Advertisement

Bantwala; ಕಾರಿಗೆ ಡಿಕ್ಕಿ ಹೊಡೆದ ಜಲ್ಲಿ ಸಾಗಾಟದ ಲಾರಿ; ಸ್ಥಳೀಯರಿಂದ ಪ್ರತಿಭಟನೆ

11:23 AM Nov 09, 2023 | Team Udayavani |

ಬಂಟ್ವಾಳ: ಜಲ್ಲಿ ಸಾಗಿಸುವ ಬೃಹತ್ ಗಾತ್ರದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ.

Advertisement

ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ.ಕಂಪೆನಿಯ ಲಾರಿ ಡಿಕ್ಕಿಯಾಗಿದೆ.

ಕೃಷ್ಣ ಅರಸ ಅವರು ಮೈಸೂರಿನಿಂದ ಬಂಟ್ವಾಳ ಕಡೆಯಿಂದ ಮೂಡಬಿದಿರೆ ಅಳ್ವಾಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ದೀಪಾವಳಿ ರಜೆ ನಿಮಿತ್ತ ಊರಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಮೂಡಬಿದಿರೆಯ ಕಡೆಗೆ ತೆರಳುವ ವೇಳೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಲಾರಿ ಎದುರಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಕೃಷ್ಣ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಪ್ರತಿಭಟನೆ

Advertisement

ಬಿಸಿರೋಡನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯವರು ಕಾಮಗಾರಿ ನಡೆಸಲು ಜಲ್ಲಿಯನ್ನು ಕುಪ್ಪೆಪದವು ಎಂಬಲ್ಲಿರುವ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಲಾರಿಗಳ ಮೂಲಕ ತರುತ್ತಾರೆ. ಆದರೆ ಕಂಪೆನಿಯ ಲಾರಿಯ ಚಾಲಕರು ಎ.ಸಿ ಹಾಕಿಕೊಂಡು ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿ ಹಾಡು ಕೇಳಿಕೊಂಡು ಅಥವಾ ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ರಸ್ತೆಯಲ್ಲಿ ಬರುವ ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಾರೆ ಎಂಬುದು ಸ್ಥಳೀಯರ ವಾದ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಕಂಪೆನಿಯ ಲಾರಿಗಳು ಡಿಕ್ಕಿಯಾಗಿ ಅನೇಕರಿಗೆ ಗಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಪೆನಿಯ ಘನಗಾತ್ರದ ವಾಹನಗಳ ಸಂಚಾರದಿಂದ ಪ್ರಾಣಹಾನಿಯ ಜೊತೆಗೆ ಉತ್ತಮವಾಗಿದ್ದ ಡಾಮರು ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಅಪಘಾತ ನಡೆದ ಜಾಗದಲ್ಲಿ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು ಎಂದು ಇಲ್ಲಿ ಸೇರಿದ ಜನರು ಅರೋಪ ಮಾಡಿದ್ದಾರೆ. ಕಂಪನಿ ವಿರುದ್ದ ಪ್ರಕರಣ ದಾಖಲಿಸಿ ಮತ್ತು ಕಂಪನಿ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಕಂಪನಿ ಮತ್ತು ಲಾರಿ ಚಾಲಕರ ವಿರುದ್ದ ಸಾರ್ವಜನಿಕರು ರೊಚ್ಚಿಗೆದ್ದ ಘಟನೆ ನಡೆಯಿತು.  ಆ ಮಾರ್ಗದಲ್ಲಿ ಬರುವ ಕಂಪೆನಿಯ ಎಲ್ಲಾ ಲಾರಿಗಳನನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಪೋಲಿಸರು ಚದುರಿಸಿದರು.

ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ಸುತೇಶ್, ಮತ್ತು ಸಂಜೀವ ಹಾಗೂ ಎಎಸ್.ಐ  ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next