Advertisement

ಅವ್ಯವಸ್ಥೆಯಲ್ಲಿದೆ ಬಡ್ಡಕಟ್ಟೆ-ಕೊಟ್ರಮ್ಮನಗಂಡಿ ಶೌಚಾಲಯ

11:13 AM Oct 07, 2022 | Team Udayavani |

ಬಂಟ್ವಾಳ: ನಗರ ಪ್ರದೇಶಗಳು ಬೆಳೆಯುತ್ತಿದ್ದಂತೆ ಅಲ್ಲಿನ ಮೂಲಸೌಕರ್ಯವೂ ಅಭಿವೃದ್ಧಿಗೊಳ್ಳಬೇಕಿದ್ದು, ಆದರೆ ಬಂಟ್ವಾಳ ಪೇಟೆಯ ಮೂಲಸೌಕರ್ಯದಲ್ಲಿ ದೊಡ್ಡಮಟ್ಟಿನ ಬದಲಾವಣೆ ಕಂಡಿಲ್ಲ. ಪೇಟೆಯ ಬಡ್ಡಕಟ್ಟೆ ಹಾಗೂ ಕೊಟ್ರಮ್ಮನಗಂಡಿಯಲ್ಲಿರುವ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲದೇ ಇರುವುದು ಮೂಲಸೌಕರ್ಯದ ಕೊರತೆಗೆ ಉದಾಹರಣೆಯಾಗಿದೆ.

Advertisement

ಎರಡು ಕಡೆಗಳಲ್ಲಿ ಬಂಟ್ವಾಳ ಪುರಸಭೆಯ ವತಿ ಯಿಂದ ಬಸ್‌ ನಿಲ್ದಾಣ ಹಾಗೂ ಶೌಚಾಲಯ ನಿರ್ಮಾಣ ಗೊಂಡಿದ್ದು, ಇದರಲ್ಲಿ ಬಡ್ಡಕಟ್ಟೆಯ ಬಸ್‌ ನಿಲ್ದಾಣ ಹಾಗೂ ಶೌಚಾಲಯ ಎರಡೂ ಕೂಡ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಆದರೆ ಕೊಟ್ರಮ್ಮನಗಂಡಿಯಲ್ಲಿ ನಿಲ್ದಾಣ ಸುಸಜ್ಜಿತ ಸ್ಥಿತಿಯಲ್ಲಿದ್ದು, ಶೌಚಾಲಯ ಸುಸ್ಥಿತಿಯಲ್ಲಿದ್ದರೂ ಪೊದೆಗಳಿಂದ ಅವರಿಸಿಕೊಂಡಿದೆ.

ಗ್ರಾಮೀಣ ಪ್ರದೇಶದ ಮಂದಿಗೆ ಪ್ರಮುಖ ವಾಣಿಜ್ಯ ಪಟ್ಟಣವಾಗಿರುವ ಬಂಟ್ವಾಳ ಪೇಟೆಯು ಬಹಳ ವರ್ಷಗಳ ಹಿಂದೆ ಹೇಗಿತ್ತೋ, ಈಗಲೂ ಹಾಗೇ ಇದೆ. ಇಕ್ಕಟ್ಟಿನ ರಸ್ತೆಗಳು, ವಾಹನ ನಿಲ್ಲಿಸಲು ಸ್ಥಳಾವಕಾಶದ ಕೊರತೆ ಹೀಗೆ ಹಲವು ಕಾರಣಕ್ಕೆ ಜನ ಬೇರೆ ಪಟ್ಟಣವನ್ನು ಆಶ್ರಯಿಸಬೇಕಾದ ಸ್ಥಿತಿ ಉಂಟಾಗಿತ್ತು. ಆದರೆ ಈಗಲೂ ಪೇಟೆಗೆ ಬರುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿಲ್ಲ. ಪೇಟೆಗೆ ಬಂದ ಮಂದಿಯ ಪ್ರಮುಖ ಮೂಲ ಸೌಕರ್ಯ ವಾಗಿರುವ ಶೌಚಾಲಯ ಅವ್ಯವಸ್ಥೆಯ ಕುರಿತು ಪದೇ ಪದೇ ಆರೋಪಗಳು ಕೇಳಿ ಬರುತ್ತಲೇ ಇದೆ.

ಬಡ್ಡಕಟ್ಟೆಯ ಅವ್ಯವಸ್ಥೆ

ಸರಪಾಡಿ, ಕಕ್ಯಪದವು, ಮಣಿನಾಲ್ಕೂರು, ವಾಮದಪದವು, ನಾವೂರು ಮೊದಲಾದ ಪ್ರದೇಶಗಳಿಗೆ ತೆರಳುವ ಬಸ್‌ಗಳು ನಿಲ್ಲುವುದಕ್ಕಾಗಿ ಬಡ್ಡಕಟ್ಟೆಯಲ್ಲಿ ತಂಗುದಾಣ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ಪ್ರಾರಂಭದಲ್ಲಿ ಇಲ್ಲಿಗೆ ಬಸ್‌ಗಳು ತೆರಳಿದರೂ ಕಾಲ ಕ್ರಮೇಣ ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುತ್ತಿದೆ. ಅಲ್ಲಿನ ಮೂಲಸೌಕರ್ಯಗಳು ಸರಿಯಿಲ್ಲದ ಕಾರಣಕ್ಕೂ ಬಸ್‌ಗಳು ಅಲ್ಲಿಗೆ ತೆರಳದೆ ಇರುವ ಸಾಧ್ಯತೆ ಇದೆ. ಪ್ರಸ್ತುತ ಸ್ಥಿತಿಯಲ್ಲಿ ಅಲ್ಲಿನ ತಂಗುದಾಣ ಹಾಗೂ ಶೌಚಾಲಯ ಎರಡೂ ಕೂಡ ಅವ್ಯವಸ್ಥೆಯಲ್ಲಿದೆ.

Advertisement

ತಂಗುದಾಣದ ಅನಿವಾರ್ಯತೆ ಇಲ್ಲದೇ ಇದ್ದರೂ, ಈ ಪ್ರದೇಶಕ್ಕೆ ಸುಸಜ್ಜಿತ ಶೌಚಾಲಯ ತೀರಾ ಅಗತ್ಯವಾಗಿದೆ. ಬಡ್ಡಕಟ್ಟೆ ಯಲ್ಲಿ ಪುರಸಭೆಯದ್ದೇ ಎರಡು ವಾಣಿಜ್ಯ ಸಂಕೀರ್ಣಗಳು, ಹತ್ತಾರು ಇತರ ಕಟ್ಟಡಗಳಿದ್ದು, ಅಲ್ಲಿನ ವರ್ತಕರು, ಗ್ರಾಹಕರು, ಇತರ ಸಾರ್ವಜನಿಕರಿಗೆ ಶೌಚಾಲಯ ಅಗತ್ಯವಾಗಿದೆ.

ಸುತ್ತಲೂ ಇರುವ ಪೊದೆಗಳ ತೆರವು

ಕೊಟ್ರಮ್ಮನಗಂಡಿಯಲ್ಲಿ ಕೆಲವು ವರ್ಷಗಳ ಹಿಂದಷ್ಟೇ ತಂಗುದಾಣ, ಶೌಚಾಲಯ ನಿರ್ಮಿಸಲಾಗಿದ್ದು, ಜತೆಗೆ ಬಸ್‌ಗಳು ನಿಲ್ಲುವ ಜಾಗಕ್ಕೂ ಕಾಂಕ್ರೀಟ್‌ ಅಳವಡಿಸಲಾಗಿದೆ. ಆದರೆ ಇಲ್ಲಿಗೆ ಬಸ್‌ ಗಳು ಆಗಮಿಸದೇ ಎಲ್ಲೋ ಅಂಗಡಿಯ ಮುಂದೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದೆ. ಪ್ರಸ್ತುತ ಶೌಚಾಲಯದ ಸುತ್ತ ಪೊದೆಗಳು ಬೆಳೆದುಕೊಂಡಿದ್ದು, ಮಹಿಳೆಯರ ಶೌಚಾಲಯ ಇರುವ ಭಾಗಕ್ಕೆ ಹೆದರಿಕೆಯಿಂದಲೇ ತೆರಳಬೇಕಾದ ಸ್ಥಿತಿ ಇದೆ. ಹೀಗಾಗಿ ಪೊದೆಗಳು ಬಾರದ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ.

ನಿರ್ವಹಣೆಗೆ ನೀಡಬೇಕಿದೆ

ಪ್ರಸ್ತುತ ದಿನಗಳಲ್ಲಿ ಬಹುತೇಕ ಕಡೆ ಸುಸಜ್ಜಿತ ಶೌಚಾಲಯ ನಿರ್ಮಿಸಿ ಅವುಗಳನ್ನು ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅವರು ಶೌಚಾಲಯದ ಉಪಯೋಗಕ್ಕೆ ನಿಗದಿತ ಶುಲ್ಕವನ್ನು ತೆಗೆದುಕೊಂಡು ನಿರ್ವಹಣೆ ಮಾಡುತ್ತಾರೆ. ಪ್ರಸ್ತುತ ಈ ಎರಡೂ ಶೌಚಾಲಯಗಳನ್ನೂ ಅಭಿವೃದ್ಧಿ ಪಡಿಸಿ ನಿರ್ವಹಣೆಗೆ ನೀಡುವ ಕುರಿತು ಪುರಸಭೆ ಯೋಚಿಸಬೇಕಿದೆ.

ಶೌಚಾಲಯ ದುರಸ್ತಿಗೆ ಕ್ರಮ: ಬಂಟ್ವಾಳದ ಎರಡೂ ಶೌಚಾಲಯಗಳನ್ನು ಸಾರ್ವಜನಿಕರಿಗೆ ಯೋಗ್ಯವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬಡ್ಡಕಟ್ಟೆಯ ಶೌಚಾಲಯದ ದುರಸ್ತಿಯ ಕುರಿತು ಈಗಾಗಲೇ ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡಲಾಗಿದೆ. ಮಳೆ ಕಡಿಮೆಯಾದ ತತ್‌ಕ್ಷಣ ದುರಸ್ತಿಯ ಕಾರ್ಯ ಆರಂಭಗೊಳ್ಳಲಿದೆ. – ಎಂ.ಆರ್‌. ಸ್ವಾಮಿ ಮುಖ್ಯಾಧಿಕಾರಿಗಳು, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next