Advertisement

ಎಲ್ಲಾ ಅರ್ಹ ಶಾಸಕರಿಗೆ ಕೊಟ್ಟಂತೆ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಲಿಲ್ಲ ಯಾಕೆ: ಯತ್ನಾಳ

09:55 AM Feb 11, 2020 | keerthan |

ವಿಜಯಪುರ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶಾಸಕ ಸ್ಥಾನ ತ್ಯಾಗ ಮಾಡಿ, ಮತ್ತೆ ಗೆದ್ದಿರುವ ಎಲ್ಲಾ ಅರ್ಹ ಶಾಸಕರಲ್ಲಿ ಮಹೇಶ ಕುಮಟಳ್ಳಿ ಹೊರತಾಗಿ ಎಲ್ಲರನ್ನೂ ಮಂತ್ರಿ ಮಾಡಿದ್ದೀರಿ. ಕುಮಟಳ್ಳಿಯನ್ನು ಕಡೆಗಣಿಸಿದ್ದು ಏಕೆ, ಈ ವಿಷಯದಲ್ಲಿ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.

Advertisement

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಳಿಕ ಪ್ರಾದೇಶಿಕ ಅಸಮಾನತೆ ಕಾರಣವಾಗಿದೆ. ಈಗಾಗಲೇ ಬೆಳಗಾವಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮತ್ತೆ ಕೆಲವರಿಗೆ ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡಲಾಗುತ್ತಿದೆ. ತ್ಯಾಗ ಮಾಡಿದ ಶಾಸಕ ಕುಮಟಳ್ಳಿ ಅವರನ್ನು ಕಡೆಗಣಿಸಲಾಗಿದೆ. ಮುಂಬೈ ಕರ್ನಾಟಕ ವಿಜಯಪುರ ಜಿಲ್ಲೆ, ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಇದರಿಂದಾಗಿ ಪ್ರಾದೇಶಿಕ ಅಸಮಾನತೆ ಹೆಚ್ಚಿದೆ. ಇಂಥ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ಶಾಸಕರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುವ ಭರವಸೆ ನೀಡುವುದು ಎಷ್ಡು ಸರಿ ಎಂದು ಪರೋಕ್ಷವಾಗಿ ಉಮೇಶ ಕತ್ತಿ ಅವರನ್ನು ಮಂತ್ರಿ ಮಾಡುವ ಭರವಸೆ ನೀಡಿದ್ದನ್ನು ಆಕ್ಷೇಪಿಸಿದರು.

ಇದಲ್ಲದೆ ಈಗಾಗಲೇ ಗೆದ್ದ ಅರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಬರುವ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕಾಂಗ ಸಭೆ ಕರೆದು ಶಾಸಕರ ಭಾವನೆ ಅರಿಯಬೇಕು. ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ಜೊತೆಗೆ ಬಜೆಟ್ ನಲ್ಲಿ ಎಲ್ಲ ಶಾಸಕರಿಗೂ ಸಮಾನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next