Advertisement

19ರಿಂದ ನಂದೀಶ್ವರ ಜಾತ್ರಾ ಮಹೋತ್ಸವ

12:53 PM Aug 17, 2019 | Naveen |

ಬಸವನಬಾಗೇವಾಡಿ: ಬಸವನಬಾಗೇವಾಡಿ ಪಟ್ಟಣದಲ್ಲಿ ಪುರಾತನ ಕಾಲದಿಂದ ವಿರಾಜಮಾನವನಾದ ಬಸವೇಶ್ವರ (ಮೂಲ ನಂದೀಶ್ವರ) ಜಾತ್ರಾ ಮಹೋತ್ಸ ವ ಶ್ರಾವಣ ಮಾಸದ ಮೂರನೇ ಸೋಮವಾರ ಆ. 19ರಂದು ಆರಂಭವಾಗಿ 22ರವರೆಗೆ ಜರುಗಲಿದೆ ಎಂದು ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಹಾರಿವಾಳ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಾಡಿನ ಅನೇಕ ಕಲಾವಿದರು ಹಾಗೂ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅನೇಕ ಕಸರತ್ತಿನ ಪ್ರದರ್ಶನ, ಭಾರ ಎತ್ತುವ ಸ್ಪರ್ಧೆ, ಕುಸ್ತಿ ಪೈಲ್ವಾನರಿಗೆ ಯೋಗ್ಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಯಾತ್ರಿಕರಿಗೆ ವಸತಿ, ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಆ. 19ರಂದು ಬೆಳಗ್ಗೆ 9:30ಕ್ಕೆ ಬಸವೇಶ್ವರ ದೇವಸ್ಥಾನದಿಂದ ಸಹಸ್ರಾರು ಭಕ್ತರು ಸಕಲ ವಾದ್ಯ ವೈಭವದೊಂದಿಗೆ ವಿರಕ್ತಮಠಕ್ಕೆ ಹೊಗಿ ಮರು ಘೇಂದ್ರ ಮಹಾಸ್ವಾಮಿಗಳನ್ನು ಹಾಗೂ ಸ್ಥಳೀಯ ವೀರಕ್ತಮಠದ ಸಿದ್ದಲಿಂಗ ಶ್ರೀಗಳು ಹಾಗೂ ಈರಕಾರ ಮುತ್ಯಾ ಅವರನ್ನು ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನಕ್ಕೆ ಬರ ಮಾಡಿಕೊಳ್ಳಲಾಗುವದು. ನಂತರ 10ಕ್ಕೆ ಸರ್ವ ಅಲಂಕೃತ ಉತ್ಸವ ನಂದಿ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲ್ಲಕ್ಕಿಯೊಂದಿಗೆ ಬಸವೇಶ್ವರ ದೇವಸ್ಥಾನದಿಂದ ವಾದ್ಯ ವೈಭವದೊಂದಿಗೆ ಆನೆ, ಅಂಬಾರಿ ಮೆರವಣಿಗೆ ಮೂಲಕ ರಾಜ್ಯ ಮತ್ತು ಹೊರ ರಾಜ್ಯದ ಸಹಸ್ರಾರು ಭಕ್ತರೊಂದಿಗೆ ಹೊರಟು ಪಲ್ಲಕ್ಕಿ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ತೆರಳಲಿದ್ದು ಈರಕಾರ ಮುತ್ಯಾ ಅವರಿಂದ ಈ ವರ್ಷದ ಮಳೆ ಬೆಳೆ ನುಡಿ ಹೇಳಲಾಗುವದು.

ಸಂಜೆ 7ಕ್ಕೆ ಕಂಬಿ ಕಟ್ಟೆಗೆ ಆಗಮಿಸುವ ಪಲ್ಲಕ್ಕಿ ಉತ್ಸವವನ್ನು ವಾದ್ಯ ವೈಭವದೊಂದಿಗೆ ಆನೆ, ಅಂಬಾರಿ ಭವ್ಯ ಮೆರವಣಿಗೆ ಹಾಗೂ ಗ್ರಾಮೀಣ ಸೊಡಗಿನ ನವಿಲು, ಕುದುರೆ, ಡೊಳ್ಳು ಕುಣಿತ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವದು. ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಸಿಡಿ ಮದ್ದುಗಳನ್ನು ಸುಡಲಾಗುವದು. ರಾತ್ರಿ 10ರಿಂದ ದೇವಸ್ಥಾನ ಆವರಣದಲ್ಲಿ ರಾತ್ರಿಯಿಡಿ ಪಲ್ಲಕ್ಕಿ ಉತ್ಸವದ ಜಾಗರಣೆ ನಡೆಯುತ್ತದೆ.

20ರಂದು ಬೆಳಗ್ಗೆ 8:30ಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಆಗಮಿಸಿದ್ದ ಪ್ರಸಿದ್ದ ಗಿಗೀ , ಚೌಡಕಿ, ಡೊಳ್ಳು, ಭಜನಾ, ಕಲಾವಿದರಿಂದ ಭಜನಾ ಪದಗಳು ಜರುಗಲಿವೆ. ಮದ್ಯಾಹ್ನ 3ಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿದ್ದ ಪೈಲ್ವಾನಗಳಿಂದ ಜಂಗಿ ಕುಸ್ತಿಗಳು ಜರುಗುತ್ತವೆ. ಸಂಜೆ 6ಕ್ಕೆ ಕನ್ನಡ ಕೋಗಿಲೆ ಕಾರ್ಯಕ್ರಮದ ಕಲಾವತಿ ದಯಾನಂದ ಅವರ ತಂಡದವರಿಂದ ರಸಮಂಜರಿ ನಡೆಯುವುದು. ರಾತ್ರಿ 10:30ಕ್ಕೆ ಬಸವೇಶ್ವರ ನಾಟ್ಯ ಸಂಘ ಬಸವನಬಾಗೇವಾಡಿ ಸಂಗಣ್ಣ ಮಾದನಶೆಟ್ಟಿ ಅವರಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಸ್ಥಳ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಜರುಗಲಿದೆ ಎಂದರು.

Advertisement

ಅ. 21ರಂದು ಬೆಳಗ್ಗೆ 9ಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿದ್ದ ಶಕ್ತಿ ಪ್ರದರ್ಶಕರಿಂದ ಕಸರತ್ತಿನ ಪ್ರದರ್ಶನಗಳು ಹಾಗೂ ಭಾರ ಎತ್ತುವ ಸ್ಪರ್ಧೆ ಜರುಗಲಿವೆ. ಮಧ್ಯಾಹ್ನ 3ಕ್ಕೆ ರಾಜ್ಯ ಹೊರ ರಾಜ್ಯದ ಪೈಲ್ವಾನರಿಂದ ಜಂಗಿ ಕುಸ್ತಿಗಳು ಜರುಗಲಿವೆ. ಸಂಜೆ 6ಕ್ಕೆ ಬೆಳಗಾವಿ ಶಿವರಾಜ್‌ ಮೆಲೋಡಿಜ್‌ ಹಾಗೂ ಗೋಪಿ ಇವರಿಂದ ಮಿಮಿಕ್ರಿ ಕಾರ್ಯಕ್ರಮ ಜರುಗಲಿವೆ. ರಾತ್ರಿ 10:30ಕ್ಕೆ ಬಸವ ಕಲಾ ಬಳಗ ಇವಣಗಿ ಇವರಿಂದ ಶ್ರೀಜಗಜ್ಯೋತಿ ಬಸವೇಶ್ವರ ಭಕ್ತಿ ನಾಟಕ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಜರುಗಲಿದೆ.

ಆ. 22ರಂದು ಹೊಳೆ ಆಲೂರ ಅಂಧ ಮಕ್ಕಳಿಂದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಮಲ್ಲಕಂಬ ಅಟ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸುವ ಕಲಾವಿದರಿಗೂ ಹಾಗೂ ಕಸರತ್ತಿನ ಪ್ರದರ್ಶಕರಿಗೂ ಯೋಗ್ಯ ಪುರಸ್ಕಾರ ನೀಡಿ ಗೌರವಿಸಲಾಗುವದು. ದಿನನಿತ್ಯ ದೇವಸ್ಥಾನದ ಪ್ರಸಾದ ಮಂದಿರದಲ್ಲಿ ನಿರಂತರ ಯಾತ್ರಿಕರಿಗೆ ಅನ್ನ ದಾಸೋಹ ನಡೆಯಲಿದೆ ಎಂದು ಹೇಳಿದರು.

ಯಮನಪ್ಪ ನಾಯ್ಕೋಡಿ, ಸುಭಾಷ್‌ ಚಿಕ್ಕೊಂಡ, ಅನಿಲ ಪವಾರ, ಬಾಲಚಂದ್ರ ಮುಂಜಾನೆ, ಉಮೇಶ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಗೊಳಸಂಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next