Advertisement

ಹೂವು-ಮುಳ್ಳಿನ ವರ್ಷದ ನಡಿಗೆ

02:00 AM Jul 28, 2022 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಿಎಂ ಆಗಿ ಅಧಿಕಾರಕ್ಕೇರಿ ಇಂದಿಗೆ ಸರಿಯಾಗಿ ಒಂದು ವರ್ಷ. ಇದರ ಅಂಗವಾಗಿ, ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ಒಂದು ವರ್ಷಗಳ ಕಾಲ, ಸಿಎಂ ಬೊಮ್ಮಾಯಿ ಅವರ ಸರಕಾರದ ಸಾಧನೆಗಳೇನು? ಎದುರಿಸಿದ ಸವಾಲುಗಳೇನು? ಈ ಕುರಿತ ಒಂದು ನೋಟ ಇಲ್ಲಿದೆ.

Advertisement

ಕನಸಿನ ಯೋಜನೆ ವಿದ್ಯಾನಿಧಿ
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ ಮೊದಲ ಯೋಜನೆ “ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’. ಘೋಷಣೆ ಮಾಡಿದ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇದರಡಿ ರೈತ ಕುಟುಂಬ ದಲ್ಲಿರುವ 8ನೇ ತರಗತಿ ಮೇಲ್ಪಟ್ಟ ಎಲ್ಲ ಹೆಣ್ಣುಮಕ್ಕಳು ಹಾಗೂ ಎಸ್ಸೆಸ್ಸೆಲ್ಸಿ ಪೂರೈಸಿದ ಗಂಡುಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. 2022-23ರಲ್ಲಿ ಯೋಜನೆ ಅಡಿ 73.73 ಕೋಟಿ ರೂ. ಮೀಸಲಿಟ್ಟಿದ್ದು, 1.22 ಲಕ್ಷ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲು ಈಗಾಗಲೇ ಹಣ ಮಂಜೂರು ಮಾಡಿದೆ. 8ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ವಾರ್ಷಿಕ 2 ಸಾವಿರ ರೂ. ವಿದ್ಯಾರ್ಥಿ ವೇತನ ನೀಡ ಲಾಗುತ್ತದೆ. ಅದೇ ರೀತಿ, ಪಿಯುಸಿ/ ಐಟಿಐ/ ಡಿಪ್ಲೊಮಾ ವ್ಯಾಸಂಗ ಮಾಡು ತ್ತಿರುವ ಬಾಲಕರು ಮತ್ತು ಬಾಲಕಿಯರಿಗೆ ವಾರ್ಷಿಕ ಕ್ರಮವಾಗಿ 2,500 ಹಾಗೂ 3,000 ರೂ. ನೀಡಲಾಗುತ್ತದೆ. ಇದೇ ರೀತಿ, ಪದವಿ ಮತ್ತು ತತ್ಸಮಾನ ಕೋರ್ಸ್‌ಗಳಿಗೆ 5,000 ಹಾಗೂ 5,500 ರೂ., ವೃತ್ತಿಪರ ಕೋರ್ಸ್‌ಗಳಿಗೆ 7,500 ಮತ್ತು 8,000 ರೂ., ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಸೇರಿದಂತೆ ಸ್ನಾತಕೋತ್ತರ ಪದವಿಗೆ 10 ಸಾವಿರ ಹಾಗೂ 11 ಸಾವಿರ ರೂ. ನೀಡಲಾಗುತ್ತದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಸ್ಪಲ್ಪ ಮಟ್ಟಿಗಾದರೂ ನನಗೆ ಇದ್ದ ನಿರೀಕ್ಷೆ ಹುಸಿಯಾಗಿದೆ. ದಕ್ಷ ಹಾಗೂ ಜನಪರ ಉತ್ತಮ ಆಡಳಿತ, ಕಾನೂನು ಸುವ್ಯವಸ್ಥೆ ಪಾಲನೆ, ಭ್ರಷ್ಟಾಚಾರ ನಿಯಂತ್ರಣ ಇದ್ಯಾವುದೂ ಇವರ ಕೈಲಿ ಆಗಲಿಲ್ಲ. ಪಿಎಸ್‌ಐ ಹಗರಣ, ಶೇ.40 ಪರ್ಸೆಂಟ್‌ ಕಮೀಷನ್‌ ಇವರ ಆಡಳಿ ತಕ್ಕೆ ಸಾಕ್ಷಿ. ರಬ್ಬರ್‌ ಸ್ಟಾಂಪ್‌ ಆಗಿ ಕೆಲಸ ಮಾಡಿದರು ಅಷ್ಟೇ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ಸರಕಾರಭ್ರಷ್ಟಾಚಾರದಲ್ಲಿ ಮುಳುಗಿದ್ದು ಬಿಟ್ಟರೆ ಸರಕಾರ ಬೇರ್ಯಾವ ಸಾಧನೆಯೂ ಮಾಡಲಿಲ್ಲ. ಯುವ ಸಮೂಹಕ್ಕೆ ಉದ್ಯೋಗ ಸಿಗಲಿಲ್ಲ, ರೈತರು, ಕಾರ್ಮಿಕರು, ಬಡವರಿಗೆ ಉಪಯೋಗವಾಗುವಂತಹ ಯೋಜನೆ ರೂಪಿಸಲಿಲ್ಲ. ಆದರೂ ಜನೋತ್ಸವ ನಡೆಸುತ್ತಿರುವುದು ಹಾಸ್ಯಾಸ್ಪದ. ಅದಕ್ಕೇ ನಾವು ಅದನ್ನು ಭ್ರಷ್ಟೋತ್ಸವ ಎಂದು ಕರೆದಿದ್ದೇವೆ.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

3 ವರ್ಷದಿಂದ ಯಡಿಯೂರಪ್ಪ ಹಾಗೂ ಈಗ ಬೊಮ್ಮಾಯಿ ನೇತೃತ್ವದ ಸರಕಾರಜನಪರ ಕೆಲಸ ಮಾಡಿದೆ. ಕೊವಿಡ್‌ ಸಂದರ್ಭದಲ್ಲಿ ದೇಶದಲ್ಲಿಯೇ ಮಾದರಿ ಕಾರ್ಯ ನಿರ್ವಹಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದಿದ್ದಾರೆ. ಅತಿ ವೇಗವಾಗಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರಕಾರಯಶಸ್ವಿಯಾಗಿದೆ.
– ನಳೀನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Advertisement

ಎಲ್ಲದಕ್ಕೂ ಹೈಕೋರ್ಟ್‌ ಚಾಟಿ ಬೀಸಬೇಕು. ಆ ನಂತರವಷ್ಟೇ ಇವರು ಕೆಲಸ ಮಾಡುತ್ತಾರೆ. ಈ ಒಂದು ವರ್ಷದಲ್ಲಂತೂ ಹಗರಣಗಳಿಗೆ ಲೆಕ್ಕವೇ ಇಲ್ಲ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‌ ಗಿರಿ ಹೆಚ್ಚಾಗಿದೆ. ಮತಬ್ಯಾಂಕ್‌ಗಾಗಿ ಇಂತಹ ಕೃತ್ಯಗಳಿಗೆ ಅವಕಾಶ ಮಾಡಿಕೊಟ್ಟು ಬಿಜೆಪಿ ಪೋಷಣೆ ಮಾಡುತ್ತಿದೆ. ಇದು ಇವರ ಸಾಧನೆ.
– ಬಿ.ಕೆ.ಹರಿಪ್ರಸಾದ್‌, ಪರಿಷತ್‌ ವಿಪಕ್ಷನಾಯಕ

5 ಪ್ರಮುಖ ಯೋಜನೆಗಳು
1. ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪೋ›ತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಡಿಬಿಟಿ ಮೂಲಕ ಡೀಸೆಲ್‌ ಸಹಾಯಧನ ನೀಡುವ “ರೈತ ಶಕ್ತಿ ಯೋಜನೆ’.
2. ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆ ಗಳು ವಾರ್ಷಿಕ 11,000 ರೂ.ಗಳ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವುದನ್ನು ಪೋ›ತ್ಸಾಹಿಸಲು “ಪುಣ್ಯಕೋಟಿ ದತ್ತು ಯೋಜನೆ’.
3. ಆಳ ಸಮುದ್ರ ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು “ಮತ್ಸé ಸಿರಿ ಯೋಜನೆ’.
4. ಯುಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್‌, ರೈಲ್ವೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್‌ ನೀಡಲು “ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ ಯೋಜನೆ’.
5. ಅಸಾಂಕ್ರಾಮಿಕ ರೋಗಳನ್ನು ಪತ್ತೆ ಹಚ್ಚಿನ ಹೆಚ್ಚಿನ ಚಿಕಿತ್ಸೆಗೆ ತಜ್ಞರ ಬಳಿ ಕಳಿಸುವ ಸೇವೆ ಒದಗಿಸಲು ಪ್ರಮುಖ ನಗರಗಳಲ್ಲಿ 439 “ನಮ್ಮ ಕ್ಲಿನಿಕ್‌’ಗಳ ಸ್ಥಾಪನೆ’.

ಇಲ್ಲಿನ ವಾತಾವರಣ ನೋಡಿ ಕೈಗಾರಿಕೆಗಳು ವಲಸೆ ಹೋಗುತ್ತಿವೆ. ಇವರ ಒಂದು ವರ್ಷದ ಸಾಧನೆ ಏನು ಎಂಬ ಬಗ್ಗೆ ಬಿಜೆಪಿಯವರು ಅಂಕಿ-ಅಂಶ ಸಹಿತ ಪ್ರಗತಿಯ ಮಾಹಿತಿ ನೀಡಿದರೆ ಸೂಕ್ತ. ಹಿಜಾಬ್‌ ಗಲಾಟೆ, ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಪಿಎಸ್‌ಐ -ಉಪನ್ಯಾಸಕರ ನೇಮಕಾತಿ ಹಗರಣ ಇವು ಸಾಧನೆಗಳೇ.
– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಪ್ರಮುಖ ಸವಾಲುಗಳು

40 ಪರ್ಸೆಂಟ್‌ ಕಮಿಷನ್‌, ಪಿಎಸ್‌ಐ ಪ್ರಕರಣ
40 ಪರ್ಸೆಂಟ್‌ ಕಮಿಷನ್‌ ಸಂಬಂಧ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಬರೆದ ಪತ್ರವೂ ಸದ್ದು ಮಾಡಿತು. ಶೇ.40 ಕಮಿಷನ್‌ ಕೊಡದೆ ಯಾವುದೇ ಕೆಲಸಗಳಾಗುವುದಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದರು. ಅಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕಾಮಗಾರಿ ನಡೆಸಿ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿ ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ಆತ್ಮಹತ್ಯೆಯನ್ನೂ ಮಾಡಿಕೊಂಡರು. ಈ ಬಳಿಕ ಈ ವಿವಾದ ಇನ್ನಷ್ಟು ಜೋರಾಯಿತು. ಕಡೆಗೆ ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ನೀಡಿದರು. ಇದರ ಮಧ್ಯೆಯೇ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಭಾಗಿಯಾಗಿದ್ದಾರೆ ಎನ್ನಲಾದ ಪಿಎಸ್‌ಐ ಹಗರಣವೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಈ ವಿಚಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಪಕ್ಷಗಳು ಈಗಲೂ ಟೀಕೆ ಮಾಡುತ್ತಲೇ ಇವೆ.

ಹಿಂದೂ ಕಾರ್ಯಕರ್ತರ ಕೊಲೆ
ಹಿಂದೂ ಕಾರ್ಯಕರ್ತರಾದ ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ ಹತ್ಯೆಗಳು ಬೊಮ್ಮಾಯಿ ಸರಕಾರಕ್ಕೆ ಸಂಕಷ್ಟ ತಂದವು. ಫೆ.21ರಂದು ಶಿವಮೊಗ್ಗ ನಗರದಲ್ಲಿ ಹರ್ಷ ಅವರ ಹತ್ಯೆಯಾಗಿತ್ತು. ಈ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಇತ್ತೀಚೆಗಷ್ಟೇ ಹರ್ಷ ಕೊಲೆ ಆರೋಪಿಗಳು, ಜೈಲಿನಲ್ಲಿ ಆರಾಮಾಗಿ ಬಿರಿಯಾನಿ ತಿನ್ನುತ್ತಿದ್ದಾರೆ ಎಂಬ ಸುದ್ದಿಯೂ ಮತ್ತೂಂದು ರೀತಿಯ ಆಕ್ರೋಶಕ್ಕೆ ಕಾರಣವಾಯಿತು. ಇದರ ಜತೆಗೆ, ಬೊಮ್ಮಾಯಿ ಸರಕಾರದ ವರ್ಷಾಚರಣೆಗೆ ಇನ್ನೆರಡು ದಿನ ಇರುವಾಗಲೇ ಪ್ರವೀಣ್‌ ಹತ್ಯೆಯಾಗಿರುವುದರಿಂದ ಬಿಜೆಪಿ ಕಾರ್ಯಕರ್ತರೇ ಆಕ್ರೋಶಗೊಂಡಿದ್ದಾರೆ. ನಮ್ಮದೇ ಸರಕಾರದಲ್ಲಿ ನಮಗೇ ರಕ್ಷಣೆ ಇಲ್ಲ ಎಂಬುದು ಇವರ ಆಕ್ರೋಶಕ್ಕೆ ಕಾರಣವಾಗಿರುವ ಅಂಶ. ಇದರ ನಡುವೆ, ಬೆಂಗಳೂರಿನಲ್ಲಿ ಭಾಷೆ ವಿಚಾರಕ್ಕೆ ಎನ್ನಲಾದ ಚಂದ್ರು ಎಂಬವರ ಕೊಲೆಯೂ ರಾಜ್ಯದಲ್ಲಿ ಸುದ್ದಿ ಮಾಡಿತ್ತು.

ಹಿಜಾಬ್‌, ಹಲಾಲ್‌ ಕಟ್‌, ಧರ್ಮ ಸಂಘರ್ಷ, ಕೋಮುಗಲಭೆಗಳು
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಹೆಚ್ಚಾಗಿ ಕಾಡಿದ್ದು ಈ ಹಿಜಾಬ್‌, ಹಲಾಲ್‌ ಕಟ್‌ನಂಥ ಕೋಮು ಸೂಕ್ಷ್ಮ ವಿಚಾರಗಳು. ಅಧಿಕಾರ ವಹಿಸಿಕೊಂಡಾಗಿ ನಿಂದಲೂ ಈ ಸಮಸ್ಯೆ ಇದ್ದೇ ಇತ್ತು. ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಉದ್ಭವವಾದ ಹಿಜಾಬ್‌ ವಿವಾದ, ಇಡೀ ದೇಶವನ್ನೇ ಆವರಿಸಿತು. ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಕೊಂಡು ಬರುವಂತಿಲ್ಲ ಎಂಬ ಕಾಲೇಜು ರೂಪಿಸಿದ್ದ ನಿಯಮ, ರಾಜ್ಯದ ಇತರೆಡೆಗೂ ಹಬ್ಬಿ ಇದೊಂದು ರೀತಿ ಕೋಮು ಸಂಘರ್ಷದ ಸ್ಥಿತಿಯಾಗಿ ಮಾರ್ಪಟ್ಟಿತು. ಇನ್ನು ಹಲಾಲ್‌ ಕಟ್‌ ವಿವಾದವೂ ಬೊಮ್ಮಾಯಿ ಸರಕಾರವನ್ನು ಕೆಣಕಿತು. ಮಾಂಸದ ಅಂಗಡಿಗಳಲ್ಲಿ ಹಿಂದೂಗಳಿಗೂ ಹಲಾಲ್‌ ಮಾಡಿ ಕೊಡಲಾಗುತ್ತಿದೆ. ಇದು ಸಲ್ಲದು ಎಂದು ಒಂದು ಅಭಿಯಾನವೂ ನಡೆಯಿತು. ಅಜಾನ್‌ಗೆ ಸಂಬಂಧಿಸಿದಂತೆ ವಿವಾದವೂ ಶುರುವಾಗಿ, ಕಡೆಗೆ ಸರಕಾರವೇ ಮಾರ್ಗಸೂಚಿ ನೀಡಿತು. ಎಲ್ಲಾ ಧರ್ಮಕ್ಕೂ ಹೊಂದಿಕೊಳ್ಳುವಂಥ ನಿಯಮಗಳನ್ನು ರೂಪಿಸಲಾಯಿತು. ಮುಸ್ಲಿಂ ವ್ಯಾಪಾರಿಗಳ ಅಂಗಡಿಯಲ್ಲಿ ಖರೀದಿಸಬೇಡಿ ಎಂಬ ಕುರಿತಂತೆಯೂ ಆಂದೋಲನ ನಡೆಯಿತು.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ
ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ವರದಿಯು ಸರಕಾರಕ್ಕೆ ಇನ್ನೊಂದು ರೀತಿಯಲ್ಲಿ ಸಂಕಷ್ಟ ತಂದೊಡ್ಡಿತು. ರಾಷ್ಟ್ರಕವಿ ಕುವೆಂಪು, ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಪ್ರಮುಖ ನಾಯಕರಿಗೆ ಪರಿಷ್ಕರಣೆಯಲ್ಲಿ ಅವಮಾನ ಮಾಡಲಾಗಿದೆ ಎಂಬ ವಿಚಾರಗಳು ಸುದ್ದಿ ಮಾಡಿದವು. ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕಡೆಗೆ, ಒಂದಷ್ಟು ಬದಲಾವಣೆಯೊಂದಿಗೆ ಪಠ್ಯಪುಸ್ತಕವನ್ನು ಪರಿಷ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next