Advertisement

ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ  ದೇಶವೇ ಅವರ ಉಸಿರಾಗಿತ್ತು

12:30 AM May 04, 2018 | |

ಅತ್ತಾವರ ಎಲ್ಲಪ್ಪ ಭಾರತ‌ದ ಸ್ವಾತಂತ್ರ್ಯಕ್ಕಾಗಿ ನಿಜ ಅರ್ಥದಲ್ಲಿ ತನುಮನಧನ ತ್ಯಾಗ ಮಾಡಿ ಹುತಾತ್ಮರಾದ ವೀರ ಸೇನಾನಿ. ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಹೆಮ್ಮೆಯ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಇಂಡಿಯನ್‌ ನ್ಯಾಶನಲ್‌ ಆರ್ಮಿಯಲ್ಲಿ (ಆಜಾದ್‌ ಹಿಂದ್‌ ಫೌಜ್‌) ಬಲುದೊಡ್ಡ ಸ್ಫೂರ್ತಿಶಕ್ತಿ ಅವರೇ ಆಗಿದ್ದರು. ಬೋಸ್‌ ನೇತೃತ್ವದ ಐಎನ್‌ಎ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿತ್ತು. ಈ ಸೇನೆಯ ಸಮಗ್ರ ಉಸ್ತುವಾರಿಯನ್ನು ಸಿಂಗಾಪುರ ಮುಂತಾದೆಡೆ ಸಂಘಟಿಸಿದ್ದ ಎಲ್ಲಪ್ಪ ಅವರು ಜನಿಸಿದ್ದು 4-5-1912ರಂದು ಮಂಗಳೂರಿನ ಅತ್ತಾವರದಲ್ಲಿ – ಆ ಕಾಲದ ಶ್ರೀಮಂತ ಕೃಷಿಕ ಕುಟುಂಬದ ಅತ್ತಾವರ ಬಾಲಣ್ಣ- ವೆಂಕಪ್ಪ ದಂಪತಿಯ ಪುತ್ರನಾಗಿ. ಇಂದಿಗೆ ಅವರು ಜನಿಸಿ 106 ವರ್ಷವಾಗುತ್ತದೆ. ಈ ನಿಮಿತ್ತ ಅವರ ನೆನಕೆ…

Advertisement

ಬೋಸ್‌ ಅವರ ನೇತೃತ್ವದ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) 50 ಸಾವಿರ ಸೈನಿಕರು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾ ಮೂಲಕ (ಈಗಿನ ಮ್ಯಾನ್ಮಾರ್‌) ಭಾರತದೊಳಗೆ ನುಗ್ಗಿ ಬ್ರಿಟಿಷರ ವಿರುದ್ಧ ಮೇಲುಗೈ ಸಾಧಿಸುವ ಹಂತಕ್ಕೆ ಕೂಡಾ ಬಂದಿದ್ದರು. ಈ ಸೇನೆಯ ಸಂಪೂರ್ಣ ಆರ್ಥಿಕ ವ್ಯವಹಾರಗಳನ್ನು ವಸ್ತುಶಃ ಏಕಾಂಗಿಯಾಗಿ ನಡೆಸಿದವರು ಎಲ್ಲಪ್ಪ.

ಐಎನ್‌ಎ ಎಂಬ ರೋಮಾಂಚಕ ದೇಶಪ್ರೇಮದ ಸೇನೆಯ ಮುಖ್ಯಸ್ಥ ಸುಭಾಶ್ಚಂದ್ರ ಬೋಸ್‌ ಅವರ ಜತೆ ಕ್ಯಾ| ಮೋಹನ್‌ಸಿಂಗ್‌, ರಾಸ್‌ಬಿಹಾರಿ ಬೋಸ್‌, ಕ್ಯಾ| ಲಕ್ಷ್ಮೀ ಮುಂತಾದ ನಾಯಕರಿದ್ದರು. ಅವರೆಲ್ಲರನ್ನು ಜತೆಯಾಗಿ ಸಂಘಟಿಸುತ್ತಿದ್ದವರು ಎಲ್ಲಪ್ಪ ಅವರು.

ಮಂಗಳೂರಿನ ಸೈಂಟ್‌ ಎಲೋಸಿಯಸ್‌ ಹಾಗೂ ಆಗಿನ ಸರಕಾರಿ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಎಲ್ಲಪ್ಪ ಅವರು ಆಗಿನ ಮದ್ರಾಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಾ ಟ್ರಾಮ್‌ ಕಂಪೆನಿಯೊಂದನ್ನು ಸ್ಥಾಪಿಸಿ, 1939ರಲ್ಲಿ ಲಂಡನ್‌ನಲ್ಲಿ ಬಾರ್‌ ಎಟ್‌ ಲಾ (ಕಾನೂನು) ಪದವಿ ಪಡೆದರು. ಬ್ರಿಟಿಷರು ತೋರುತ್ತಿದ್ದ ಜನಾಂಗೀಯ ದ್ವೇಷದ ಬಗ್ಗೆ ಆಕ್ರೋಶಿತರಾಗಿ ಸಿಂಗಾಪುರಕ್ಕೆ ತೆರಳಿದರು. ಅಲ್ಲಿ ತಮ್ಮ ಜ್ಞಾನ, ಶ್ರಮದಿಂದ ಅಪಾರ ಸಂಪತ್ತನ್ನು ಸಂಗ್ರಹಿಸಿದರು. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟಗಾರರ ಒಡನಾಟ ಅವರಿಗೆ ದೊರೆಯಿತು.

ಅವರು ನಲ್ವತ್ತರ ದಶಕದಲ್ಲಿ ರಾಸ್‌ಬಿಹಾರಿ ಬೋಸ್‌ ಸಿಂಗಾಪುರದಲ್ಲಿ ಕಟ್ಟಿದ ಇಂಡಿಯನ್‌ ಇಂಡಿಪೆಂಡೆನ್ಸ್‌ ಲೀಗ್‌ನ ಅಧ್ಯಕ್ಷರಾದರು. ಆಗ ಜಪಾನ್‌ ಸೇನೆಗೆ ಶರಣಾಗಿದ್ದ ಬ್ರಿಟಿಷ್‌ಸೇನೆಯಲ್ಲಿದ್ದ 50 ಸಾವಿರದಷ್ಟು ಭಾರತೀಯರು ಈ ಸೇನೆಗೆ ಸೇರಿದರು. ಈ ಸೇನೆಗೆ ಮಾರ್ಗದರ್ಶನಕ್ಕೆ ಸುಭಾಶ್ಚಂದ್ರ ಬೋಸರು ಜರ್ಮನಿಯಿಂದ ಸಿಂಗಾಪುರಕ್ಕೆ ಬಂದಾಗ ಸಂಘಟಿಸಿದವರು ಎಲ್ಲಪ್ಪ. 21-10-1943ರಂದು ನೇತಾಜಿ ಅಲ್ಲಿ ಸ್ವತಂತ್ರ ಭಾರತ ಪ್ರಾಂತೀಯ ಸರಕಾರ ಸ್ಥಾಪಿಸಿದರು. ನೇತಾಜಿ ಪ್ರಧಾನಿ, 20 ಮಂದಿಯ ಸಂಪುಟದಲ್ಲಿ ಎಲ್ಲಪ್ಪರಿಗೆ ಮಹತ್ವದ ಸ್ಥಾನ.

Advertisement

ಆ ಸಂದರ್ಭದಲ್ಲಿ ನೇತಾಜಿ ಸೂಚನೆಯಂತೆ “ಕುಬೇರ’ ಬಿರುದಾಂಕಿತ ಎಲ್ಲಪ್ಪ ಅವರು ಸೈನ್ಯದ ವೆಚ್ಚ ನಿಭಾಯಿಸಲು ಆಜಾದ್‌ ಹಿಂದ್‌ ನ್ಯಾಶನಲ್‌ ಬ್ಯಾಂಕ್‌ ಸ್ಥಾಪಿಸಿದರು. ಐಎನ್‌ಎ ಕಚೇರಿ ರಂಗೂನ್‌ಗೆ ಸ್ಥಳಾಂತರವಾದಾಗ ಎಲ್ಲಪ್ಪರ ಜವಾಬ್ದಾರಿ ಹೆಚ್ಚಿತು. ಜಪಾನಿ ಯೋಧರೊಂದಿಗೆ ನೇತಾಜಿ, ಎಲ್ಲಪ್ಪ ಮುಂತಾದ ಐಎನ್‌ಎ ನಾಯಕರು ಸೇರಿ ಬ್ರಿಟಿಷರ ಪ್ರಮುಖ ಸಮರ ನೌಕೆಯನ್ನು ಮುಳುಗಿಸಿದರು. ದೇಶಾದ್ಯಂತ ನೇತಾಜಿ ಅವರಿಗೆ ಅಪಾರ ಬೆಂಬಲ ವ್ಯಕ್ತವಾಯಿತು.

ಈ ನಡುವೆ, ಅಮೆರಿಕದ ಅಣುಬಾಂಬಿಗೆ ಜಪಾನ್‌ ನಲುಗಿತು. ಜಪಾನ್‌ ಸೈನಿಕರ ನಿರ್ಗಮನದಿಂದ ಐಎನ್‌ಎ ಸಂಖ್ಯೆ ಕ್ಷೀಣಿಸಿತು. ಬ್ರಿಟಿಷರು ಐಎನ್‌ಎಯನ್ನು ಗುರಿಯಾಗಿ ಸಿಕೊಂಡರು. ಆದರೂ, ಹೋರಾಟ ಸ್ವಲ್ಪಕಾಲ ನಡೆದಿತ್ತು. ಮಂಗಳೂರಿನ ಸುಂದರರಾವ್‌ ಅವರು ಕೂಡಾ ಐಎನ್‌ಎಯಲ್ಲಿದ್ದು ಈ ಬಗ್ಗೆ ಕೃತಿಯನ್ನು ರಚಿಸಿದ್ದಾರೆ.

ಮಂಗಳೂರಿನಲ್ಲಿರುವ ಎಲ್ಲಪ್ಪರ ತಂಗಿಯ ಮಗ ಪ್ರಭಾಕರದಾಸ್‌ ಅವರಿಗೆ ಕ್ಯಾ| ಲಕ್ಷ್ಮೀ ಬರೆದಿರುವ ಪತ್ರದ ಪ್ರಕಾರ: “ಬಂದೂಕುಧಾರಿ ಎಲ್ಲಪ್ಪ ಸಾಹೇಬರನ್ನು ಕೊನೆಯದಾಗಿ ನೋಡಿದ್ದೇ ನಾನು. ಬರ್ಮಾದ ದಟ್ಟ ಕಾಡಲ್ಲಿ ಆಸ್ಪತ್ರೆ ನಿರ್ಮಿಸಿ ಗಾಯಾಳು ಯೋಧರನ್ನು ಶುಶ್ರೂಷೆ ಮಾಡುತ್ತಿದ್ದೆವು. ಅಲ್ಲಿಗೆ ಬಂದ ನೇತಾಜಿ, ಎಲ್ಲಪ್ಪರನ್ನು ಸಿಂಗಾಪುರಕ್ಕೆ ಆಹ್ವಾನಿಸಿ ತೆರಳಿದರು. ಎಲ್ಲಪ್ಪರು ಸೈನಿಕರನ್ನು ಹುರಿದುಂಬಿಸುತ್ತಿದ್ದಂತೆ ಬ್ರಿಟಿಷರು ವಿಮಾನದಿಂದ ಬಾಂಬಿನ ಸುರಿಮಳೆಗೈದರು. ಆಗ ಕಬ್ಬಿಣದ ಚೂರುಗಳು ಎಲ್ಲಪ್ಪರ ದೇಹದೊಳಗೆ ಸೇರಿ ಘಾಸಿಗೊಳಿಸಿದರೂ ಅವರು ಎದೆಗುಂದಲಿಲ್ಲ. ಬ್ರಿಟಿಷರು ನಮ್ಮನ್ನು ಬಂಧಿಸಿ ಗುವಾಹಟಿಗೆ ಒಯ್ದರು. ಗಾಯಾಳು ಎಲ್ಲಪ್ಪರನ್ನು ಅಲ್ಲೇ ಉಳಿಸಲಾಗಿತ್ತು. ಆದರೆ, ಬ್ರಿಟಿಷರು ಅವರಿದ್ದ ಗುಡಿಸಲನ್ನು ಸುತ್ತುವರಿದು ಗುಂಡಿನ ಮಳೆಗರೆದು ಸುಟ್ಟು ಹಾಕಿದ ಸುದ್ದಿ ನಮಗೆ ತಲುಪಿತು…’

ಆದರೆ, ಎಲ್ಲಪ್ಪ ಚಾಣಾಕ್ಷ ಯೋಧ. ಹಾಗೆಲ್ಲ ಸಿಕ್ಕಿ ಬೀಳುವವರಲ್ಲ ಅಂತ ಅವರ ಅಭಿಮಾನಿಗಳ ಅಭಿಪ್ರಾಯವಾಗಿತ್ತು. ನೇತಾಜಿ ಸಾವಿನಷ್ಟೇ ನಿಗೂಢ ಎಲ್ಲಪ್ಪರ ಅಂತ್ಯ. ಅದು ಹೌದೆಂದರೆ, ಆಗ ಎಲ್ಲಪ್ಪರ ವಯಸ್ಸು ಕೇವಲ 33. ಆ ವೇಳೆಗೆ ಮಂಗಳೂರಿನಲ್ಲಿ ಎಲ್ಲಪ್ಪರ ಕುಟುಂಬ ಬಡತನದ ಸ್ಥಿತಿಗೆ ಬಂದಿತ್ತು. ಆಗರ್ಭ ಶ್ರೀಮಂತ, ಐಎನ್‌ಎಯ ಸಮಸ್ತ ಆರ್ಥಿಕ ವ್ಯವಹಾರ ನೋಡುತ್ತಿದ್ದ ಎಲ್ಲಪ್ಪರ ಮಂಗಳೂರಿನ ಭೂಮಿಯೂ ಕೈಬಿಟ್ಟಿತ್ತು. ಆ ಕಾಲದಲ್ಲಿ ಸಂಪಾದಿಸಿದ್ದ ಕೋಟ್ಯಂತರ ರೂ.ಗಳನ್ನು ಐಎನ್‌ಎಗೆ ಅರ್ಪಿಸಿದವರು ಅವರು. 

ಎಲ್ಲಪ್ಪ ಅವರ ಜನ್ಮಶತಮಾನೋತ್ಸವ ಮಂಗಳೂರು ಸಹಿತ ವಿವಿಧೆಡೆ ಆಚರಣೆಯಾಗಿದೆ. ಜೀವನ ಕಥನ, ಸ್ಮರಣ ಸಂಚಿಕೆ, ಲೇಖನಗಳು ಪ್ರಕಟವಾಗಿವೆ. ಅವರ ಹೆಸರಲ್ಲಿ ಆಸ್ಪತ್ರೆ ಸಹಿತ ಸ್ಮಾರಕಗಳು ನಿರ್ಮಾಣವಾಗಿವೆ.
1937ರಲ್ಲಿ ಎಲ್ಲಪ್ಪ ಅವರು ಸೀತಮ್ಮರನ್ನು ಮಂಗಳೂರಿನಲ್ಲಿ ವಿವಾಹವಾದರು. ಪತ್ನಿಯೊಂದಿಗೆ 17 ದಿನ ಮಾತ್ರ ಕಳೆದು ಲಂಡನ್‌, ಸಿಂಗಾಪುರಕ್ಕೆ ತೆರಳಿದರು. ಮುಂದೆ, ನೇತಾಜಿ ಅವರಿದ್ದ ವಿಮಾನ ಅಪಘಾತಕ್ಕೀಡಾಗಿ ಎಲ್ಲಪ್ಪ ಸಹಿತ ಎಲ್ಲಾ ನಿಕಟವರ್ತಿಗಳು ಮೃತರಾದರೆಂದು ಬಿಬಿಸಿ ರೇಡಿಯೋ ಸುದ್ದಿ ಬಿತ್ತರಿಸಿತ್ತು. ಇದನ್ನು ಕೇಳಿದ್ದ ಸೀತಮ್ಮ (ಮಕ್ಕಳಿಲ್ಲ) ತಾಯಿ ಮನೆಗೆ ಹೋಗುವೆನೆಂದು ಹೇಳಿ ಮಂಗಳೂರಿನ ದೇಗುಲವೊಂದರ ಸಮೀಪದ ಕೆರೆಯಲ್ಲಿ ತಮ್ಮ ಬದುಕಿಗೆ ಅಂತ್ಯ ಹೇಳಿದರು…

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next