Advertisement

ಬೆಳಕಿನ ಸಂಭ್ರಮದ ಜತೆಗಿರಲಿ ಎಚ್ಚರಿಕೆ

12:40 AM Oct 27, 2019 | Team Udayavani |

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ರಾಜಧಾನಿ ಸಜ್ಜಾಗಿದ್ದು, ಪಟಾಕಿ, ಸಿಹಿ ತಿನಿಸು, ದೀಪಗಳ ಮಾರಾಟದ ಭರಾಟೆ ಜೋರಾಗಿದೆ. ಮಳೆಯ ಆತಂಕದ ನಡುವೆ ಜನತೆ ದೀಪಾವಳಿ ಸಂಭ್ರಮಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಪರಿಸರ ಪಟಾಕಿ ವಿಶೇಷ ಆಕರ್ಷಣೆಯಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗದಿದ್ದರೂ ಸಮಾಧಾನಕರ ಪ್ರಮಾಣದಲ್ಲಿ ಮಾರಾಟವಾಗಿದೆ.

Advertisement

ಇದರ ಜತೆಗೆ ದೀಪಾವಳಿ ಸಂಭ್ರಮ ಯಾವುದೇ ಅನಾಹುತಕ್ಕೆ ಕಾರಣವಾಗದಿರಲಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜಾಗೃತಿ ಮೂಡಿಸಿದೆ. ಬಿಬಿಎಂಪಿ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯು ಸಹ ಹಲವು ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ. ಜತೆಗೆ, ಸಾರ್ವಜನಿಕರಿಗೆ ಸಲಹೆ-ಸೂಚನೆಯನ್ನೂ ಕೊಟ್ಟಿದೆ. ಈ ಹಿಂದಿನ ವರ್ಷಗಳಲ್ಲಿ ಹಬ್ಬದ ದಿನವೇ ಪಟಾಕಿಯಿಂದಾಗಿ ಹಲವರ ಬದುಕಿನಲ್ಲಿ ಕತ್ತಲು ಆವರಿಸಿದೆ.

ಹೀಗಾಗಿ, ಪಟಾಕಿಯಿಂದ ದೂರವಿದ್ದರೆ ಸೂಕ್ತ. ಏಕೆಂದರೆ, ಪ್ರತಿ ವರ್ಷವೂ ಪಟಾಕಿ ಸಿಡಿಸುವ ಸಮಯದಲ್ಲಿ 10-14 ವರ್ಷದ ಒಳಗಿನ ಮಕ್ಕಳು ಗಾಯದ ಪ್ರಕರಣಗಳು ಹೆಚ್ಚುತ್ತಿವೆ. ಜತೆಗೆ, ಯಾರೋ ಸಿಡಿಸಿದ ಪಟಾಕಿಗೆ ತಮ್ಮದಲ್ಲದ ತಪ್ಪಿಗೆ ಶೇ. 40 ಜನ ನೋವುಣ್ಣುತ್ತಿದ್ದಾರೆ. ಹೀಗಾಗಿ, ಜಾಗೃತಿ ವಹಿಸುವುದು ಮುಖ್ಯ. ಹಳದಿ, ನೀಲಿ, ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳಿಂದ ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ವಿವಿಧ ಬಣ್ಣದ ಪಟಾಕಿಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

“ವಿವಿಧ ಬಣ್ಣದ ಪಟಾಕಿಗಳಲ್ಲಿ ಸ್ಟ್ರೋಮಿಯಂ, ಕ್ರೋಮಿಯಂ, ಲಿಥಿಯಂ ಸೇರಿದಂತೆ ವಿವಿಧ ರಾಸಾಯಿನಿಕ ಅಂಶಗಳು ಕೂಡಿರುತ್ತದೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ,. ವರ್ಣಮಯ ಪಟಾಕಿಗಳನ್ನು ಬಳಸಬೇಡಿ ಎನ್ನುತ್ತಾರೆ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್‌ನ ಪ್ರೊ.ಡಾ.ಎಚ್‌. ಪರಮೇಶ್‌.

ಶ್ವಾಸಕೋಶದ ಸಮಸ್ಯೆ: ಹೃದ್ರೋಗ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರು ದೀಪಾವಳಿ ವೇಳೆ ಎಚ್ಚರಿಕೆ ವಹಿಸಬೇಕು. ಹೃದ್ರೋಗ ಸಂಬಂಧಿಸಿದ ಕೆಲವರಿಗೆ ಫೇಸ್‌ಮೇಕರ್‌ (ಕೃತಕ ಹೃದಯ ಬಡಿತ ಸಾಧನ) ಅಳವಡಿಸಿಕೊಂಡವರ ಮೇಲೆ ಪಟಾಕಿ ಶಬ್ದ ಪರಿಣಾಮ ಬೀರುವ ಸಾಧ್ಯತೆಯಿದೆ. ಸಾಧನ ನಿಂತು ಹೋಗುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ತಜ್ಞರು.

Advertisement

ಮುಂಜಾಗ್ರತಾ ಕ್ರಮಗಳು
-ಪಟಾಕಿ ಹಚ್ಚಲು ಮಕ್ಕಳಿಗೆ ಉದ್ದದ ಅಗರಬತ್ತಿ ನೀಡುವುದು
-ಕನ್ನಡಕ ಇಲ್ಲವೇ ಹೆಲ್ಮೆಟ್‌ ಧರಿಸಿ ಪಟಾಕಿ ಸಿಡಿಸಿ
-ಪಟಾಕಿ ಸಿಡಿತದ ಸಮಯದಲ್ಲಿ ಕಿವಿಗೆ ಹತ್ತಿ ಅಥವಾ ಇಯರ್‌ ಪ್ಲೆಗ್‌ ಬಳಕೆ
-ರೋಗಿಗಳಿರುವ ಕೊಠಡಿಗಳ ಬಾಗಿಲು ಹಾಕಿಕೊಳ್ಳುವುದು

ಕಣ್ಣಿಗೆ ಪಟಾಕಿ ಕಿಡಿ ಸಿಡಿದರೇನು ಮಾಡಬೇಕು?
-ಪಟಾಕಿ ಕಿಡಿ ಕಣ್ಣಿಗೆ ಬಡಿದಾಗ ಯಾವುದೇ ಕಾರಣಕ್ಕೂ ಉಜ್ಜಿಕೊಳ್ಳಬಾರದು
-ತಕ್ಷಣ ತಣ್ಣಿರಿನಿಂದ ತೊಳೆಯುವುದು
-ಸ್ವಚ್ಛವಾದ ಬಟ್ಟೆ ಅಥವಾ ಹತ್ತಿಯನ್ನು ಕಣ್ಣಿಗೆ ಒತ್ತಿಕೊಳ್ಳುವುದು
-ಕೂಡಲೇ ಸಮೀಪದ ಚಿಕಿತ್ಸೆ ಪಡೆಯವುದು.

ದುರಂತ ಸಂಭವಿಸಿದರೆ ಮನೆ ಮದ್ದು ಬೇಡ: ಕಿವಿಯ ಪಕ್ಕದಲ್ಲಿ ಆಕಸ್ಮಿಕವಾಗಿ ಸಿಡಿಯುವ ಪಟಾಕಿ ಕವಿಯೊಳಗಿನ ತಮಟೆಗೆ ಹೆಚ್ಚು ಹಾನಿ ಮಾಡುತ್ತದೆ. ಕೆಲವು ಬಾರಿ ತಮಟೆ ಚಿದ್ರಗೊಂಡು ಶಾಶ್ವತ ಕಿವುಡಾಗುವ ಸಾಧ್ಯತೆ ಇರುತ್ತದೆ. ಇಂತಹ ಶಬ್ದ ಮಾಲಿನ್ಯ ಸಂಬಂಧಿ ಕಿವುಡುತನಕ್ಕೆ ಯಾವುದೇ ಔಷಧಿ ಇಲ್ಲ. ಪಟಾಕಿ ಸಿಡಿಸಿದ ವೇಳೆ ಕಿವಿಯೊಳಗೆ ಗುಂಯ್‌ ಗುಡುವ ಅಥವಾ ಶಬ್ದ ಅಸ್ಪಷ್ಟವಾಗಿ ಕೇಳುವ ಸಮಸ್ಯೆಯಾದರೆ, ಎಣ್ಣೆ, ನೀರು ಹಾಕುವಂತಹ ಮನೆ ಮದ್ದುಗಳಿಗೆ ಮುಂದಾಗದೆ ಕೂಡಲೇ ಆಸ್ಪತ್ರೆಗೆ ತೋರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಕ್ಕೆ: ದೀಪಾವಳಿ ಸಂದರ್ಭದಲ್ಲಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ವಿವಿಧ ಆಸ್ಪತ್ರೆ ಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ತುರ್ತು ಚಿಕಿತ್ಸೆ ನೀಡಲಾಗುತ್ತದೆ.

-ಮಿಂಟೋ ಆಸ್ಪತ್ರೆ (ಕಲಾಸಿಪಾಳ್ಯ) ಸಹಾಯವಾಣಿ -080-26707176
-ನಾರಾಯಣ ನೇತ್ರಾಲಯ ಸಹಾಯವಾಣಿ
-ರಾಜಾಜಿನಗರ 91 80 66121641/1643
-ಹೊಸೂರು ರಸ್ತೆ  91 80 66660655
-ಬನ್ನೇರುಘಟ್ಟ (ಬೆಳಗ್ಗೆ 8ರಿಂದ ಸಂಜೆ 7.30): 91 80 61222400/40

ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?: ಕಾಡುಗೋಡಿ ಸಂತೆ ಮೈದಾನ, ವೆಂಗಯ್ಯನ ಕೆರೆ ಮೈದಾನ ಕೆ.ಆರ್‌.ಪುರ, ಕಾವೇರಿ ಆಟದ ಮೈದಾನ ವಿಜಿನಾಪುರ, ಐಟಿಐ ಮೈದಾನ, ಕೈಕೊಂಡ್ರಹಳ್ಳಿ ಮೈದಾನ, ದೊಡ್ಡಕನಹಳ್ಳಿ ಮೈದಾನ, ಹೂಡಿ ಮೈದಾನ, ವರ್ತೂರು ಹೊಸ ಸಂತೆ ಮೈದಾನ, ಕುಂದಲಹಳ್ಳಿ ಬಡಾವಣೆಯ ಮೈದಾನ, ಶ್ರೀರಾಮಮಂದಿರ ಆಟದ ಮೈದಾನ, ಎಂಇಎಸ್‌ ಆಟದ ಮೈದಾನ, ವಿಲ್ಸನ್‌ ಗಾರ್ಡ್‌ನ ಆಟದ ಮೈದಾನ,

ಶಂಕರ್‌ನಾಗ್‌ ಆಟದ ಮೈದಾನ, ಪದ್ಮನಾಭ ನಗರ ಕಾರ್ಮೆಲ್‌ ಸ್ಕೂಲ್‌ ಸಮೀಪ, ಉದಯಭಾನು (ಬಸವನಗುಡಿ) ಮೈದಾನ, ಹಂಪಿನಗರ ಮೈದಾನ, ಭುವನಗಿರಿ ಆಟದ ಮೈದಾನ, ಯಲಹಂಕದ ಬಸ್‌ ನಿಲ್ದಾಣದ ಸಮೀಪ ಹಾಗೂ ಯಲಹಂಕ ಉಪನಗರ ಕರ್ನಾಟಕ ಗೃಹ ಮಂಡಳಿ ವಾಣಿಜ್ಯ ಸಂಕೀರ್ಣ ಮುಂಭಾಗ ಸೇರಿದಂತೆ ವಿವಿಧ ಭಾಗಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೀಪಾವಳಿ ಸಂಭ್ರಮಾಚರಣೆ ದೃಷ್ಟಿ ಇಲ್ಲದವರಿಗೆ, ಅಲ್ಪ ದೃಷ್ಟಿ ಇರುವವರಿಗೆ ಹಾಗೂ ಅಸಹಾಯಕರಿಗೆ ತೊಂದರೆ ಆಗದಂತೆ ಆಚರಿಸಿ. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ.
-ಸ್ನೇಹದೀಪ್‌ ಟ್ರಸ್ಟ್‌ನ ಸಂಸ್ಥಾಪಕ, ಪಾಲ್‌ ಮುದ್ದ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next