Advertisement

ಡೆಂಗ್ಯೂ ಕಟ್ಟೆಚ್ಚರ ವಹಿಸಲು ತಾ.ಪಂ. ಆಡಳಿತಾಧಿಕಾರಿ ಸೂಚನೆ

11:58 AM May 19, 2022 | Team Udayavani |

ಉಡುಪಿ: ಈಗಾಗಲೇ ಮಳೆ ಶುರು ವಾಗಿರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಡೆಂಗ್ಯೂ ಹರಡದಂತೆ ಅಗತ್ಯ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆ ತೆಗೆದುಕೊಳ್ಳಬೇಕು ಎಂದು ಜಿ.ಪಂ. ಯೋಜನಾ ನಿರ್ದೇಶಕ, ಉಡುಪಿ ತಾ.ಪಂ. ಆಡಳಿತಾಧಿಕಾರಿ ಬಾಬು ಎಂ. ಸೂಚಿಸಿದರು.

Advertisement

ಬುಧವಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಆರೋಗ್ಯ ಇಲಾಖೆ ಅಧಿಕಾರಿ ಡಾ| ವಾಸುದೇವ್‌ ಮಾತನಾಡಿ, ಉಡುಪಿ ತಾ. ಪಂ. ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 21 ಡೆಂಗ್ಯೂ ಪ್ರಕರಣ ವರದಿಯಾಗಿದೆ ಎಂದರು.

ಟೊಮ್ಯಾಟೋ ಜ್ವರ ಇಲ್ಲ

ಜನವಸತಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆದಂತೆ ಹರಡದಂತೆ ಬೇಕಾದ ಮುಂಜಾಗ್ರತ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಟೊಮ್ಯಾಟೋ ಜ್ವರದ ಬಗ್ಗೆ ಉಡುಪಿಯಲ್ಲಿ ಎಲ್ಲಿಯೂ ವರದಿಯಾಗಿಲ್ಲ. ಇದು ಬೆಂಗಳೂರು ಮತ್ತು ಮುಂಬಯಿಯಲ್ಲಿರುವ ಲ್ಯಾಬ್‌ನಲ್ಲಿ ದೃಢವಾಗಬೇಕು. ಸದ್ಯಕ್ಕೆ ಇಲ್ಲಿ ಆತಂಕಪಡುವ ಬೆಳವಣಿಗೆ ಇಲ್ಲ ಎಂದು ಡಾ| ವಾಸುದೇವ್‌ ಹೇಳಿದರು.

ಖಾಯಂ ವೈದ್ಯರ ನೇಮಿಸಲು ಸೂಚನೆ

Advertisement

ರಾಷ್ಟ್ರೀಯ ಆರೋಗ್ಯ ಮಿಶನ್‌ ಯೋಜನೆ ಅಡಿಯಲ್ಲಿ ವಿಶೇಷ ತರಬೇತಿಗೊಂಡು ನೇಮಕಗೊಂಡ ನರ್ಸ್‌ಗಳ ತಂಡ ಪ್ರಾ.ಆರೋಗ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಸೇವೆಗೆ ನಿಯೋಜಿಸಲ್ಪಟ್ಟಿದ್ದಾರೆ. ತುರ್ತು ಸಂದರ್ಭ ವೈದ್ಯರಿಗೆ ಸರಿ ಸಮಾನವಾಗಿ ಚಿಕಿತ್ಸೆ ನೀಡುವಂತೆ ಇವರಿಗೆ ತರಬೇತಿ ನೀಡಲಾಗಿದೆ ಎಂದು ಡಾ|ವಾಸುದೇವ್‌ ತಿಳಿಸಿದರು. ಬಡಾನಿಡಿಯೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ನೇಮಕ ಮಾಡಲು ಸೂಕ್ತ ಕ್ರಮವಹಿಸುವಂತೆ ತಹಶೀಲ್ದಾರ್‌ ಅರ್ಚನಾ ಭಟ್‌ ಸೂಚನೆ ನೀಡಿದರು.

ಪೆರ್ಡೂರಿನಲ್ಲಿ ಮಧುವನ ಕೇಂದ್ರ

ತೋಟಗಾರಿಕೆ ಇಲಾಖೆ ವತಿಯಿಂದ ಪೆರ್ಡೂರಿ ನಲ್ಲಿ ಮಧುವನ ಕೇಂದ್ರ ಆರಂಭಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಜೇನು ಸಾಕಾಣಿಕೆ ಮತ್ತು ಉತ್ಪಾದನೆ, ಸಂಸ್ಕರಣ ಘಟಕ ರೂಪಿಸುವ ಬಗ್ಗೆ ತಿಳಿಸಿದರು.

ಬ್ರಹ್ಮಾವರ ವಿಭಾಗದ ತೋಟಗಾರಿಕೆ ಇಲಾಖೆ ಅಧಿಕಾರಿ ಸಭೆಯಲ್ಲಿ ಗೈರಾಗಿದ್ದಕ್ಕೆ ಬಾಬು ಅವರು ಅಸಮಾಧಾನ ವ್ಯಕ್ತಪಡಿಸಿದರು. ನಾವು ಸಭೆ ನಡೆಸುವುದು ಕಾಟಾಚಾರಕ್ಕಲ್ಲ. ಜಿಲ್ಲಾಧಿಕಾರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಇನ್ನೂ 5 ಗ್ರಾ.ಪಂ.ಗಳಲ್ಲಿ ಗ್ರಾಮ ಒನ್‌ ಕೇಂದ್ರ ಆರಂಭವಾಗದ ಕುರಿತು, ಸಂತೆಕಟ್ಟೆ, ಅಂಬಲಪಾಡಿ ಹೆದ್ದಾರಿ ಜಂಕ್ಷನ್‌ಗಳಲ್ಲಿ ಓವರ್‌ಪಾಸ್‌ ಕಾಮಗಾರಿ ಕುರಿತು, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸುವ ಆಹಾರ ಗುಣಮಟ್ಟದ ಪರಿಶೀಲನೆ ಬಗ್ಗೆ ವರದಿ ನೀಡುವ ಬಗ್ಗೆ, ಶಿಕ್ಷಣ ಇಲಾಖೆ ಸಂಬಂಧಿಸಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಪಶು ಸಂಗೋಪನೆ, ಪೊಲೀಸ್‌, ಮೀನುಗಾರಿಕೆ ಇಲಾಖೆ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ತಾ. ಪಂ. ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್‌, ತಾ.ಪಂ. ಸಹಾಯಕ ನಿರ್ದೇಶಕಿ ವಿಜಯಾ ಸಭೆಯಲ್ಲಿದ್ದರು.

ಬಿಸಿಯೂಟಕ್ಕೆ ಬಾರದ ಬಾಣಂತಿ, ಗರ್ಭಿಣಿಯರು

ಅಂಗನವಾಡಿ ದಾಖಲಾತಿ ಮತ್ತು ಆರಂಭೋತ್ಸವವನ್ನು ಶಿಕ್ಷಣ ಇಲಾಖೆಯಂತೆ ನಡೆಸಬೇಕು. ಸಂಭ್ರಮದಿಂದ ದಾಖಲಾತಿ ಆಂದೋಲನ ನಡೆಸುವಂತೆ ಬಾಬು ಅವರು ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ ಅವರು ಪ್ರತಿಕ್ರಿಯಿಸಿ ಮೂರು ವರ್ಷದಿಂದ 6 ವರ್ಷದವರೆಗಿನ 6,356 ಮಕ್ಕಳಿದ್ದು, ಅಂಗನವಾಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಗೆ ಕ್ರಮ ವಹಿಸಲಾಗುವುದು. ಮಾತೃಪೂರ್ಣ ಯೋಜನೆಗೆ ಸಂಬಂಧಿಸಿ ಗರ್ಭಿಣಿಯರು, ಬಾಣಂತಿಯರು ಬಿಸಿಯೂಟ ಸೇವನೆಗೆ ಅಂಗನವಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಯೋಜನೆ ಗುರಿ ಸಾಧನೆ ಕುಂಠಿತವಾಗಿದೆ ಎಂದು ಮಾಹಿತಿ ನೀಡಿದರು. ಇದರಿಂದ ಉಳಿದ ಆಹಾರ ಸಾಮಗ್ರಿ ಲೆಕ್ಕಾಚಾರದ ಮೇರೆಗೆ ಮುಂದಿನ ತಿಂಗಳ ಇಂಡೆಂಟ್‌ ಹಾಕಲಾಗುತ್ತಿದೆ ಎಂದು ತಿಳಿಸಿದರು. ಅಂಗನವಾಡಿ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ವಿಧವೆಯರು, ಅಂಗವಿಕಲ ಮಹಿಳೆಯರು, ತೀರ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

15,500 ಹೆಕ್ಟೇರ್‌ ಬಿತ್ತನೆ ಗುರಿ

ಈ ಬಾರಿ 1,050 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿದ್ದು, 538 ಕ್ವಿಂಟಲ್‌ ದಾಸ್ತಾನಿದೆ. ಕಳೆದ ಬಾರಿ ನೆರೆಯಿಂದ ಎಂಒ4 ಸಾಕಷ್ಟು ಹಾನಿಯಾಗಿದೆ. ಸುಣ್ಣ ಕೂಡ ದಾಸ್ತಾನು ಇದೆ. ಈ ಬಾರಿ 15,500 ಹೆಕ್ಟೇರ್‌ ಭತ್ತ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿ ಮೋಹನ್‌ರಾಜ್‌ ಮಾಹಿತಿ ನೀಡಿದರು. ಕೃಷಿ ಹೊಂಡ ಯೋಜನೆ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ಅದಕ್ಕೆ ಬದಲು ಸಮಗ್ರ ಕೃಷಿ ಯೋಜನೆ ಜಾರಿಗೆ ತರಲಾಗಿದೆ. ಇದರಡಿ ಒಂದು ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಡಿ 32 ಮಂದಿಯ ಪ್ರಸ್ತಾವ ಕಳುಹಿಸಲಾಗಿದೆ. ಅದರಲ್ಲಿ 20 ಮಂದಿಗೆ ಆನ್‌ಲೈನ್‌ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next