Advertisement

ಬಾಳೆ ಬಂಗಾರ

10:22 PM Aug 25, 2019 | Lakshmi GovindaRaj |

ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ಕೃಷಿಕ ರಾಮ್‌ ಶರಣ್‌ ವರ್ಮಾ. ಆದರೆ, ಬಡತನ ಇದ್ದಿದ್ದರಿಂದ ಅನಿವಾರ್ಯವಾಗಿ ಅವರು ಬಾಳೆ ಕೃಷಿಯಲ್ಲಿ ತೊಡಗಬೇಕಾಯಿತು. ಇಂದು, ಪದ್ಮಶ್ರೀ ಪುರಸ್ಕಾರ ಪಡೆದಿರುವ ಇವರ ವಾರ್ಷಿಕ ವರಮಾನ, ಕಂಪನಿಯ ಸಿ.ಇ.ಓ.ಗಳು ಪಡೆಯುತ್ತಿರುವಷ್ಟೇ ಇದೆ!

Advertisement

“ಬಾಳೆ ರಾಜ’ ಎಂದು ಪ್ರಖ್ಯಾತರಾಗಿರುವ ರಾಮ್‌ ಶರಣ್‌ ವರ್ಮಾ, 2019ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ. ಅದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 30 ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿದೆ. ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್‌ ಶರಣ್‌ ವರ್ಮಾ. ಆದರೆ, ಕುಟುಂಬದ ಬಡತನದಿಂದಾಗಿ ಅವರು ಕೃಷಿಯಲ್ಲಿ ತೊಡಗಬೇಕಾಯಿತು. “ಬಾಳೆ ರಾಜ’ ಎಂಬ ಹೆಸರಿಗೆ ತಕ್ಕಂತೆ 150 ಎಕರೆ ವಿಸ್ತಾರದ ಜಮೀನಿನಲ್ಲಿ ಈಗ ರಾಮ್‌ ಶರಣ್‌ ವರ್ಮಾರ ಕೃಷಿ ಪ್ರಯೋಗ ನಡೆಯುತ್ತಿದೆ. ತಿಂಗಳಿಗೆ 3 ಲಕ್ಷ ರೂ.ನಿಂದ 4 ಲಕ್ಷ ರೂ. ತನಕ ಆದಾಯ ಅವರದ್ದು!

ಮೊದಲಿನಿಂದಲೂ ಪ್ರಯೋಗಶೀಲತೆ: ರಾಮ್‌ ಶರಣ್‌ ವರ್ಮಾರ ತಂದೆ ಬೆಳೆಯುತ್ತಿದ್ದದ್ದು ಗೋಧಿ, ಭತ್ತ, ಕಬ್ಬು ಮತ್ತು ಸಾಸಿವೆ. ಅವರದು ಸಾಂಪ್ರದಾಯಿಕ ಕೃಷಿ. ಆ ವಿಧಾನದಲ್ಲಿ ಉತ್ಪಾದನಾ ವೆಚ್ಚವೂ ಅಧಿಕ, ಕೆಲಸಗಾರರ ಅವಲಂಬನೆಯೂ ಅಧಿಕ; ಅದರಿಂದಾಗಿ ಲಾಭ ಅತ್ಯಲ್ಪ ಎಂಬುದನ್ನು ಗಮನಿಸಿದರು. ಹಾಗಾಗಿ, ಹೊಸ ಬೆಳೆಗಳನ್ನು ಹೊಸ ವಿಧಾನದಲ್ಲಿ ಬೆಳೆಯಬೇಕೆಂಬ ಯೋಚನೆ ಯುವಕ ರಾಮ್‌ ಶರಣ್‌ ಅವರದು. 1984ರಲ್ಲಿ ಮಹಾರಾಷ್ಟ್ರ, ಗುಜರಾತ್‌, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಿಗೆ ಅವರ ಭೇಟಿ. ಅಲ್ಲಿನ ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಸಂಗ್ರಹಿಸಿದರು. ಅನಂತರ 1988ರಲ್ಲಿ ರಾಮ್‌ ಶರಣ್‌ ಒಂದೆಕರೆ ಜಾಗದಲ್ಲಿ ಅಂಗಾಂಶ ಕಸಿಯ ಬಾಳೆ ತೋಟ ಬೆಳೆಸಿದರು. ಮೊದಲ ಪ್ರಯತ್ನದಲ್ಲೇ ಅವರಿಗೆ ದೊರೆತ ಇಳುವರಿ 400 ಕ್ವಿಂಟಾಲ್‌. 14 ತಿಂಗಳ ಅವಧಿಯ ಆ ಬೆಳೆಗೆ ತಗುಲಿದ ವೆಚ್ಚ ಒಂದು ಲಕ್ಷ ರೂಪಾಯಿ ಹಾಗೂ ಆದಾಯ ನಾಲ್ಕು ಲಕ್ಷ ರೂಪಾಯಿ.

ಆಧುನಿಕ ಪದ್ಧತಿಗಳಿಗೆ ಮೊರೆ: 1990ರಲ್ಲಿ ರಾಮ್‌ ಶರಣ್‌ ಒಂದು ಎಕರೆಯಲ್ಲಿ 8,000 ಟೊಮೆಟೊ ಸಸಿಗಳನ್ನು ನೆಟ್ಟರು. ಅವುಗಳಿಗೆ ಕೋಲುಗಳ ಆಧಾರ ಕೊಟ್ಟು ಆರಡಿ ಎತ್ತರಕ್ಕೆ ಬೆಳೆಸಿದರು. ಈ ವಿಧಾನದಿಂದ ಅವರಿಗೆ ಅಧಿಕ ಇಳುವರಿ ಗಳಿಸಲು ಸಾಧ್ಯವಾಯಿತು. ಸಾಂಪ್ರದಾಯಿಕ ವಿಧಾನದಲ್ಲಿ ಇಳುವರಿ ಎಕರೆಗೆ 200 ಕ್ವಿಂಟಾಲ್‌ ಆಗಿದ್ದರೆ, ಸುಧಾರಿತ ವಿಧಾನದಲ್ಲಿ ಎಕರೆಗೆ 400ರಿಂದ 500 ಕ್ವಿಂಟಾಲ್ ಆ ಮೂಲಕ ಎಕರೆಗೆ 4 ಲಕ್ಷ ರೂ. ಆದಾಯ.
ರಾಮ ಶರಣ್‌ ವರ್ಮಾರ ಯಶಸ್ಸಿನ ಸುದ್ದಿ ಉತ್ತರಪ್ರದೇಶದ 50 ಜಿಲ್ಲೆಗಳ ಹಲವು ರೈತರ ಗಮನ ಸೆಳೆಯಿತು. ರೈತರು ತಂಡತಂಡವಾಗಿ ಅವರ ಜಮೀನಿಗೆ ಭೇಟಿ ನೀಡಲು ಶುರುವಿಟ್ಟರು.

ತಮ್ಮ ಅನುಭವ ಹಾಗೂ ಯಶಸ್ಸಿನ ಸೂತ್ರಗಳನ್ನು ರೈತರೊಂದಿಗೆ ಹಂಚಿಕೊಳ್ಳಲು ರಾಮ್‌ ಶರಣ್‌ ಮುಂದಾದರು. ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿರುವ ರಾಮ್‌ ಶರಣರ ಜಮೀನು ನೋಡಲು ದೇಶವಿದೇಶಗಳ ರೈತರು ಬರುತ್ತಲೇ ಇರುತ್ತಾರೆ. 1986ರಲ್ಲಿ ಒಂದೆಕರೆಯಲ್ಲಿ ಕೃಷಿ ಶುರು ಮಾಡಿದ್ದ ರಾಮ್‌ ಶರಣ್‌ ಅವರ ಕೃಷಿ ಇದೀಗ 150 ಎಕರೆಗಳಿಗೆ ವ್ಯಾಪಿಸಿದೆ. ಯಾಕೆಂದರೆ, ಅವರ ಹಳ್ಳಿಯ ಅನೇಕ ರೈತರು ತಮ್ಮ ಜಮೀನನ್ನು ಇವರಿಗೆ ಲೀಸಿಗೆ ಕೊಟ್ಟಿ¨ªಾರೆ. ರಾಮ್‌ ಶರಣ್‌, ರೈತರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿಕ್ಕಾಗಿ ಕಾರ್ಯಾಗಾರಗಳನ್ನೂ ನಡೆಸುತ್ತಾರೆ. ಇಂದು ಕೃಷಿಯಲ್ಲಿ ಅವರು ಕೈಗೊಂಡಿರುವ ಪ್ರಯೋಗಗಳನ್ನು, ಪದ್ಧತಿಗಳನ್ನು ಅನೇಕ ರೈತರು ಅನುಸರಿಸುತ್ತಿದ್ದಾರೆ.

Advertisement

ಕ್ರಾಪ್‌ ರೊಟೇಷನ್‌: ಅವರು 2012ರಲ್ಲಿ ಕೆಂಪು ಬಾಳೆಯ 1,000 ಸಸಿ ನೆಟ್ಟರು. ಅಧಿಕ ಪ್ರೋಟೀನ್‌ ಮತ್ತು ನಾರಿನಂಶ ಹೊಂದಿರುವ ಕೆಂಪು ಬಾಳೆಯಲ್ಲಿ ಸಕ್ಕರೆಯಂಶ ಕಡಿಮೆ. ಈ ತಳಿಯ ಅವಧಿ 18 ತಿಂಗಳು. ಇದರ ಬಾಳೆಹಣ್ಣಿನ ಸಗಟು ಮಾರಾಟ ಬೆಲೆ ಕಿಲೋಗೆ 80- 100 ರು. ಸಾಂಪ್ರದಾಯಿಕ ಬಾಳೆ ತಳಿಗಳ ಅವಧಿ 14 ತಿಂಗಳಾಗಿದ್ದು, ಫ‌ಸಲಿನ ಬೆಲೆ ಕಿಲೋಗೆ ಕೇವಲ 15 ರು. ಹಾಗಾಗಿ, ಕೆಂಬಣ್ಣದ ಬಾಳೆ ತಳಿಯ ಇಳುವರಿ ಕಡಿಮೆಯಾದರೂ ಅದರಿಂದ ಸಿಗುವ ಎಕರೆವಾರು ಆದಾಯ ಅಧಿಕ.ಬಾಳೆ ಕೃಷಿಯ ಯಶಸ್ಸಿನಿಂದ ಉತ್ಸಾಹಿತರಾದ ರಾಮ್‌ ಶರಣ್‌ ಕೃಷಿಯಲ್ಲಿ ನಾನಾ ಪ್ರಯೋಗಗಳನ್ನು ಕೈಗೊಂಡರು. ಮಣ್ಣಿನ ಫ‌ಲವತ್ತತೆ ಮತ್ತು ಬೆಳೆಗಳ ಇಳುವರಿ ಹೆಚ್ಚಳಕ್ಕೆ ಬೆಳೆ ಪರಿವರ್ತನೆ ಅಗತ್ಯವೆಂದು ಅವರು ತಿಳಿದಿದ್ದರು. ಆದ್ದರಿಂದ, ಬಾಳೆ ಬೆಳೆದ ನಂತರ, 90 ದಿನಗಳ ಅವಧಿಯಲ್ಲಿ ಆಲೂಗಡ್ಡೆ, ಬಳಿಕ 120 ದಿನಗಳ ಅವಧಿಯಲ್ಲಿ ಹೈಬ್ರಿಡ್‌ ಟೊಮೆಟೊ, ಅದಾದ ನಂತರ ಮುಂದಿನ 90 ದಿನಗಳಲ್ಲಿ ಮೆಂತ್ಯೆ ಬೆಳೆಯುತ್ತಾರೆ. ಇದು ಅವರು ಅನುಸರಿಸುವ ಬೆಳೆಗಳ ವರ್ತುಲ (ಕ್ರಾಪ್‌ ರೊಟೇಷನ್‌).

ಈವರೆಗೆ ಸುಮಾರು ಹತ್ತು ಲಕ್ಷ ರೈತರು ನನ್ನ ತೋಟ ನೋಡಿ ಹೋಗಿದ್ದಾರೆ. ನನಗೆ ಅದಕ್ಕಿಂತಲೂ ಹೆಚ್ಚಿನ ಹೆಮ್ಮೆಯ ಸಂಗತಿ ಏನೆಂದರೆ, ನನ್ನ ಹಳ್ಳಿಯ ಜನರು ಕೆಲಸ ಹುಡುಕಿಕೊಂಡು ಈಗ ನಗರಗಳಿಗೆ ಹೋಗುತ್ತಿಲ್ಲ. ಬದಲಾಗಿ, ನಗರಗಳ ಜನರೇ ಕೆಲಸಕ್ಕಾಗಿ ನಮ್ಮ ಹಳ್ಳಿಗೆ ಬರುತ್ತಿದ್ದಾರೆ.
-ರಾಮ್‌ ಶರಣ್‌ ವರ್ಮಾ, ಪದ್ಮಶ್ರೀ ಪುರಸ್ಕೃತ ಕೃಷಿಕ

* ಅಡ್ಡೂರು ಕೃಷ್ಣರಾವ್‌

Advertisement

Udayavani is now on Telegram. Click here to join our channel and stay updated with the latest news.

Next