Advertisement

ಕೆರೆಗಳಿಗೆ ತ್ಯಾಜ್ಯ ನೀರು ಹರಿಸದಂತೆ ಎಚ್ಚರವಹಿಸಿ

02:15 PM Nov 29, 2022 | Team Udayavani |

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ನಗರದ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಹಾಗೂ ಚೆನ್ನೈನ ಹಸಿರು ನ್ಯಾಯ ಪೀಠದ ಆದೇಶದಂತೆ ಸೋಮವಾರ ಜಿಲ್ಲಾಧಿಕಾರಿ ಆರ್‌.ಲತಾ, ನಗರದ ನಾಗರಕೆರೆ, ತಾಲೂಕಿನ ಚಿಕ್ಕತುಮಕೂರು ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು.

Advertisement

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡೀಸಿ, ಮಾಲಿನ್ಯ ನಿಯಂತ್ರಣ ಮಂಡಳಿಯು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ, ಇಷ್ಟು ಅವಾಂತರವೇ ಸೃಷ್ಟಿಯಾಗುತ್ತಿರಲಿಲ್ಲ. ಬೆಂ.ಗ್ರಾ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂಧಿಸಬೇಕಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಬೆಂಗಳೂರು ನಗರದಲ್ಲಿರುವುದೇ ಅವೈಜ್ಞಾನಿಕವಾಗಿದೆ. ತಕ್ಷಣ ದಿಂದಲೇ ಕಚೇರಿಯನ್ನು ದೇವನಹಳ್ಳಿಯಲ್ಲಿನ ಡೀಸಿ ಕಚೇರಿಗೆ ಸ್ಥಳಾಂತರ ಮಾಡಿಕೊಂಡು, ಜಿಲ್ಲೆಯಲ್ಲಿನ ಜನರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ತರಾತುರಿಯಲ್ಲಿ ಸ್ವಚ್ಛತೆ: ನಾಗರಕೆರೆ ನೀರು ಒಳ ಚರಂಡಿ ನೀರಿನಿಂದ ಕಲುಷಿತವಾಗುತ್ತಿರುವುದು, ಕಟ್ಟಡ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯ ಕೆರೆಗೆ ಹಾಕುತ್ತಿ ರುವುದು, ಚಿಕ್ಕತುಮಕೂರು ಕೆರೆಯಲ್ಲಿ ನಗರಸಭೆ ಒಳಚರಂಡಿ ನೀರು ಸೂಕ್ತ ರೀತಿಯಲ್ಲಿ ಶುದ್ಧೀಕರಣ ಮಾಡದೇ ಹೊರಗೆ ಬಿಡುತ್ತಿರುವುದರ ವಿರುದ್ಧ ವರ್ಷದ ಹಿಂದೆ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ನ.1ರಂದು ಕೆರೆಯ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ವಾಸ್ತವ ವರದಿ ನೀಡುವಂತೆ ಡೀಸಿಗೆ ಆದೇಶ ನೀಡಿದೆ ಎಂದು ತಿಳಿಸಿರುವ ದೊಡ್ಡಬಳ್ಳಾಪುರದ ನಿವಾಸಿ ಗಿರೀಶ್‌, ಡೀಸಿ ಭೇಟಿ ನೀಡುವುದನ್ನು ಅರಿತ ನಗರ ಸಭೆ ಅಧಿಕಾರಿಗಳು ತರಾತುರಿಯಲ್ಲಿ ಸೋಮವಾರ ಬೆಳಗ್ಗೆ ಕೆರೆ ಅಂಚಿನಲ್ಲಿ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ: ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, 25 ವಾರ್ಡ್‌ಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಇದರಲ್ಲೂ ಸಹ ಎಲ್ಲಾ ಮನೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸುವಂತೆ ಕಡ್ಡಾಯಮಾಡದಿರುವುದು ಕೆರೆಯಲ್ಲಿನ ನೀರು ಕಲುಷಿತವಾಗಲು ಕಾರಣವಾಗಿದೆ. ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಕೆರೆಯಲ್ಲಿ ಕಟ್ಟಡ ತ್ಯಾಜ್ಯ ಸುರಿಯುವ ಮೂಲಕ ಹಂತ ಹಂತವಾಗಿ ಮುಚ್ಚುವ ಕೆಲಸವಾಗುತ್ತಿದೆ. ಕೆರೆ ಅಂಗಳದಲ್ಲೇ ಒಳಚರಂಡಿ ನೀರು ಹರಿದು ಹೋಗುವ ಪೈಪ್‌ ಹಾಕಲಾಗಿದೆ. ಇದರಿಂದ ಒಳಚರಂಡಿ ನೀರು ಕೆರೆಗೆ ಸೇರಲು ಕಾರಣವಾಗಿದೆ. ಈ ಬಗ್ಗೆ ನಗರಸಭೆಗೆ ಮನವಿ ನೀಡಿದ್ದರೂ, ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿಗೆ ದೂರು ಸಲ್ಲಿಸಲಾಗಿದೆ ಎಂದರು.

ಕೆರೆಗೆ ಕಲುಷಿತ ನೀರು ತಡೆಗೆ ಕ್ರಮವಹಿಸಿ: ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಶುದ್ಧೀಕರಣ ವಾಗುವ ಚಿಕ್ಕತುಮಕೂರು ಕೆರೆಗೆ ಭೇಟಿ ನೀಡಿದ್ದ ಡೀಸಿ ಆರ್‌.ಲತಾ ಅವರಿಗೆ ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಆನಂದ್‌, ಸದಸ್ಯ ಸಂದೇಶ್‌ ಮನವಿ ಸಲ್ಲಿಸಿ, ಚಿಕ್ಕತುಮಕೂರು ಕೆರೆಗೆ ನಗರಸಭೆಯ ಒಳಚರಂಡಿ ನೀರನ್ನು ಶುದ್ಧೀಕರಣ ಮಾಡದೆ, ಬಿಡುತ್ತಿರುವುದರ ಜೊತೆಗೆ, ಬಾಶೆಟ್ಟಿಹಳ್ಳಿ ಪಪಂ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್‌, ಔಷಧಿ ತಯಾರಿಕಾ ಕಾರ್ಖಾನೆಗಳು ನೀರನ್ನು ಶುದ್ಧೀಕರಣ ಮಾಡದೆ ಕೆರೆಗೆ ಹರಿದು ಬಿಡುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಯಾವುದೇ ಕ್ರಮ ಕೈಗೊಳ್ಳದಿರುವುದೇ ಕೆರೆಯಲ್ಲಿನ ನೀರು ಕಲುಷಿತ ವಾಗಲು ಕಾರಣವಾಗಿದೆ. ಗ್ರಾಮಗಳಲ್ಲಿನ ಶುದ್ಧ ನೀರಿನ ಘಟಕಗಳಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯಗಳು ವರದಿ ನೀಡಿದ್ದರೂ, ಪರ್ಯಾಯ ಮಾರ್ಗವಿಲ್ಲದೆ, ಅಶುದ್ಧ ನೀರನ್ನೇ ಕುಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕತುಮಕೂರು ಕೆರೆಗೆ ಕಲುಷಿತ ನೀರು ಬರುವುದನ್ನು ತಡೆಯಲು ತುರ್ತು ಕ್ರಮಗಳನ್ನು ಕೈ ಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

Advertisement

ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ಡೀಸಿಗೆ ಮನವಿ ಸಲ್ಲಿಸಿ, 2016ರಲ್ಲೇ ಒಳಚರಂಡಿ ನೀರು ಕೆರೆಗೆ ಸೇರದಂತೆ ಹಾಗೂ ಇತರೆ ಪರಿಹಾರಗಳ ಕುರಿತ ಸಮಗ್ರ ವರದಿಯನ್ನು ನಗರಸಭೆಗೆ ಸಲ್ಲಿಸಲಾಗಿದೆ. ಆದರೂ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಒತ್ತುವರಿ ತೆರವುಗೊಳಿಸಿ: 175 ಎಕರೆ ವಿಸ್ತೀರ್ಣದ ನಾಗರಕೆರೆಯಲ್ಲಿ ಕೆಲವೆಡೆ ಕೆರೆ ಜಾಗ ಒತ್ತುವಾರಿ ಯಾಗಿದೆ. ಪರಿಶೀಲಿಸಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಈಗಾಗಲೇ ಕೆರೆ ಸರ್ವೆ ಮಾಡಲಾಗಿದೆ. ಒತ್ತುವರಿಯಾ ಗಿರುವ ಕಡೆ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಕ್ಷಿ ಪ್ರಭೇದಗಳ ಆವಾಸ ಸ್ಥಾನ: ನಾಗರಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳಿವೆ. ನೂರಾರು ಜಾತಿಯ ವಲಸೆ ಪಕ್ಷಿಗಳು ಆಗ ಮಿಸುತ್ತವೆ. ಇಂತಹ ಜೀವವೈವಿದ್ಯ ತಾಣವಾದ ನಾಗರ ಕೆರೆಯನ್ನು ಸಂರಕ್ಷಿಸಬೇಕು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಡೀಸಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಡೀಸಿ, ತ್ವರಿತಗತಿಯಲ್ಲಿ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಯೋಜನಾ ವರದಿ ಸಿದ್ಧ ಪಡಿಸುವಾಗ ತಜ್ಞರ ಅಭಿಪ್ರಾಯ, ಸಲಹೆ ಸೂಚನೆ ಸ್ವೀಕರಿಸಬೇಕು ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

ಐಐಎಸ್ಸಿಗೆ ನೀರಿನ ಮಾದರಿ: ಬಾಶೆಟ್ಟಿಹಳ್ಳಿ ಸೇರಿದಂತೆ ಕಲುಷಿತಗೊಂಡಿರುವ ಕೆರೆ ವ್ಯಾಪ್ತಿ ಗ್ರಾಮದಳ ಶುದ್ಧ ನೀರಿನ ಘಟಕಗಳಿಂದ ಸ್ಯಾಂಪಲ್‌ಗ‌ಳನ್ನು ಐಐಎಸ್ಸಿಗೆ ರವಾನಿಸಲು ಸೂಚಿಸಿದ್ದೇನೆ. ಮನುಷ್ಯನಿಗೆ ಬದುಕಲು ಬೇಕಾದ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಐಐಎಸ್ಸಿಯಲ್ಲಿ ಹಲವು ಮಾನ ದಂಡಗಳಲ್ಲಿ ನೀರಿನ ಪರೀಕ್ಷೆ ನಡೆವುದರಿಂದ ನಿಖರ ಫಲಿತಾಂಶ ಸಿಗಲಿದೆ. ವರದಿ ಪಡೆದ ನಂತರ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ತಹಶೀಲ್ದಾರ್‌ ಮೋಹನಕುಮಾರಿ, ತಾಪಂ ಇಒ ಶ್ರೀನಾಥ್‌ ಗೌಡ, ನಗರಸಭೆ ಪೌರಾಯುಕ್ತ ಕೆ.ಜಿ.ಶಿವಶಂಕರ್‌, ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಮುನಿರಾಜು ಸೇರಿದಂತೆ ಲೋಕೋಪಯೋಗಿ, ನಗರ ಸಭೆ, ಸಣ್ಣ ನೀರಾವರಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದ್ದರು.

ಕಲುಷಿತ ನೀರು ಸಂಸ್ಕರಿಸದಿದ್ದರೆ ಕ್ರಮ ಕೈಗೊಳ್ಳಿ: ಬಣ್ಣ ಹಾಗೂ ರಸಾಯನಿಕ ಕೈಗಾರಿಕೆಗಳು ಹೊರ ಬಿಡುತ್ತಿರುವ ವಿಷಯುಕ್ತ ನೀರಿನಿಂದ ಕೆರೆಗಳು ಸಂಪೂರ್ಣ ಮಲಿನಗೊಂಡಿವೆ. ಕೈಗಾರಿಕೆಗಳು ಮೂಲದಲ್ಲಿಯೇ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ಬಿಡಬೇಕು. ಉದಾಸೀನ ಮಾಡಿ ಜಲಮೂಲ ಹಾಳು ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಶೆಟ್ಟಿಹಳ್ಳಿಯಲ್ಲಿ 312 ಕೈಗಾರಿಕೆಗಳಿವೆ. ಕೆಐಎಡಿಬಿ ಬಳಿ ಜಮೀನು ಇದ್ದರೆ 3-4 ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಟ್ರೀಟ್‌ ಮೆಂಟ್‌ ಪ್ಲಾಂಟ್‌ ಮಾಡಬಹುದು. ಈ ಬಗ್ಗೆ ಗಮನ ಹರಿಸಿ ಎಂದು ತಹಶೀಲ್ದಾರ್‌ ಮೋಹನಕುಮಾರಿ ಅವರಿಗೆ ಜಿಲ್ಲಾಧಿಕಾರಿ ಆರ್‌.ಲತಾ ಸೂಚಿಸಿದರು

Advertisement

Udayavani is now on Telegram. Click here to join our channel and stay updated with the latest news.

Next