ಕವಿ ದಿಗ್ಗರು ರೂಪಕ, ದಾನಮ್ಮ ಅಂಗಡಿ ಅವರಿಂದ ಜಾನಪದ ನೃತ್ಯ, ಜಯಶ್ರೀ ಮಂಗಳೂರು ಅವರಿಂದ ಏಕಪಾತ್ರಾಭಿನಯ ಜರುಗಿದವು. ರಾಜೇಶ್ವರಿ ಹಿರೇಮಠ ನಿರೂಪಿಸಿದರು. ದೀಪಿಕಾ ಚಾಟೆ ಪರಿಚಯಿಸಿ ಸ್ವಾಗತಿಸಿದರು. ಸುಮಾ ಬೇವಿನಕೊಪ್ಪಮಠ ವಂದಿಸಿದರು.