ಬಂಟ್ವಾಳ: ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರನ್ನು ಅವಮಾನಿಸಿ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಸಂದೇಶವನ್ನು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಾಕಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಪುತ್ತೂರು ತಾಲೂಕಿನ ಬನ್ನೂರು ನಂದಿಲ ನಿವಾಸಿ ರಾಜಶೇಖರ ಕೋಟ್ಯಾನ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಬಂಟ್ವಾಳ ಅಡ್ಮಿನ್ ಹೊಂದಿರುವ ವಾಟ್ಸ್ಆ್ಯಪ್ ಗ್ರೂಪ್ಗೆ ಅಪರಿಚಿತ ವ್ಯಕ್ತಿಯೊಬ್ಬ ಗ್ರೂಪ್ನ ಜಾಯಿನಿಂಗ್ ಲಿಂಕ್ ಬಳಸಿ ಗ್ರೂಪ್ಗೆ ಸೇರ್ಪಡೆಗೊಂಡು ಈ ಕೃತ್ಯ ಎಸಗಿದ್ದಾನೆ.
ಇತ್ತೀಚಿಗೆ ಪುತ್ತೂರಿನಲ್ಲಿ ಪೋಲೀಸ್ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಖಾಸಗಿ ಭಾಗಗಳ ಪೋಟೋಗಳನ್ನು ಬಳಸಿಕೊಂಡು ಅರುಣ್ ಕುಮಾರ್ ಪುತ್ತಿಲರಿಗೆ ಅವಮಾನವಾಗುವ ರೀತಿಯಲ್ಲಿ ಮತ್ತು ಭಗವಾಧ್ವಜದ ಚಿತ್ರವನ್ನು ಸೇರಿಸಿ, ನಿಂದನಾತ್ಮಕ ಬರಹಗಳನ್ನು ನಮೂದಿಸಿ ಗ್ರೂಪಿಗೆ ಕಳುಹಿಸಿದ್ದಾನೆ. ಇದರೊಂದಿಗೆ ವಾಯ್ಸ ಮೆಸೇಜ್ಗಳನ್ನೂ ಕಳುಹಿಸಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ರೀತಿಯಲ್ಲಿ ಸಂದೇಶಗಳನ್ನು ಹಾಕಿದ್ದಾನೆ. ಆರೋಪಿಯನ್ನು ಶೀಘ್ರ ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.