Advertisement

ಪಾತಕಿ ಬನ್ನಂಜೆ ರಾಜಾಗೆ ನಕಲಿ ವೀಸಾ ಕಂಟಕ

06:35 AM Mar 15, 2018 | Team Udayavani |

ಬೆಳಗಾವಿ: ಈಗಾಗಲೇ 43ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಭೂಗತ ಪಾತಕಿ, ಅಂಕೋಲಾದ ಆರ್‌.ಎನ್‌. ನಾಯಕ ಹತ್ಯೆ ಪ್ರಕರಣದ ಆರೋಪಿ ಬನ್ನಂಜೆ ರಾಜಾಗೆ ಈಗ ಮತ್ತೂಂದು ಕಂಟಕ ಎದುರಾಗಿದೆ.

Advertisement

ಮಂಗಳೂರಿನಲ್ಲಿ ನಕಲಿ ಪಾಸ್‌ಪೋರ್ಟ್‌ ಹಾಗೂ ವೀಸಾ ಸಿದ್ಧಪಡಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಹಾಗೂ ಮಾಹಿತಿ ಸಲ್ಲಿಸಲು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ನ್ಯಾಯಾಲಯ) ನ್ಯಾಯಾಲಯ ಆದೇಶಿಸಿದ್ದು, ಪಾಸ್‌ಪೋರ್ಟ್‌ ಕೇಂದ್ರಕ್ಕೆ ವಂಚಿಸಿದ ಎಲ್ಲ ದಾಖಲಾತಿಗಳು ಈಗ ಮಂಗಳೂರಿಗೆ ರವಾನೆಯಾಗಿವೆ. ಇದರಿಂದ ಬನ್ನಂಜೆ ರಾಜಾ ಹೊಸ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಈ ಪ್ರಕರಣ ಹಿನ್ನೆಲೆಯಲ್ಲಿ ಬನ್ನಂಜೆ ರಾಜಾನ ಸಹಿ ನಮೂನೆ ಹಾಗೂ ಬರಹ ನಮೂನೆ ಪಡೆದು ಮಂಗಳೂರಿನ ಬರ್ಕೆ ಪೊಲೀಸ್‌ ಠಾಣೆಗೆ ಸಲ್ಲಿಸಲು ಬೆಳಗಾವಿಯ ಕೋಕಾ ನ್ಯಾಯಾಲಯದ ನ್ಯಾಯಾಧೀಶ ಆರ್‌.ಜೆ. ಸತೀಶಸಿಂಗ್‌ ಆದೇಶ ಹೊರಡಿಸಿದ್ದಾರೆ.

ಮಂಗಳೂರಿಗೆ ಸೂಕ್ತ ದಾಖಲಾತಿ: ಬನ್ನಂಜೆ ರಾಜಾ ಸದ್ಯ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿದ್ದಾನೆ. ಬರ್ಕೆ ಠಾಣೆ ತನಿಖಾಧಿಕಾರಿ ಸಿಪಿಐ ರಾಮಕೃಷ್ಣ ಅವರು ತನಿಖೆಗೆ ಪೂರಕ ದಾಖಲಾತಿಗಾಗಿ ಸರಕಾರಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ಮೂಲಕ ಕೋಕಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ನಕಲಿ ಪಾಸ್‌ಪೋರ್ಟ್‌ ಬಗ್ಗೆ ದಾಖಲೆ ಹಾಗೂ ಮಾಹಿತಿ ಸಲ್ಲಿಸಬೇಕು. ಜತೆಗೆ ಬನ್ನಂಜೆ ರಾಜಾನ ಸಹಿ ನಮೂನೆ ಹಾಗೂ ಬರಹ ನಮೂನೆ ಪಡೆದು ಲಿಖೀತ ಪುರಾವೆಗಳನ್ನು ತನಿಖಾಧಿಕಾರಿ ರಾಮಕೃಷ್ಣ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next