Advertisement

Farmers: ರೈತರಿಂದ ಖರೀದಿಸುವ ಹಾಲಿಗೆ 2 ರೂ. ಕಡಿತ

10:29 AM Nov 02, 2023 | Team Udayavani |

ರಾಮನಗರ: ಈಗಾಗಲೇ ಬರದಿಂದ ಕಂಗಾಲಾಗಿರುವ ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟ ರಾಜ್ಯೋತ್ಸವದಂದೇ ಶಾಕ್‌ ನೀಡಿದೆ. ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಿ ಆದೇಶ ಹೊರಡಿಸಿದೆ.

Advertisement

ಬೆಂಗಳೂರು ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್‌ ಹಾಲಿಗೆ ಅ.31ರವರೆಗೆ ಶೇ.4 ಫ್ಯಾಟ್‌, 8.5 ಸಾಂಧ್ರತೆ ಇದ್ದಲ್ಲಿ 34.15 ರೂ. ಬೆಲೆ ನಿಗದಿ ಮಾಡಿತ್ತು. ಇದೀಗ ನ.1 ರಿಂದ ಈ ಗುಣಮಟ್ಟದ ಹಾಲಿಗೆ ಒಕ್ಕೂಟ 32.15 ರೂ. ಬೆಲೆ ನಿಗದಿಮಾಡಿದೆ. ಬೆಂಗಳೂರು ಹಾಲು ಒಕ್ಕೂಟದ ಈ ನಿರ್ಧಾರದಿಂದ ಬೆಂಗ ಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 1.10 ಲಕ್ಷ ಹಾಲು ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ.

ಸರ್ಕಾರ ಕೊಟ್ಟಿದ್ದನ್ನು ಕಿತ್ತುಕೊಂಡ ಬಮೂಲ್‌: ಜುಲೈನಲ್ಲಿ ಹಾಲಿನ ದರ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿಗೆ 3 ರೂ. ಬೆಲೆ ಹೆಚ್ಚಳ ಮಾಡಿ, ಈ ಹಣವನ್ನು ರೈತರಿಗೆ ನೀಡುವಂತೆ ಸೂಚಿಸಿತ್ತು. ಸರ್ಕಾರ ಬೆಲೆ ಹೆಚ್ಚಳ ಮಾಡದಿದ್ದರಿಂದ ಒಂದೆಡೆ ರೈತರು ಬೆಲೆ ಹೆಚ್ಚಾಯಿತು ಎಂದು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರೆ, ಮತ್ತೂಂದೆಡೆ ಗ್ರಾಹಕರು ರೈತರಿಗೆ ನಾವು ನೀಡುತ್ತಿರುವ ಹೆಚ್ಚುವರಿ ಹಣ ತಲುಪುತ್ತಿದೆ ಎಂಬ ಸಮಾಧಾನದಲ್ಲಿದ್ದರು. ಆದರೆ, ಎರಡೇ ತಿಂಗಳಲ್ಲಿ ದರ ಇಳಿಕೆ ಮೂಲಕ ಸರ್ಕಾರ ಕೊಟ್ಟಿದ್ದ ಹೆಚ್ಚಿನ ಬೆಲೆಯನ್ನು ಒಕ್ಕೂಟ ರೈತರಿಂದ ಕಸಿದುಕೊಂಡಂತಾಗಿದೆ.

ಪದೇ ಪದೆ ಬೆಲೆ ಇಳಿಕೆ: ಜೂನ್‌ನಲ್ಲಿ ಬೆಂಗಳೂರು ಹಾಲು ಒಕ್ಕೂಟ ರೈತರಿಂದ ಖರೀದಿಸುವ ಹಾಲಿಗೆ ಪ್ರತಿಲೀಟರ್‌ಗೆ 1.50 ರೂ. ಕಡಿತ ಮಾಡಿತ್ತು. ಬಮೂಲ್‌ನ ಈ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಹಾಲಿನ ದರ ಕಡಿತ ಮಾಡದಂತೆ ಸೂಚಿಸಿದ್ದರು. ಬಳಿಕ ಹಾಲಿಗೆ ಸರ್ಕಾರ ದರ ಹೆಚ್ಚಳ ಮಾಡಿದಾಗ ಬಮೂಲ್‌ ನಾವು ನೀಡುತ್ತಿದ್ದ ಪ್ರೋತ್ಸಾಹ ಧನ ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಹೇಳಿ ಹೆಚ್ಚಳ ಸರಿದೂಗಿಸಿತ್ತು. ಇದೀಗ ಮತ್ತೆ ಎರಡು ರೂ. ಇಳಿಕೆ ಮಾಡಿದೆ.

ಸಮಸ್ಯೆ: ಈಗಾಗಲೇ ಬಮೂಲ್‌ ವ್ಯಾಪ್ತಿಯ 11 ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿವೆ. ಈ ಭಾಗದಲ್ಲಿ ಹಿಂಗಾರು, ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಮೇವಿನ ಕೊರತೆ ಎದುರಾಗಿದೆ. ದುಬಾರಿ ಬೆಲೆ ತೆತ್ತು ಮೇವು ಖರೀದಿಸಿ ರಾಸು ಸಾಕುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಒಕ್ಕೂಟದ ಹಾಲಿನ ಬೆಲೆ ಕಡಿತ ಮಾಡಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ನಷ್ಟ ಸರಿದೂಗಿಸಲು ಬಮೂಲ್‌ನಿಂದ ಬರೆ?: ಬಮೂಲ್‌ನ ಕೆಲ ಅಧಿಕಾರಿಗಳ ಮಾಹಿತಿ ಪ್ರಕಾರ ಒಕ್ಕೂಟಕ್ಕೆ ಪ್ರತಿದಿನ ಸುಮಾರು 15 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 12 ಲಕ್ಷ ಲೀಟರ್‌ ಹಾಲು ಮಾತ್ರ ನೇರವಾಗಿ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಹಾಲಿನ ಪುಡಿ ಹಾಗೂ ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದಾಗಿ ಒಕ್ಕೂಟಕ್ಕೆ ತೀವ್ರ ನಷ್ಟವಾಗಿದ್ದು, ಇದುವರೆಗೆ 65 ಕೋಟಿ ರೂ. ನಷ್ಟ ಅನುಭವಿಸಿದೆ. ಹಾಲು ಖರೀದಿ, ಮಾರಾಟ ಪ್ರಕ್ರಿಯೆಯಲ್ಲಿ ಬೆಂಗಳೂರು ಒಕ್ಕೂಟ ಪ್ರತಿ ಲೀಟರ್‌ಗೆ 1.85 ರೂ. ಸರಾಸರಿ ನಷ್ಟ ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸುವ ಉದ್ದೇಶದಿಂದ ರೈತರಿಗೆ ನಷ್ಟದ ಹೊರೆ ಹೊರಿಸಲು ಮುಂದಾಗಿದೆ ಎಂದು ಹೇಳಲಾಗಿದೆ.

ಪಶು ಆಹಾರದ ಬೆಲೆಯೂ ಹೆಚ್ಚಳ: ಒಂದೆಡೆ ಹಾಲಿನ ಬೆಲೆ ಇಳಿಕೆ ಮಾಡಿರುವ ಬಮೂಲ್‌, ಇತ್ತ ರೈತರಿಗೆ ಒಕ್ಕೂಟದ ವತಿ ಯಿಂದ ನೀಡುವ ಪಶು ಆಹಾರದ ಬೆಲೆಯನ್ನೂ ಹೆಚ್ಚಳ ಮಾಡಿದೆ. ಈ ಹಿಂದೆ ಪ್ರತಿ 50 ಕೆ.ಜಿ. ಪಶು ಆಹಾರಕ್ಕೆ 1,165 ರೂ. ಬೆಲೆ ನೀಡಲಾಗುತ್ತಿತ್ತು. ಇದೀಗ 1,250 ರೂ. ಬೆಲೆ ನಿಗದಿಮಾಡಿದ್ದು, ಇದು ರೈತರಿಗೆ ಮತ್ತೂಂದು ಬರೆ ಎಳೆದಂತಾಗಿದೆ.

ಪ್ರತಿಕ್ರಿಯೆ ನೀಡಲ್ಲ ಎಂದ ಎಂಡಿ: ಹಾಲಿನ ದರ ಕಡಿತ ಮಾಡಿರುವ ಬಗ್ಗೆ ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್‌.ಟಿ.ಸುರೇಶ್‌ ಅವರ ಪ್ರತಿಕ್ರಿಯೆಗಾಗಿ “ಉದಯವಾಣಿ’ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ದರ ಕಡಿತದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

ಬರದಿಂದ ಮೇವಿನ ಸಮಸ್ಯೆ, ಪಶು ಆಹಾರದ ಬೆಲೆ ಹೆಚ್ಚಳ, ಪಶು ವೈದ್ಯಕೀಯ ಸೇವೆ ದುಬಾರಿಯಿಂದಾಗಿ ರೈತರಿಗೆ ಹೈನುಗಾರಿಕೆ ಹೊರೆಯಾಗಿದೆ. ಈಗಾಗಲೇ ಸಾಕಷ್ಟು ಮಂದಿ ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಬಮೂಲ್‌ ಬೆಲೆ ಇಳಿಕೆ ಮಾಡಿರುವುದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಯೋಗೀಶ್‌ ರಾಂಪುರ, ರೈತ

 – ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next