Advertisement

ನಿಡಶೇಸಿ ಕೆರೆಯಲ್ಲಿ ಮಂಗೋಲಿಯನ್ ಮೂಲದ ಪಟ್ಟೆತಲೆ ಹೆಬ್ಬಾತುಗಳ ಕಲರವ

07:38 PM Feb 20, 2023 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆಗೆ ಮಂಗೋಲಿಯನ್ ಮೂಲದ ಪಟ್ಟೆ ತಲೆಯ ಹೆಬ್ಬಾತು (ಬಾರ್ ಹೆಡೆಡ್ ಗೀಸ್) ಆಗಮಿಸಿದ್ದು, ಹವ್ಯಾಸಿ ಛಾಯಾಗ್ರಾಹಕರಿಗೆ ಈ ಪಕ್ಷಿ ಈಜುವುದು, ದಡದಲ್ಲಿ ರೆಕ್ಕೆ ಬಡಿಯುವುದು, ಆಗಸದಲ್ಲಿ ಹಾರಾಟ ದೃಶ್ಯ ಸೆರೆ ಹಿಡಿಯುವುದೇ ಖುಷಿ ಎನಿಸಿದೆ.

Advertisement

ಕಳೆದ ವರ್ಷಕ್ಕಿಂದ ಪಟ್ಟೆತಲೆಯ ಹೆಬ್ಬಾತುಗಳ ಸಂಖ್ಯೆ ಹೆಚ್ಚಿದ್ದು, ಕೆರೆಯಲ್ಲಿ ಬೀಡು ಬಿಟ್ಟಿವೆ. ಸದ್ಯ ಹಿಂಗಾರು ಹಂಗಾಮಿನ ಸುಗ್ಗಿ ಕಾಲವಾಗಿದ್ದರಿಂದ ಈ ಪಕ್ಷಿಗಳು ಬೆಳಗ್ಗೆ ಕೆರೆಯಲ್ಲಿ ವಿಹರಿಸುತ್ತಿದ್ದು, ಈ ಪಕ್ಷಿ ನೀರಿನಲ್ಲಿದ್ದರೂ ಸಂಪೂರ್ಣ ಸಸ್ಯಹಾರಿಯಾಗಿದೆ. ಇದು ನೀರಿನಲ್ಲಿ ಕಪ್ಪೆ, ಮೀನು, ಏಡಿ ತಿನ್ನುವುದಿಲ್ಲ. ಅಹಾರಕ್ಕಾಗಿ ಜೋಳ, ಕಡಲೆ, ಶೇಂಗಾ, ಗೋಧಿ ಕಾಳುಗಳಿಗೆ ರೈತರ ಹೊಲಕ್ಕೆ ಲಗ್ಗೆ ಇಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಪುನಃ ಕೆರೆಯ ದಡ ಸೇರಿಕೊಳ್ಳುತ್ತಿವೆ. ಸುರಕ್ಷಿತವಾಗಿದ್ದರೆ ಅಲ್ಲಿಯೇ ವಿಹರಿಸುವ ಪಟ್ಟೆತಲೆಯ ಹೆಬ್ಬಾತುಗಳು ಅಪಾಯ ಕಂಡು ಬಂದರೆ ಅಲ್ಲಿಂದ ಜಾಗ ಖಾಲಿಮಾಡುತ್ತವೆ ಅಷ್ಟೊಂದು ಸೂಕ್ಷ್ಮಗ್ರಹಿ ಪಕ್ಷಿಗಳಾಗಿವೆ.

ನಿಡಶೇಸಿ ಕೆರೆಯಲ್ಲಿ 200ಕ್ಕೂ ಅಧಿಕ ಪಟ್ಟೆತಲೆಯ ಹೆಬ್ಬಾತುಗಳನ್ನು ಕಾಣಬಹುದಾಗಿದೆ. ಅವುಗಳು ಕೆರೆಯಲ್ಲಿ ಈಜುವ ದೃಶ್ಯ ಹವ್ಯಾಸಿ ಛಾಯಾಗ್ರಾಹಕರಿಗೆ ಫೋಟೋ ತೆಗೆಯುವುದೇ ಸಂಭ್ರಮವೆನಿಸಿದೆ. ಹೀಗಾಗಿ ಹವ್ಯಾಸಿ ಛಾಯಾಗ್ರಾಹಕರು ಬೆಳಗ್ಗೆ ಸಂಜೆ ನಿಡಶೇಸಿ ಕೆರೆಯ ದಡದಲ್ಲಿ ಹಲವು ಪಕ್ಷಿಗಳ ಜೊತೆಯಲ್ಲಿ ಈ ಪಟ್ಟೆತಲೆ ಹೆಬ್ಬಾತುಗಳು ನಯನಾಜೂಕಿನ ಪಕ್ಷಿಯ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನಿಡಶೇಸಿ ಕೆರೆಯ ದಡದಲ್ಲಿ ದೇಶಿಯ, ವಿದೇಶಿ ಹಕ್ಕಿಗಳ ಚಲನ ವಲನಗಳನ್ನು ನೋಡಿ ಕಣ್ತುಂಬಿಕೊಳ್ಳಲು ದುರ್ಭಿನ್ ಮೂಲಕ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ.

Advertisement

ಮಂಗೋಲಿಯನ್ ಮೂಲದ ಹಕ್ಕಿ ಹಿಮಾಲಯ ದಾಟಿ ಈ ಪ್ರದೇಶಕ್ಕೆ ವಲಸೆ ಬರುವ ಪಟ್ಟೆತಲೆಯ ಹೆಬ್ಬಾತುಗಳು, ಗದಗ ಜಿಲ್ಲೆಯ ಮಾಗಡಿ ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿವೆ. ಇಲ್ಲಿಗೆ ಬರುವ ಹಕ್ಕಿಗಳ ಸಮೂಹ ನಿಡಶೇಸಿ ಕೆರೆಗೆ ಆಗಮಿಸಿದ್ದು ಶಬ್ದ ಮಾಲಿನ್ಯ, ಕಲುಷಿತ ನೀರಿನಿಂದ ವಿಮುಖವಾಗುವ ಹಕ್ಕಿಗಳಾಗಿವೆ. ಈ ಪ್ರದೇಶ ಸುರಕ್ಷಿತವೆನಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳು ಆಗಮಿಸುವ ಸಾದ್ಯತೆ ಇದೆ.
– ಅಮೀನ್ ಅತ್ತಾರ ವನ್ಯಜೀವಿ ಛಾಯಾಗ್ರಾಹಕರು, ಸಿಎಓ ಜಿ.ಪಂ. ಇಲಾಖೆ ಕೊಪ್ಪಳ.

– ಮಂಜುನಾಥ ಮಹಾಲಿಂಗಪುರ ಕುಷ್ಟಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next