Advertisement

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

11:26 AM Jul 31, 2021 | Team Udayavani |

ನವದೆಹಲಿ: ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಲ್ಲಿ ವಿಶ್ವದರ್ಜೆಯ ನಿಯಮಗಳಂತೆ ಹುಲಿ ಸಂರಕ್ಷಣೆ ಮತ್ತು ನಿರ್ವಹಣೆ ನಡೆಸಲಾಗುತ್ತಿದೆ. ಹೀಗಾಗಿ ಈ ರಕ್ಷಿತಾರಣ್ಯಗಳು “ಕನ್ಸರ್ವೇಷನ್‌ ಅಶ್ಯೂರ್ಡ್‌ ಟೈಗರ್‌ ಸ್ಟ್ಯಾಂಡರ್ಡ್ಸ್ ‘(ಸಿಎಟಿಎಸ್‌) ನೀಡುವ ಮಾನ್ಯತೆಗೆ ಪಾತ್ರವಾಗಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ತಿಳಿಸಿದೆ.

Advertisement

ಬಂಡೀಪುರವಲ್ಲದೆ, ತಮಿಳುನಾಡಿನ ಮಧುಮಲೆ ಮತ್ತು ಅಣ್ಣಾಮಲೆ, ಕೇರಳದ ಪರಂಬಿಕ್ಕುಳಂ, ಪಶ್ಚಿಮ ಬಂಗಾಳದ ಸುಂದರ್‌ಬನ್ಸ್‌, ಉತ್ತರ ಪ್ರದೇಶದ ದುಧ್ವಾ, ಬಿಹಾರದ ವಾಲ್ಮೀಕಿ, ಮಹಾರಾಷ್ಟ್ರದ ಪೆಂಚ್‌, ಮಧ್ಯಪ್ರದೇಶದ ಸಾತ್ಪುರ, ಕಾನ್ಹಾ ಮತ್ತು ಪನ್ನಾ, ಅಸ್ಸಾಂನ ಕಾಝಿರಂಗ, ಒರಾಂಗ್‌ ಮತ್ತು ಮನಾಸ್‌ ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ ಸಿಕ್ಕಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ ಮಾತನಾಡಿ, ದೇಶದ ಎಲ್ಲಾ 51 ಹುಲಿ ಅಭಯಾರಣ್ಯಗಳು ಇಂಥ ಸಾಧನೆ ಮಾಡಬೇಕು. ಹುಲಿಗಳು ಅರಣ್ಯ ಮಾರ್ಗಗಳ ಮೂಲಕ ಇತರ ದೇಶಗಳ ಗಡಿ ದಾಟಿ ಪ್ರಯಾಣಿಸುತ್ತವೆ. ಅದನ್ನು ಉತ್ತೇಜಿಸಲು ನೆರೆಯ ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ.

ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವುಗಳ ರಕ್ಷಣೆಗೆ ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದುವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಸಂಜಯ ಗುಬ್ಬಿ ಹೇಳಿದ್ದಾರೆ. ಜತೆಗೆ ಹುಲಿ ಅಭಯಾರಣ್ಯದ ಸುತ್ತಮುತ್ತ ವಾಸಿಸುತ್ತಿರುವ ಸ್ಥಳೀಯರನ್ನು ಒಲಿಸಿ ರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹುಲಿಗಳು ಸಂಚರಿಸುವ ಕಾರಿಡಾರ್‌ ಅನ್ನು ರಕ್ಷಿಸಬೇಕು. ಈ ಮೂಲಕ ಅವುಗಳು ಪ್ರತ್ಯೇಕವಾಗಿರುವಂತೆ ನೋಡಬಾರದು ಎಂದಿದ್ದಾರೆ.

ಇದನ್ನೂ ಓದಿ :ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Advertisement

ಯಾವೆಲ್ಲ ಅಂಶಗಳು?
ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅದರ ನಿರ್ವಹಣೆ, ಸ್ಥಳೀಯ ವ್ಯಕ್ತಿಗಳನ್ನು ಒಳಗೊಳ್ಳುವಂತೆ ಮಾಡುವುದು, ಪ್ರವಾಸೋದ್ಯಮ, ಅವುಗಳ ಆವಾಸಸ್ಥಾನ ರಕ್ಷಣೆಯನ್ನು “ಈ ಮಾನ್ಯತೆಗೆ’ ಪ್ರಧಾನವಾಗಿ ಪರಿಗಣಿಸಲಾಗುತ್ತದೆ.

ಸಿಎಟಿಎಸ್‌ ಎಂದರೇನು?
– ಜಗತ್ತಿನಲ್ಲಿ ಹುಲಿ ಅಭಯಾರಣ್ಯದ ನಿರ್ವಹಣೆ ಹೇಗೆ ಇರಬೇಕು ಎಂಬುದನ್ನು ನಿರ್ದೇಶಿಸುವ ಸಂಸ್ಥೆ. ಕನ್ಸರ್ವೇಷನ್‌ ಅಶ್ಯೂರ್ಡ್‌ ಟೈಗರ್‌ ಸ್ಟ್ಯಾಂಡರ್ಡ್ಸ್ (ಸಿಎಟಿಎಸ್‌) ಎಂಬ ಹೆಸರಿನ ಈ ಒಕ್ಕೂಟ ಶುರುವಾದದ್ದು 2013ರಲ್ಲಿ
– ಜಗತ್ತಿನ ಏಳು ರಾಷ್ಟ್ರಗಳಲ್ಲಿರುವ 125 ಹುಲಿ ಅಭಯಾರಣ್ಯಗಳಲ್ಲಿ ಒಕ್ಕೂಟದ ನಿಯಮ ಪಾಲನೆ. ಪ್ರಸಕ್ತ ವರ್ಷ 20 ಹುಲಿ ಅಭಯಾರಣ್ಯ ಇದರ ವ್ಯಾಪ್ತಿಗೆ ಸೇರ್ಪಡೆ.

51- ದೇಶದಲ್ಲಿರುವ ಹುಲಿ ಅಭಯಾರಣ್ಯ
14- “ಸಂರಕ್ಷಣೆಯಲ್ಲಿ ಅತ್ಯುತ್ತಮ ಪಾತ್ರ’ ಮಾನ್ಯತೆ ಸಿಕ್ಕ ರಕ್ಷಿತಾರಣ್ಯಗಳು
2,967- ನಮ್ಮಲ್ಲಿರುವ ಒಟ್ಟು ಹುಲಿಗಳು (2018ರ ಗಣತಿ)
1,706- 2010ರಲ್ಲಿದ್ದ ಹುಲಿಗಳ ಸಂಖ್ಯೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next