Advertisement

ವಾಂಖೇಡೆಯಲ್ಲಿಂದು ಪ್ರತಿಷ್ಠೆಯ ಸಮರ: ಮುಂಬೈ ಇಂಡಿಯನ್ಸ್‌-ರಾಯಲ್‌ ಚಾಲೆಂಜರ್ ಬೆಂಗಳೂರು

01:40 AM Apr 11, 2024 | Team Udayavani |

ಮುಂಬಯಿ: ಸೋಲಿನ ಸುಳಿಗೆ ಸಿಲುಕಿ ಪರದಾಡುತ್ತಿರುವ ಆರ್‌ಸಿಬಿ ಹಾಗೂ ಗೆಲುವಿನ ಹಳಿ ಏರಿರುವ ಮುಂಬೈ ಇಂಡಿಯನ್ಸ್‌ ಗುರುವಾರ ಮಹತ್ವದ ಪಂದ್ಯದಲ್ಲಿ ಎದುರಾಗಲಿವೆ. ಇದು “ವಾಂಖೇಡೆ’ಯಲ್ಲಿ ನಡೆಯುವ ಪಂದ್ಯವಾದ್ದರಿಂದ, ಹಾಗೂ ಕಳೆದ ಪಂದ್ಯದಲ್ಲಿ ಇಲ್ಲಿಯೇ ಜಯದ ಖಾತೆ ತೆರೆದ ಕಾರಣ ಪಾಂಡ್ಯ ಪಡೆಯೇ ಫೇವರಿಟ್‌ ಆಗಿ ಗೋಚರಿಸುತ್ತಿದೆ.

Advertisement

ಸದ್ಯ ಆರ್‌ಸಿಬಿ 5 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು 9ನೇ ಸ್ಥಾನದಲ್ಲಿದೆ. ಮುಂಬೈ ಕೂಡ ಗೆದ್ದಿರುವುದು ಒಂದೇ ಪಂದ್ಯ. ಆದರೆ ಆಡಿದ್ದು 4 ಪಂದ್ಯ ಮಾತ್ರ. ಡೆಲ್ಲಿಯನ್ನು ಮಣಿಸಿ ಕೊನೆಯ ಸ್ಥಾನದಿಂದ ಎಂಟಕ್ಕೇರಿದೆ.

ಪ್ರಸಕ್ತ ಋತುವಿನಲ್ಲಿ ಈ ಎರಡೂ ತಂಡಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫ‌ಲವಾಗಿವೆ. ಮುಂಬೈ ತಂಡದಲ್ಲಿ ಭಿನ್ನಾಭಿಪ್ರಾಯ ಇದೆ ಎನ್ನಬಹುದಾದರೂ, ಆರ್‌ಸಿಬಿ ಪಾಳೆಯದಲ್ಲಿ ಅಂತಹ ಒಳ ರಾಜಕೀಯವೇನೂ ಗೋಚರಿಸದು. ಆದರೆ ವಿರಾಟ್‌ ಕೊಹ್ಲಿ ಹೊರತುಪಡಿಸಿ ಉಳಿದವರ್ಯಾರೂ ತಮ್ಮ ಛಾತಿಗೆ ತಕ್ಕ ಆಟವಾಡುತ್ತಿಲ್ಲ. ಬೇರೆಲ್ಲ ಕಡೆ ಚೆನ್ನಾಗಿ ಆಡುವವರು ಆರ್‌ಸಿಬಿ ಸೇರಿದ ಬಳಿಕ ಮಂಕಾಗುತ್ತಿರುವುದು ವಿಪರ್ಯಾಸ!

ವಿದೇಶಿಗರ ವೈಫ‌ಲ್ಯ
ಒಂದೆಡೆ ವಿರಾಟ್‌ ಕೊಹ್ಲಿ ರನ್‌ ಗಳಿಸುತ್ತಿದ್ದರೂ ಉಳಿದವರ ಕೊಡುಗೆ ದೊಡ್ಡ ಶೂನ್ಯ. ಅದರಲ್ಲೂ ವಿದೇಶಿ ಕ್ರಿಕೆಟಿಗರ ಆಟ ಥರ್ಡ್‌ ಕ್ಲಾಸ್‌ ಮಟ್ಟದಲ್ಲೂ ಇಲ್ಲ. ಇದರಲ್ಲಿ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಅಗ್ರಸ್ಥಾನ. ಇವರು ಈವರೆಗೆ ಗಳಿಸಿದ್ದು ಬರೀ 32 ರನ್‌!

ಫಾ ಡು ಪ್ಲೆಸಿಸ್‌ ಗಳಿಕೆ 109 ರನ್‌. ಇವರ ನಾಯಕತ್ವ ಕೂಡ ಪರಿಣಾಮಕಾರಿಯಾಗಿಲ್ಲ. ಭಾರೀ ಭರವಸೆ ಇರಿಸಿದ್ದ ಕ್ಯಾಮರಾನ್‌ ಗ್ರೀನ್‌ ಕೊಡುಗೆ ಬರೀ 68 ರನ್‌.

Advertisement

ಇವರೆಲ್ಲ ಸೇರಿ 209 ರನ್‌ ಗಳಿಸಿದರೆ, ಕೊಹ್ಲಿ ಒಬ್ಬರೇ 316 ರನ್‌ ಬಾರಿಸಿ ಫಾರ್ಮ್ ತೆರೆದಿರಿಸಿ ದ್ದಾರೆ. ಸ್ಟ್ರೈಕ್‌ರೇಟ್‌ 146.29. ಕೇವಲ 5 ತಿಂಗಳ ಹಿಂದೆ ವಾಂಖೇಡೆಯಲ್ಲೇ ನಡೆದ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ 50ನೇ ಏಕದಿನ ಶತಕ ಬಾರಿಸಿದ್ದ ವಿರಾಟ್‌ ಕೊಹ್ಲಿ ಮೇಲೆ ಮತ್ತೊಮ್ಮೆ ಬಹು ದೊಡ್ಡ ಬ್ಯಾಟಿಂಗ್‌ ಜವಾಬ್ದಾರಿ ಬೀಳುವುದರಲ್ಲಿ ಅನುಮಾನವಿಲ್ಲ.

ಅನುಜ್‌ ರಾವತ್‌, ರಜತ್‌ ಪಾಟಿದಾರ್‌ ಕೂಡ ಸ್ಥಿರವಾದ ಬ್ಯಾಟಿಂಗ್‌ ತೋರ್ಪಡಿಸುವಲ್ಲಿ ವಿಫ‌ಲರಾಗಿದ್ದಾರೆ. ಇವರೆಲ್ಲ ಒಮ್ಮಿಂದೊಮ್ಮೆಲೇ ಸಿಡಿದು ನಿಂತು ದೊಡ್ಡ ಮೊತ್ತ ಪೇರಿಸಿದರು ಎಂದಿಟ್ಟುಕೊಂಡರೂ ಇದನ್ನು ಉಳಿಸಿ ಕೊಡಬಲ್ಲ ಬೌಲರ್‌ಗಳೇ ಆರ್‌ಸಿಬಿ ಪಾಳೆಯದಲ್ಲಿಲ್ಲ. ಎಲ್ಲರೂ ಲೆಕ್ಕದ ಭರ್ತಿ ಗೆಂಬಂತಿ ದ್ದಾರೆ. ಹಾಗೆ ಬಂದು 4 ಓವರ್‌ಗಳನ್ನು ಹಾಕಿ ಹೋಗುತ್ತಿದ್ದಾರೆ. ಇಲ್ಲಿಯೂ ವಿದೇಶೀಯರದೇ ವೈಫ‌ಲ್ಯ ಎದ್ದು ಕಾಣುತ್ತದೆ. ಅಲ್ಜಾರಿ ಜೋಸೆಫ್ ಮತ್ತು ರೀಸ್‌ ಟಾಪ್ಲಿ ರನ್‌ ನೀಡಲು ಪೈಪೋಟಿ ನೀಡುತ್ತಿದ್ದಾರೆ. ಲಾಕೀ ಫ‌ರ್ಗ್ಯುಸನ್‌ ಒಬ್ಬರು ಬಾಕಿ ಉಳಿದಿದ್ದಾರೆ.

ಮುಂಬೈ ಬ್ಯಾಟಿಂಗ್‌ ಬಲಿಷ್ಠ
ಆರ್‌ಸಿಬಿಗೆ ಹೋಲಿಸಿದರೆ ಮುಂಬೈಯ ಬ್ಯಾಟಿಂಗ್‌ ವಿಭಾಗ ಭಾರೀ ಬಲಿಷ್ಠವಾಗಿದೆ. ಡೆಲ್ಲಿ ಎದುರಿನ ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಸೊನ್ನೆಯ ಹೊರತಾಗಿಯೂ 5ಕ್ಕೆ 234 ರನ್‌ ಪೇರಿಸಿದ್ದೇ ಇದಕ್ಕೊಂದು ಉದಾಹರಣೆ. ರೊಮಾರಿಯೋ ಶೆಫ‌ರ್ಡ್‌ ಅವರ ಸ್ಫೋಟಕ ಆಟ ಇನ್ನೂ ಕಣ್ಮುಂದಿದೆ. ರೋಹಿತ್‌ ಶರ್ಮ, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಟಿಮ್‌ ಡೇವಿಡ್‌ ಕೂಡ ಸಿಡಿದು ನಿಂತಿದ್ದರು.ಆದರೆ ಚೇಸಿಂಗ್‌ ವೇಳೆ ಡೆಲ್ಲಿಗೆ ಸೂಕ್ತ ಕಡಿವಾಣ ಹಾಕಲಾಗದಿದ್ದುದು ಮುಂಬೈಯ ಬೌಲಿಂಗ್‌ ವೈಫ‌ಲ್ಯವನ್ನು ತೆರೆದಿಡುತ್ತದೆ. ಬೆನ್ನಟ್ಟಿ ಬಂದ ಪಂತ್‌ ಪಡೆ 8ಕ್ಕೆ 205 ರನ್‌ ಗಳಿಸಿತ್ತು. ಕೋಟಿj ಮತ್ತು ಬುಮ್ರಾ ಮಾತ್ರ ಯಶಸ್ಸು ಸಾಧಿಸಿದ್ದರು.

ಯಾವ ಪಿಚ್‌ನಲ್ಲಿ ಆಟ?
ವಾಂಖೇಡೆಯ ಯಾವ ಟ್ರ್ಯಾಕ್‌ ಮೇಲೆ ಈ ಪಂದ್ಯ ನಡೆಯಲಿದೆ ಎಂಬುದು ಕೂಡ ಮುಖ್ಯ. ಇಲ್ಲಿನ ಒಂದು ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಉದಾಹರಣೆಗೆ ರಾಜಸ್ಥಾನ್‌ ಎದುರಿನ ಪಂದ್ಯ. ಎಪ್ರಿಲ್‌ ಒಂದರ ಈ ಮುಖಾಮುಖಿ ಯಲ್ಲಿ ಮುಂಬೈ ಕೇವಲ 125 ರನ್‌ ಮಾಡಿತ್ತು. ಇನ್ನೊಂದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌. ಇನ್ನೊಂದು ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಬಳಸಲಾದ ಟ್ರ್ಯಾಕ್‌. ಇಲ್ಲಿ ಇತ್ತಂಡಗಳೂ ಇನ್ನೂರರ ಗಡಿ ದಾಟಿದ್ದವು.

ಒಟ್ಟಾರೆ ಹೇಳುವುದಾದರೆ, ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಇಬ್ಬರಿಗೂ ಗೆಲುವು ಮುಖ್ಯ. ಇನ್ನಿರುವುದು ಅದೃಷ್ಟದ ಆಟ.

 

Advertisement

Udayavani is now on Telegram. Click here to join our channel and stay updated with the latest news.

Next