Advertisement

ವರುಣನ ಕೃಪೆಗೆ ಏರಿದ ಹಾಲು ಸಂಗ್ರಹ

02:53 PM May 16, 2023 | Team Udayavani |

ಬೆಂಗಳೂರು: ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ(ಬಮೂಲ್‌)ದ ಹಾಲು ಪೂರೈಕೆಯಲ್ಲಿ ಹೆಚ್ಚಳ ಕಂಡು ಬಂದಿದೆ.

Advertisement

ರಾಸುಗಳಲ್ಲಿ ಕಂಡು ಬಂದ ಚರ್ಮಗಂಟು ರೋಗ, ಮೇವಿನ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಒಕ್ಕೂಟ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ 13 ಲಕ್ಷ ಲೀಟರ್‌ಗೆ ಇಳಿಕೆ ಆಗಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆ ಹಿನ್ನೆಲೆಯಲ್ಲಿ ಹಸುಗಳಿಗೆ ಹಸಿ ಮೇವು ದೊರೆಯುತ್ತಿದೆ. ಹೀಗಾಗಿ, ರೈತರ ಹಾಲು ಉತ್ಪಾದನೆ ದಿನೇ ದಿನೆ ಹೆಚ್ಚಳವಾಗಿದ್ದು, ಇದೀಗ 15 ಲಕ್ಷ ಲೀಟರ್‌ಗೆ ಬಂದು ತಲುಪಿದೆ.

ಬೆಂಗಳೂರು ನಗರ, ಗ್ರಾಮಾಂತರ ಮತ್ತು ಕನಕಪುರ ತಾಲೂಕು ವ್ಯಾಪ್ತಿಗೆ ಬಮೂಲ್‌ ಸೇರಲಿದೆ. ಈ ಹಿಂದೆ ರಾಸು ಹಸುಗಳಲ್ಲಿ ಕಂಡುಬಂದ ಚರ್ಮಗಂಟು ರೋಗದಿಂದಾಗಿ ಹಲವು ಹಸುಗಳಲ್ಲಿ ಹಾಲು ಕಡಿಮೆ ಕಡಿತವಾಗಿತ್ತು. ಜತೆಗೆ ಕಳೆದ ವರ್ಷ ಸುರಿದ ಅಕಾಲಿಕ ಮಳೆಗೆ ಅಧಿಕ ಪ್ರಮಾಣದಲ್ಲಿ ರಾಗಿ ಹುಲ್ಲು, ಭತ್ತದ ಹುಲ್ಲು ನಾಶವಾಗಿತ್ತು. ಹೀಗಾಗಿ ಹಸುಗಳಿಗೆ ಮೇವು ಕಡಿಮೆ ಆಗಿ ರೈತರ ಹಾಲಿನ ಪೂರೈಕೆಯಲ್ಲಿ ದಿಢೀರ್‌ ಕುಸಿತ ಕಂಡಿತ್ತು. ಈ ಕಾರಣದಿಂದಾಗಿ ಕೆಲವು ತಿಂಗಳ ಹಿಂದೆ ಬೆಂಗಳೂರು ಹಾಲು ಡೈರಿಗೆ ಬೇಡಿಕೆಗೆ ತಕ್ಕಷ್ಟು ಹಾಲು ದೊರೆಯದೆ ತೊಂದರೆ ಅನುಭವಿಸಿತ್ತು.

ಇದೀಗ ಹಾಲಿನ ಪೂರೈಕೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು ಕೊಂಚ ನಿರಾಳವಾಗಿದೆ. ಇತ್ತೀಚೆಗೆ ಬೆಂಗಳೂರು ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಅಧಿಕ ಮಳೆ ಸುರಿದಿದೆ. ಆ ಹಿನ್ನೆಲೆಯಲ್ಲಿ ರಾಸು ಹಸುಗಳಿಗೆ ಬೇಕಾಗುವ ಮೇವು ಕೂಡ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಪೂರೈಕೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಬಮೂಲನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರಿಗೆ 3 ರೂ.ಸಬ್ಸಿಡಿ: ಬಮೂಲ್‌ ವ್ಯಾಪ್ತಿಯಲ್ಲಿ ಮಹಿಳಾ ರೈತರು ಸೇರಿದಂತೆ ಸುಮಾರು 1.25 ಲಕ್ಷ ಹಾಲು ಪೂರೈಕೆದಾರರು ಇದ್ದಾರೆ. ಈ ಹಿಂದೆ ಚರ್ಮಗುಂಟು ರೋಗ ಸೇರಿದಂತೆ ಅನೇಕ ಕಾರಣಗಳಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುವತ್ತ ಮುಖ ಮಾಡಿದ್ದರು. ಆ ಹಿನ್ನೆಲೆಯಲ್ಲಿ ರೈತರ ಹೊರೆ ಇಳಿಸುವ ನಿಟ್ಟಿನಲ್ಲಿ ಬಮೂಲ್‌ ಪ್ರತಿ ಲೀಟರ್‌ಗೆ 3 ರೂ.ಗಳ ಸಬ್ಸಿಡಿ ನೀಡಿತು. ಅದು ಕೂಡ ರೈತರಿಗೆ ಕೊಂಚ ನೆರವಾಯಿತು ಎಂದು ಬಮೂಲ್‌ ಅಧ್ಯಕ್ಷ ನರಸಿಂಹ ಮೂರ್ತಿ ಹೇಳುತ್ತಾರೆ.

Advertisement

ರೈತರಿಗೆ 3 ರೂ. ಸಬ್ಸಿಡಿ ಸೇರಿದಂತೆ ಪ್ರತಿ ಲೀಟರ್‌ ಮೇಲೆ 34 ರೂ. ನೀಡಲಾಗುತ್ತದೆ. ಆದರೂ ಇದು ರೈತರಿಗೆ ಸಾಕಾಗದು. ಆ ಹಿನ್ನೆಲೆಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 2 ರೂ.ಅನ್ನು ರೈತರಿಗೆ ಸಬ್ಸಿಡಿ ನೀಡಿ ಹೈನೋದ್ಯಮ ಉಳಿಸುವಂತೆ ಮನವಿ ಮಾಡಲಾಗುವುದು. ಜತೆಗೆ ಹಾಲಿನ ಬೆಲೆ 2 ರೂ. ಹೆಚ್ಚಳ ಮಾಡುವಂತೆ ವಿನಂತಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಹಾಲು ಮಾರುಕಟ್ಟೆಯಲ್ಲಿ ಬಮೂಲ್‌ ಮುಂದೆ ಅಮೂಲ್‌ ಆಟ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ 17 ಲಕ್ಷ ಲೀ. ಹಾಲು ಪೂರೈಕೆ: ಕಳೆದ ವರ್ಷ ಇದೇ ಸೀಜನ್‌ನಲ್ಲಿ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟಕ್ಕೆ ಪ್ರತಿ ನಿತ್ಯ 17 ಲಕ್ಷ ಲೀಟರ್‌ ಹಾಲು ಪೂರೈಕೆ ಆಗುತ್ತಿತ್ತು. ಆದರೆ ಈಗ ಅದು 15 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ಇದರಲ್ಲಿ ಸುಮಾರು 12 ಲಕ್ಷ ಲೀಟರ್‌ ಹಾಲು ಪ್ರತಿ ನಿತ್ಯ ಮಾರಾಟವಾಗುತ್ತಿದೆ. ಉಳಿದ 3 ಲಕ್ಷ ಲೀಟರ್‌ ಹಾಲು ಅನ್ನು ಮೊಸರು, ಮಜ್ಜಿಗೆ ಮತ್ತು ಚೀಸ್‌ ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬಮೂಲ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟಕ್ಕೆ ಇನ್ನೂ ಹಾಲಿನ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪೂರೈಕೆಯಾಗುವ ಹಾಲನ್ನು ಪೌಂಡರ್‌ ಉತ್ಪಾದನೆಗೆ ಬಳಸಲಾಗುವುದು. ಹಾಲು ಉತ್ಪಾದಕರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಬಮೂಲ್‌ ಕೆಲವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಯಲ್ಲಿ ರಾಸುಗಳಿಗೆ ಹಸಿ ಮೇವು ಅಧಿಕ ವಾಗಿ ದೊರೆಯುತ್ತಿದೆ. ಆ ಹಿನ್ನೆಲೆಯಲ್ಲಿ ಹಸುಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಹೀಗಾಗಿ ಬಮೂಲ್‌ಗೆ ನಿತ್ಯ 15 ಲಕ್ಷ ಲೀಟರ್‌ ಹಾಲು ಪೂರೈಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ 17 ಲಕ್ಷ ಲೀಟರ್‌ ತಲುಪುವ ನಿರೀಕ್ಷೆಯಿದೆ. –ನರಸಿಂಹಮೂರ್ತಿ, ಬಮೂಲ್‌ ಅಧ್ಯಕ್ಷ

-ದೇವೇಶ ಸೂರಗುಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next