ಲಕ್ನೋ: ಉತ್ತರ ಪ್ರದೇಶದ ಚುನಾವಣಾ ಕಣದಲ್ಲೀಗ ಪತ್ನಿಯರದ್ದೇ ಕಹಳೆ. ಎಸ್ಪಿ ಮಖಂಡ ಮುಲಾಯಂ ಸಿಂಗ್ ಅವರ ಮುದ್ದಿನ ಸೊಸೆ, ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ ಹೊರತಾಗಿಯೂ ಇಲ್ಲಿ ಒಟ್ಟು 40 ಪತ್ನಿಯರು ಚುನಾವಣಾ ಕಣದಲ್ಲಿದ್ದಾರೆ.
ಇಲ್ಲಿ ಅನೇಕ ಪತ್ನಿಯರ ಗಂಡಂದಿರು ಜೈಲಲ್ಲಿದ್ದಾರೆ. ಕೆಲವರಿಗೆ ಕ್ರಿಮಿನಲ್ ಕೇಸ್ ಇರುವ ಕಾರಣ ಪತ್ನಿಯ ರನ್ನೇ ಸ್ಪರ್ಧೆಗೆ ಇಳಿಸಿದ್ದಾರೆ. ಇನ್ನೂ ಕೆಲವರ ಗಂಡಂದಿರು ಹತ್ಯೆ ಆಗಿದ್ದಾರೆ. ಹೀಗೆ ಎಲ್ಲ ಸ್ತ್ರೀ ಸ್ಪರ್ಧಾಳುಗಳನ್ನೂ ಮುಂದಿಟ್ಟು ಅನುಕಂಪದ ಆಧಾರದಲ್ಲಿ ಮತ ಸೆಳೆಯಲು ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ.
ಕಣದಲ್ಲಿ ಯಾರ್ಯಾರು?: ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ದಯಾಶಂಕರ್ ಸಿಂಗ್ ಪತ್ನಿ ಸ್ವಾತಿ ಸಿಂಗ್ ಲಕ್ನೋ ಕ್ಷೇತ್ರದ ಅಭ್ಯರ್ಥಿ. ಮಾಯಾವತಿ ವಿರುದ್ಧ ಅಶ್ಲೀಲ ಮಾತುಗಳನ್ನಾಡಿ, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಸಿಂಗ್ ಅವರು ತಮ್ಮ ಪತ್ನಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದಾರೆ. ನಾನ್ಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಧುರಿ ವರ್ಮಾ, ಬಿಜೆಪಿಯ ಮಾಜಿ ಶಾಸಕ ದಿಲೀಪ್ ವರ್ಮಾ ಪತ್ನಿ. ದಿಲೀಪ್ ವರ್ಮಾ ಈ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದವರು.
ಹಾಂಡಿಯಾ ಕ್ಷೇತ್ರದ ಪರ್ಮಿಳಾಧರ್ ತ್ರಿಪಾಠಿ, ರಾಕೇಶ್ಧರ್ ತ್ರಿಪಾಠಿ ಪತ್ನಿ. ಆದಾಯ ಮೀರಿ ಆಸ್ತಿ ಹೊಂದಿದ ಪ್ರಕರಣದಲ್ಲಿ ಜೈಲು ಸೇರಿದ್ದ ರಾಕೇಶ್ ಜಾಮೀನು ಪಡೆದಿದ್ದಾರೆ. ಇದೇ ಕಾರಣಕ್ಕೆ ಅವರು ಬಿಎಸ್ಪಿಯಿಂದ ಉಚ್ಚಾಟಿತರಾಗಿ, ಪತ್ನಿಯನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಮೇಜಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನೀಲಮ್ ಸ್ಪರ್ಧಿಸುತ್ತಿದ್ದು, ಅವರ ಪತಿ ಉದಯ್ಭಾನ್ ಮೇಲೆ ಸಾಕಷ್ಟು ಕ್ರಿಮಿನಲ್ ಕೇಸುಗಳಿವೆ.
ಪತಿ ತೊರೆದ ದುಃಖ: ಕಣದಲ್ಲಿರುವ ಇನ್ನೂ ಅನೇಕ ಮಹಿಳೆಯರಿಗೆ ಪತಿಯನ್ನು ಕಳೆದುಕೊಂಡ ದುಃಖವಿದೆ. ಈ ಅನುಕಂಪವನ್ನೇ ಮತಗಳನ್ನಾಗಿ ಪರಿವರ್ತಿಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಮೊಹ್ಮದಾಬಾದ್ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಅಲಕಾ ರೈ, ಪಕ್ಷದ ಮುಖಂಡ ಕೃಷ್ಣಾನಂದ ರೈ ಪತ್ನಿ. 2005ರಲ್ಲಿಯೇ ಅವರನ್ನು ಮುಖ್ತರ್ ಅನ್ಸಾರಿ ಗ್ಯಾಂಗ್ ಹತ್ಯೆ ಮಾಡಿತ್ತು.
ಟಾಂಡಾ ಕ್ಷೇತ್ರದ ಬಿಜೆಪಿ ಹುರಿಯಾಳು ಸಂಜು ದೇವಿ ಅವರ ಪತಿ 2013ರ ಕೋಮು ಗಲಭೆಯಲ್ಲಿ ಹತ್ಯೆಯಾದವರು. ರಾಷ್ಟ್ರೀಯ ಲೋಕದಳದ ನೇತಾರ ಮುನ್ನಾ ಸಿಂಗ್ ನಿಧನದ ನಂತರ ಅವರ ಪತ್ನಿ ಶೋಭಾ ಬಿಜೆಪಿ ಸೇರಿ, ಬಿಕಾಪುರ್ನಿಂದ ಸ್ಪರ್ಧಿಸುತ್ತಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಪೂಜಾಪಾಲ್ ಅವರ ಪತಿ ರಾಜು ಪಾಲ್ ಇತ್ತೀಚೆಗಷ್ಟೇ ಹತ್ಯೆಗೀಡಾದವರು. ಇಟಾವಾ ಕ್ಷೇತ್ರದ ಬಿಜೆಪಿ ಹುರಿಯಾಳು ಸರಿತಾ ಅವರು ದಿವಂಗತ ಅಭಯ್ವೀರ್ ಸಿಂಗ್ ಅವರ ಪತ್ನಿ. ಈ ನಡುವೆ ಫೆ.19ರ ಮತದಾನಕ್ಕೆ ಸಂಬಂಧಿಸಿದಂತೆ ಅದ್ಧೂರಿ ಪ್ರಚಾರ ಶುಕ್ರವಾರ ಮುಕ್ತಾಯವಾಗಿದೆ.