Advertisement

Padayatra: ಮಹಾಶಿವರಾತ್ರಿ ಧರ್ಮಸ್ಥಳಕ್ಕೆ ಪಾದಯಾತ್ರೆ ದಂಡು

06:07 PM Mar 05, 2024 | Team Udayavani |

ಚನ್ನರಾಯಪಟ್ಟಣ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಕಳೆದ ಒಂದು ವಾರದಿಂದ ವಾಹನ ದಟ್ಟಣೆ ಕಡಿಮೆಯಾಗಿದ್ದು, ಲಕ್ಷಾಂತರ ಮಂದಿ ಪಾದಚಾರಿಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.

Advertisement

ಮಾ.8 ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಂಜುನಾಥನ ದರ್ಶನ ಪಡೆಯಲು ಲಕ್ಷಾಂತರ ಮಂದಿ ಪಾದಯಾತ್ರೆ ಮೂಲಕ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಂಡೋಪ ತಂಡವಾಗಿ ತೆರಳುತ್ತಿದ್ದಾರೆ. ಹಲವೆಡೆ ಸ್ಥಳೀಯರು ದಾರಿಯಲ್ಲಿ ಸಾಗುವ ಭಕ್ತರಿಗೆ ಮಜ್ಜಿಗೆ, ನೀರು, ತಿಂಡಿ ನೀಡುವ ಮೂಲಕ ಭಕ್ತರಲ್ಲಿ ದೇವರನ್ನು ಕಾಣುತ್ತಿದ್ದಾರೆ.

ಕೇಸರಿ ಉಡುಪು: ಬೆಂಗಳೂರು, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಯ ಅನೇಕ ತಾಲೂಕುಗಳಿಂದ ಪಾದಯಾತ್ರೆ ಕೈಗೊಂಡಿರುವವರು ಕೇಸರಿ ಉಡುಪು ತೊಟ್ಟಿದ್ದಾರೆ. ಕೆಲವರು ಪ್ರತಿ ಹೆಜ್ಜೆಯಲ್ಲಿ ಮಂಜುನಾಥನ ಜಪ ಮಾಡಿದರೆ, ಇನ್ನು ಕೆಲವರು ಭಕ್ತಿ ಗೀತೆಗಳನ್ನು ಹಾಡುತ್ತಾ ದೇವರನ್ನು ಜಪ ತಪ ಮಾಡುತ್ತಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾರೆ. ಯುವಕರು ಕೇಸರಿ ಬಣ್ಣದ ಧರ್ಮ ಧ್ವಜ ಹಿಡಿದು ಯಾತ್ರೆ ಕೈಗೊಂಡಿದ್ದಾರೆ.

ಹಣ್ಣು, ನೀರು ಮಜ್ಜಿಗೆ, ಆಹಾರ ವಿತರಣೆ: ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವವರಿಗೆ ಹೆದ್ದಾರಿ ಬದಿಯಲ್ಲಿ ಇರುವ ಅನೇಕ ಗ್ರಾಮಗಳ ಮುಖಂಡರು ಸಂಘ, ಸಂಸ್ಥೆಯವರು ಸ್ವಯಂ ಪ್ರೇರಣೆಯಿಂದ ಬಾಳೆಹಣ್ಣು, ಕಿತ್ತಳೆ ಹಣ್ಣು, ಕುಡಿಯುವ ನೀರು, ತಿಂಡಿ ಹಾಗೂ ಮಜ್ಜಿಗೆ ನೀಡುವ ಮೂಲಕ ಪಾದಚಾರಿಗಳ ದಣಿವು ಮತ್ತು ಹಸಿವು ನೀಗಿಸುತ್ತಿದ್ದಾರೆ. ಉರಿ ಬಿಸಿಲಿನಲ್ಲಿಯೂ ಯಾತ್ರೆ: ಭಕ್ತರು ಬೆಳಗ್ಗೆ ಹಾಗೂ ಸಂಜೆ ತಂಪು ಹೊತ್ತಿನಲ್ಲಿ ಮಾತ್ರ ಯಾತ್ರೆ ಮಾಡುತ್ತಿಲ್ಲ, ಬಿಸಿಲ ಝಳದಲ್ಲಿಯೂ ಯಾತ್ರೆ ಕೈಗೊಂಡಿದ್ದಾರೆ. ಹಲವರು ತಮ್ಮ ಚಿಕ್ಕ ಮಕ್ಕಳನ್ನು ಹೊತ್ತು ಸಾಗುತ್ತಿದ್ದಾರೆ. ಇನ್ನು ಅನೇಕರು ಕಾಲಿಗೆ ಪಾದರಕ್ಷೆ ಹಾಕಿಕೊಳ್ಳದೆ ಸಾಗುತ್ತಿದ್ದಾರೆ.

ರಸ್ತೆ ಬದಿ ಮರದ ನೆರಳು ಆಶ್ರಯ: ನೂರಾರು ಕಿ. ಮೀ.ವರೆಗೆ ನಡೆಯುವ ಭಕ್ತರಿಗೆ ಆಯಾಸ ಆದಾಗ ರಸ್ತೆ ಬದಿಯಲ್ಲಿ ಇರುವ ಮರದ ನೆರಳಿಗೆ, ಹೆದ್ದಾರಿ ಸಮೀಪದಲ್ಲಿಯ ಸಮುದಾಯ ಭವನ, ಮನೆಯ ಜಗುಲಿ ಹಾಗೂ ಆವರಣದಲ್ಲಿ ವಿಶ್ರಾಂತಿ ಬಳಿಕ ಮತ್ತೆ ಪಾದಯಾತ್ರೆ ಆರಂಭಿಸುತ್ತಾರೆ.

Advertisement

ಹರಕೆ ಹೊತ್ತವರೇ ಹೆಚ್ಚಿನ ಸಂಖ್ಯೆಯಲ್ಲಿ: ಯಾವುದೇ ವಯೋಮಿತಿ ಇಲ್ಲದೇ ಪಾದಯಾತ್ರೆಯಲ್ಲಿ ಪಾಲ್ಗೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಡೆದುಕೊಂಡು ಸಾಗುತಿದ್ದು, ಮಾ.7ಸಂಜೆಯ ವೇಳೆಗೆ ಎಲ್ಲಾ ಭಕ್ತರು ಶ್ರೀಕ್ಷೇತ್ರ ತಲುಪಲಿದ್ದಾರೆ. ಕಂಕಣ, ಸಂತಾನ ಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜಿನಗಳ ನಿವಾರಣೆಗಾಗಿ ಹರಕೆ ಹೊತ್ತವರು, ಇಷ್ಟಾರ್ಥ ಫ‌ಲಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗಿ ಮುಡಿ ನೀಡುವ ಹರಕೆ ತೀರಿಸುತ್ತಾರೆ.

ಕಳೆದ 15 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡು ಶಿವರಾತ್ರಿ ಮಹೋತ್ಸವದಲ್ಲಿ ಮಂಜುನಾಥನ ದರ್ಶನ ಪಡೆಯುತಿದ್ದೇನೆ. ವಿದ್ಯೆ ಹಾಗೂ ಸ್ವ-ಉದ್ಯೋಗ ಹೊಂದಿದ್ದು, ತಾಯಿಯ ಆಶಯದಂತೆ ಈ ಬಾರಿ ಮದುವೆ ವಿಚಾರವಾಗಿ ಹರಕೆ ಹೊತ್ತು ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದೇನೆ. ●ಸುನೀಲ್‌, ಕಣ್ಣೂರು, ಬೆಂಗಳೂರು ಪೂರ್ವ ತಾಲೂಕು

ದಶಕಗಳ ಹಿಂದೆ ಹಿಂದೆ ಕಾಶಿಯತ್ರೆ ಹೆಸರಿನಲ್ಲಿ ವಯೋವೃದ್ದರು ಧಾರ್ಮಿಕ ಕ್ಷೇತ್ರಗಳ ಯಾತ್ರೆ ಮಾಡುತ್ತಿದ್ದು, ನಂತರ ನಿಂತು ಹೋಯಿತು. ಈಗ ತಿರುಪತಿ, ಧರ್ಮಸ್ಥಳ, ಶಬರಿಮಲೆಗೆ ಪ್ರತಿ ವರ್ಷ ಸಾವಿರಾರು ಮಂದಿ ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ತೆರಳುತ್ತಾರೆ. ಇವರ ಸೇವೆ ಮಾಡುವುದರಿಂದ ಆ ಭಗವಂತ ನಮಗೂ ಒಳಿತು ಮಾಡಲಿದ್ದಾನೆ. ●ತೇಜಸ್‌, ಹೆದ್ದಾರಿಯಲ್ಲಿ ಪಾದಯಾತ್ರಿಕರಿಗೆ ಹಣ್ಣು ನೀರು ವಿತರಿಸುವ ವ್ಯಕಿ

ನಾಸ್ತಿಕನಾಗಿದ್ದ ನಾನು ಯಾವುದೇ ದೇವರು, ಪೂಜೆ ಪುನಸ್ಕಾರ ನಂಬುತ್ತಿರಲಿಲ್ಲ. ನನ್ನ ಬದುಕಿನಲ್ಲಿ ಅಸಾಧ್ಯವಾದ ಘಟನೆ ನಡೆದು ಜೀವನ ಮುಗಿಯಿತು ಎನ್ನುವಾಗ ಹಿರಿಯರ ಮಾತಿನಂತೆ ಕಳೆದ 18 ವರ್ಷಗಳ ಹಿಂದೆ ಪಾದಯಾತ್ರೆ ಪ್ರಾರಂಭಿಸಿದೆ, ಎಲ್ಲವೂ ಒಳ್ಳೆಯದಾಯಿತು. ಬದುಕಿರುವವರೆಗೂ ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಮುಂದುವರಿಸುತ್ತೇನೆ. ●ಲಕ್ಷ್ಮಣ, ಪಾದಯಾತ್ರಿ, ಚಿಂತಲ ಮಡಿವಾಳ ಗ್ರಾಮ

– ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next