Advertisement

ಗುರಿ ಮುಟ್ಟಲು ಕಾರ್ಯಪ್ರವೃತ್ತರಾಗಿ: ಡಿಸಿ

10:38 AM Jul 14, 2019 | Team Udayavani |

ಹಾವೇರಿ: ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಮೂಲಕ ಜಿಲ್ಲೆಯಲ್ಲಿ ದುರ್ಬಲ ಗುಂಪುಗಳು ವಾಸಿಸುವ ನಗರ ಮತ್ತು ಗ್ರಾಮೀಣ ಪ್ರದೇಶದ 2,56,067 ಜನರನ್ನು ತಪಾಸಣೆಗೆ ಒಳಪಡಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಅಧಿಕಾರಿಗಳು ಗುರಿ ಮುಟ್ಟುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.

Advertisement

ಪರಿಷ್ಕೃತ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಜಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಉದ್ದೇಶಿತ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷಯರೋಗ ಮುಂಜಾಗ್ರತಾ ಕ್ರಮವಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಜು.15 ರಿಂದ 27ರ ವರೆಗೆ ಜಿಲ್ಲಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ 656 ತಂಡ ರಚಿಸಲಾಗಿದೆ. 1,312 ಜನರು ತಪಾಸಣೆ ಕಾರ್ಯದಲ್ಲಿ ನೆರವಾಗಲಿದ್ದಾರೆ ಎಂದು ತಿಳಿಸಿದರು.

ಹಿಂಜರಿಕೆ ಬೇಡ: ನಾಲ್ಕನೇ ಸುತ್ತಿನ ಸಕ್ರಿಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ತಪಾಸಣೆ ಮಾಡಲಿದ್ದಾರೆ. ರೋಗದ ಲಕ್ಷಣಗಳು ಕಂಡುಬಂದರೆ ಪ್ರಯೋಗಾಲಯದಲ್ಲಿ ತಪಾಸಣೆ, ಅಗತ್ಯ ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ. ಎಲ್ಲವೂ ಉಚಿತವಾಗಿರುತ್ತದೆ. ತಪಾಸಣೆಗಾಗಿ ಮನೆಗೆ ಬಂದಾಗ ಯಾವುದೇ ಹಿಂಜರಿಕೆ ಇಲ್ಲದೆ ಆರೋಗ್ಯ ಕಾರ್ಯಕರ್ತರೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಅಧಿಕಾರಿಗಳಿಗೆ ಸೂಚನೆ: ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಕಾರ್ಯಕ್ರಮಕ್ಕೆ ನಿಯೋಜಿತವಾದ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡಿ ತರಬೇತಿಗೊಳಿಸಬೇಕು. ಸಾರ್ವಜನಿಕರಿಗೆ ಈಗಾಗಲೇ ಜಿಲ್ಲಾಡಳಿತದಿಂದ ತಯಾರಿಸಲಾದ ಕರಪತ್ರ, ವಿಡಿಯೋಗಳನ್ನು ಪ್ರದರ್ಶಿಸಿ ರೋಗದ ಲಕ್ಷಣಗಳು, ಸೂಕ್ತ ಚಿಕಿತ್ಸೆ ಕುರಿತಂತೆ ಅರಿವು ಮೂಡಿಸಬೇಕು ಜೊತೆಗೆ ಕಾಳಜಿಯಿಂದ ಗಂಭೀರವಾಗಿ ಪರಿಗಣಿಸಿ ಪ್ರಚಾರ ಕೈಗೊಳ್ಳಬೇಕು ಎಂದರು.

Advertisement

ಉದಾಸೀನ ಬೇಡ: ದುರ್ಬಲ ವರ್ಗದವರು ವಾಸಿಸುವ ಪ್ರದೇಶದಲ್ಲಿ ಹೆಚ್ಚಿನ ಗಮನಹರಿಸಬೇಕು. ಗ್ರಾಮೀಣ ಜನರನ್ನು ತಂಡ ತಂಡವಾಗಿ ಸೇರಿಸಿ ಅರಿವು ಕಾರ್ಯಕ್ರಮ ನಡೆಸಬೇಕು. ಉದಾಸೀನ ತೋರದೆ ಕಾಳಜಿಯಿಂದ ಕಾರ್ಯನಿರ್ವಹಿಸಿ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ನಿಯೋಜಿತ ಅಧಿಕಾರಿಗಳೊಂದಿಗೆ ಇತರ ಇಲಾಖೆ ಅಧಿಕಾರಿಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕರ್ತರಿಗೆ ತರಬೇತಿ: ಕ್ಷಯರೋಗ ಕಾರ್ಯಕ್ರಮ ಜಿಲ್ಲಾ ನೋಡಲ್ ಅಧಿಕಾರಿ ಡಾ. ಎಂ.ಎನ್‌.ನೀಲೇಶ್‌ ಮಾಹಿತಿ ನೀಡಿ ಆರೋಗ್ಯ ಇಲಾಖೆ ಜು. 15ರಿಂದ 27ರ ವರೆಗೆ ಮನೆ ಮನೆಗೆ ಹೋಗಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಂಡಿದೆ. ಈಗಾಗಲೇ ಎಲ್ಲ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದರು.

ದುರ್ಬಲ ವರ್ಗದವರು ವಾಸಿಸುವ ಕೊಳಚೆ ಪ್ರದೇಶ, ಗಣಿ ಕೆಲಸ, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಕಲ್ಲು ಕೋರೆ ಕೆಲಸಗಾರರು, ನಿರಾಶ್ರಿತ ಶಿಬಿರಗಳು, ರಾತ್ರಿ ಆಶ್ರಯಗಳು, ಹಸಿ ಹಾಲು, ಹಸಿ ಮಾಂಸ ಸೇವಿಸುವ ಗುಂಪುಗಳು, ಅಪೌಷ್ಟಿಕತೆ ಹೊಂದಿರುವ ಜನತೆ, ಎಚ್ಐವಿಯಿಂದ ಬಳಲುತ್ತಿರುವ ಗುಂಪು, ವಸತಿ ರಹಿತರು, ನೇಕಾರ, ಬೀದಿ ಮಕ್ಕಳು, ಅನಾಥಾಶ್ರಮ, ಹತ್ತಿ ಮಿಲ್ನಲ್ಲಿ ಕೆಲಸ ಮಾಡುವ ಜನರು ಸೇರಿದಂತೆ ದುರ್ಬಲ, ಬಡತನದಲ್ಲಿ ಬದುಕುತ್ತಿರುವ ಜನರಲ್ಲಿ ಹೆಚ್ಚಾಗಿ ಈ ರೋಗದ ಲಕ್ಷಣಗಳು ಕಂಡುಬರುತ್ತವೆ. ಇಂತಹ ಜನರು ವಾಸಿಸುವ ಪ್ರದೇಶಗಳಿಗೆ ಆದ್ಯತೆ ನೀಡಿ ತಪಾಸಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ವಾಸಕೋಶಗಳಿಗೆ ಅಷ್ಟೇ ಅಲ್ಲದೆ ದೇಹದ ಇತರ ಭಾಗಗಳಿಗೆ ಈ ರೋಗ ಹರಡುತ್ತದೆ. ಪೂರ್ಣ ಚಿಕಿತ್ಸೆ ಪಡೆದರೆ ರೋಗ ಗುಣಪಡಿಸಬಹುದು. ಈ ಕಾರಣದಿಂದಲೇ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಕ್ಷಯರೋಗ ಪ್ರಮಾಣ ಗಣನೀಯವಾಗಿ ತಗ್ಗಿಸುವ ಮತ್ತು ನಿರ್ಮೂಲನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಭಾರತ ಸರ್ಕಾರ 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತವನ್ನಾಗಿಸುವ ಗುರಿ ಹಾಕಿಕೊಂಡಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ವಾರ್ತಾಧಿಕಾರಿ ಬಿ.ಆರ್‌. ರಂಗನಾಥ್‌, ಪೌರಾಯುಕ್ತ ಬಸವರಾಜ ಜಿದ್ದಿ, ಆರೋಗ್ಯ ಇಲಾಖೆಯ ಡಾ. ಜಗದೀಶ ಪಾಟೀಲ, ಡಾ. ದೇವರಾಜ, ಡಾ. ಸುನೀಲ್ ಹರವಿ, ಡಾ.ಪ್ರಭಾಕರ ಕುಂದೂರ, ಜೆ.ಪಿ. ವಿನಾಯಕ, ಎಸ್‌.ಲಿಂಗರಾಜ, ಎಂ. ಗಿರೀಶ, ಎಲ್. ಲಕ್ಷ್ಮಣ, ಕೆ. ಬಸವರಾಜ, ಬಿ.ಎಸ್‌. ಉಮಾಪತಿ ಹಾಗೂ ಪ್ರಮೋದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next