ಚಿತ್ರದುರ್ಗ: ಗ್ರಾಮಕ್ಕೆ ಸಮೀಪದ ಸುಮಾರು 1 ಕಿಮೀ ದೂರದ ಚಿಕ್ಕಜಾಜೂರು ಕಾವಲ್ ಸಮೀಪದ ಜಮೀನೊಂದರಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಈ ಭಾಗದ ಗ್ರಾಮಸ್ಥರಲ್ಲಿ, ರೈತರಲ್ಲಿ, ಆತಂಕ ಮೂಡಿದೆ,
ಚಿಕ್ಕಜಾಜೂರು ಹೆಚ್ ಎಂ ದಯಾನಂದ ಅವರ ಮಗ ಹಾಗೂ ಪಕ್ಕದ ಜಮೀನಿನ ಹಗೇದ್ ಮಂಜು ದಿನನಿತ್ಯದಂತೆ ಹೊಲಕ್ಕೆ ಹೋದಾಗ ಹೊಲದ ಸಮೀಪದಲ್ಲೆ ಕರಡಿ ಕಾಣಿಸಿಕೊಂಡಿದೆ, ವಿಡಿಯೊ ಮಾಡಲು ಮುಂದಾದಾಗ ಇವರನ್ನ ಕಂಡ ಕರಡಿ ಅಲ್ಲಿಂದ ಕಾವಲ್ ಜಮೀನುಗಳ ಕಡೆ ಹೋಗಿದೆ. ಕರಡಿ ಕಂಡ ಇವರು ಭಯದಿಂದ ಹೊಲಕ್ಕೆ ಹೋಗದೆ ಅಲ್ಲಿಂದ ವಾಪಸ್ ಮನೆಕಡೆ ಹಿಂತಿರುಗಿದ್ದಾರೆ.
ಸತತ ಮಳೆಯಿಂದ ಈ ಭಾಗದ ಬಹುತೇಕ ಹೊಲಗಳಲ್ಲಿ ಮೆಕ್ಕೆಜೋಳ, ರಾಗಿ, ಮಾವು, ಅಡಿಕೆ ತೋಟಗಳು, ಸಮೃದ್ಧವಾಗಿ ಬೆಳೆದು ನಿಂತಿವೆ ಹಿಂಗಾರು ಮಳೆ ಮುಗಿಯುವ ಹಂತದಲ್ಲಿ ದೀಪಾವಳಿ ನಂತರ ಇಲ್ಲಿನ ರೈತರು ಬೆಳೆ ಕಟಾವು ಮಾಡವರು, ದಿನನಿತ್ಯ ಚಿಕ್ಕಜಾಜೂರಲ್ಲಿ ಇರುವ ಶಾಲಾ ಕಾಲೇಜುಗೆ ಇದೇ ಮಾರ್ಗವಾಗಿ ಮಕ್ಕಳು ನಡಿಗೆಯಲ್ಲೆ ಸಂಚರಿಸಬೇಕು, ಕಾವಲ್ ಗ್ರಾಮಸ್ಥರು ದಿನನಿತ್ಯದ ಮನೆ ಬಳಕೆಯ ವಸ್ತು, ದಿನಸಿ ಸಾಮಾಗ್ರಿಗಳನ್ನು ತರಲು ಗ್ರಾಮದಲ್ಲಿರುವ ಒಂದೇಒಂದು ಆಟೋದಲ್ಲಿ ಹೋಗಬೇಕು, ಆಟೋ ಹೋದ ನಂತರ ನಡಿಗೆಯಲ್ಲೆ ಸಂಚರಿಸುವ ಪ್ರಸಂಗವಿದೆ, ಸಾರ್ವಜನಿಕರು, ರೈತರು, ಜಾನುವಾರುಗಳು ದಿನನಿತ್ಯ ಓಡಾಡಲು ಇರುವುದು ಇದೇ ರಸ್ತೆ, ಈಗ ಈ ಮಾರ್ಗದಲ್ಲಿ ಕರಡಿ ಪ್ರತ್ಯಕ್ಷವಾದ ಸುದ್ಧಿ ತಿಳಿದು ಭಯದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ:- ಮಾದಪ್ಪನ ಸನ್ನಿಧಿಯಲ್ಲಿ ಹಾಲರವಿ ಉತ್ಸವ
ಇನ್ನೊಂದು ವಾರದಲ್ಲಿ ಬೆಳೆ ಕಟಾವು ಕೆಲಸ ಶುರುವಾಗಲಿದೆ ಹೊಲಗಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡಗಂಟೆಗಳು ದಟ್ಟವಾಗಿ ಬೆಳೆದು ನಿಂತಿವೆ, ಹೊಲ ತೋಟಗಳಿಗೆ ಹೋಗಲು ಆತಂಕ ಎದುರಾಗಿದೆ ಎಂಬುದು ಇಲ್ಲಿನ ರೈತರ ಮಾತು.
ಯಾವುದೇ ಅನಾಹುತ ಆಗದ ಮುಂಚೆ ಸಂಬಂಧಪಟ್ಟ ಇಲಾಖೆಯವರು ಬೇಗನೆ ಕರಡಿಯನ್ನು ಹಿಡಿದು ಜನರಲ್ಲಿ ಮೂಡಿರುವ ಭಯವನ್ನು ದೂರ ಮಾಡಲು ಮುಂದಾಗಬೇಕು ಎಂದು ಚಿಕ್ಕಜಾಜೂರು ಕಾವಲ್ ಗ್ರಾಮಸ್ಥರು, ರೈತರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.