Advertisement

ಡಿಸಿ ಅನುಮತಿಯೊಂದಿಗೆ ಮೆಷಿನರಿ ಕಾಮಗಾರಿ ಪ್ರಾರಂಭ

09:15 PM Apr 18, 2020 | Sriram |

ಬಂಟ್ವಾಳ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ನಿಂತುಹೋಗಿದ್ದ ಬಿ.ಸಿ. ರೋಡ್‌- ಪುಂಜಾಲಕಟ್ಟೆ ಹೆದ್ದಾರಿಯ ಕಾಮಗಾರಿ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಆರಂಭಗೊಂಡಿದೆ. ಸೀಮಿತ ಸಂಖ್ಯೆಯ ಕಾರ್ಮಿಕರ ಸಹಿತ ಮೆಷಿನರಿ ಕಾಮಗಾರಿ ಗಳು ಈಗ ನಡೆಯುತ್ತಿವೆ.

Advertisement

ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಗಿಸುವ ಗುರಿ ಇರುವ ಜತೆಗೆ ಮಳೆಗಾಲಕ್ಕೆ ಮುಂಚಿತವಾಗಿ ಹೆದ್ದಾರಿಯಲ್ಲಿ ಸರಾಗವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಬಹುತೇಕ ಕಡೆ ಜಲ್ಲಿ ಹಾಕಲಾಗಿದ್ದು, ಒಂದು ವೇಳೆ ಮಳೆ ಬಂದರೂ ಸಂಚಾರಕ್ಕೆ ತೊಂದರೆಯಾಗದ ಸ್ಥಿತಿಗೆ ತರಬೇಕಿದೆ.

ಸೇತುವೆಗೆ ಸಂಪರ್ಕ ರಸ್ತೆ
ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ಈ ರಸ್ತೆಯಲ್ಲಿ ಒಟ್ಟು 3 ಕಿರುಸೇತುವೆಗಳು ನಿರ್ಮಾಣಗೊಂಡಿದ್ದು, ಭಂಡಾರಿಬೆಟ್ಟು- ಅಜೆಕಲ ಮಧ್ಯೆ, ಬೈಪಾಸ್‌ ಬಳಿಯ ಸೇತುವೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಕ್ರಿಬೆಟ್ಟು ಬಳಿ ಕಿರು ಸೇತುವೆಗೆ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ. ಪ್ರಸ್ತುತ ತೋಡಿಗೆ ಅಡ್ಡಲಾಗಿ ಮಣ್ಣು ಹಾಕಿ ರಸ್ತೆ ಮಾಡಲಾಗಿದ್ದು, ಮಳೆ ಬಂದು ತೋಡಿನಲ್ಲಿ ನೀರು ಬರುವುದಕ್ಕಿಂತ ಮುಂಚಿತವಾಗಿ ಸೇತುವೆಗೆ ಸಂಪರ್ಕ ರಸ್ತೆಯಾಗಬೇಕಿದೆ.

ಕಾಂಕ್ರೀಟ್‌ ಪ್ರಾರಂಭವಾಗಿತ್ತು
ಬಿ.ಸಿ.ರೋಡ್‌-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿಯಲ್ಲಿ ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ (3.85 ಕಿ.ಮೀ.) ಹೆದ್ದಾರಿಗೆ ಕಾಂಕ್ರೀಟ್‌ ಸಹಿತ ಚತುಷ್ಪಥಗೊಳ್ಳಲಿದ್ದು, ಗಾಣದಪಡು ನಾರಾಯಣ ಗುರು ಮಂದಿರದ ಬಳಿಯಿಂದ ಕಾಂಕ್ರೀಟ್‌ ಕಾಮಗಾರಿಯೂ ಪ್ರಾರಂಭಗೊಂಡಿತ್ತು. ಆದರೆ ಮಾ. 23ರ ವೇಳೆಗೆ ಲಾಕ್‌ಡೌನ್‌ ಘೋಷಣೆಯಾದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಮಣ್ಣು ಹಾಕಿ ಹೆದ್ದಾರಿಯನ್ನು ಎತ್ತರಗೊಳಿಸಿರುವ ಭಾಗಗಳಲ್ಲಿ ತಡೆಗೋಡೆಯ ಕಾಮ ಗಾರಿಯೂ ನಡೆಯಬೇಕಿದೆ.

ಅನುಮತಿಯೊಂದಿಗೆ ಕಾಮಗಾರಿ
ಮಳೆ ಬರುವುದಕ್ಕೆ ಮುಂಚಿತವಾಗಿ ಹೆದ್ದಾರಿಯನ್ನು ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಮೆಷಿನರಿ ಕಾಮಗಾರಿ ಪ್ರಾರಂಭಗೊಂಡಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಸಂಖ್ಯೆಯ ಕಾರ್ಮಿಕರು ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆ ಅರ್ಧಕ್ಕೆ ನಿಂತಿರುವ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಕೇಳಲಿದ್ದೇವೆ.
 - ರಮೇಶ್‌ , ಎಇಇ, ರಾ.ಹೆ. ವಿಭಾಗ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next