Advertisement

ತಾಕತ್ತಿದ್ದರೆ ಬಜರಂಗ ದಳವನ್ನು ಕಾಂಗ್ರೆಸ್‌ ನಿಷೇಧಿಸಲಿ : ಬಿ.ವೈ. ರಾಘವೇಂದ್ರ

05:33 PM May 05, 2023 | Team Udayavani |

ಕುಂದಾಪುರ: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಬ್ಯಾನ್‌ ಮಾಡುವುದಾಗಿ ಹೇಳಿದ್ದು, ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಬಜರಂಗ ದಳವನ್ನು ಬ್ಯಾನ್‌ ಮಾಡುವ ಧೈರ್ಯ ತೋರಿಸಲಿ. ಪ್ರವೀಣ್‌ ನೆಟ್ಟಾರು, ಶಿವಮೊಗ್ಗದ ಹರ್ಷ ಸೇರಿದಂತೆ ಅನೇಕ ಹಿಂದು ಕಾರ್ಯಕರ್ತರ ರಕ್ತದೊಕುಳಿ ಈ ನೆಲದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಯಾವನೇ ಒಬ್ಬ ಹಿಂದು ಕಾರ್ಯಕರ್ತರ ರಕ್ತವನ್ನು ಈ ನೆಲದಲ್ಲಿ ಬಿಡದಂತೆ ಮಾಡಬೇಕಾದರೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಗಂಗೊಳ್ಳಿಯಲ್ಲಿ ಅವರು ಬುಧವಾರ ಸಂಜೆ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಪರ ಚುನಾವಣಾ ಪ್ರಚಾರದ ಬೈಹತ್‌ ರೋಡ್‌ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ವಾರಂಟಿ ಮುಗಿದಿದೆ
ಕಾಂಗ್ರೆಸ್‌ ಪಕ್ಷದ ವಾರಂಟಿ ಮುಗಿದಿದೆ. ಹೀಗಾಗಿ ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಬೆಲೆ ಇಲ್ಲ. ಕೇವಲ ಓಟಿಗಾಗಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದು, ಜನರನ್ನು ವಂಚಿಸುವ ಪ್ರಯತ್ನ ಇದಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ 425 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಈಗ 43 ಸ್ಥಾನಗಳಿಗೆ ಸೀಮಿತವಾಗಿದ್ದು, ಕನಿಷ್ಠ ವಿರೋಧ ಪಕ್ಷದ ಸ್ಥಾನಮಾನ ಕೂಡ ಇಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಠೇವಣಿ ಸಿಗದ ರೀತಿಯಲ್ಲಿ ಸೋಲಿಸಿ ಬಿಜೆಪಿಯನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಬೇಕು. ಹಿಂದುಗಳ ಹುಲಿಯಾಗಿ, ಹಿಂದುಗಳ ಧ್ವನಿಯಾಗಿ ಗುರುರಾಜ್‌ ಗಂಟಿಹೊಳೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅತ್ಯಧಿಕ ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದವರು ಕರೆ ನೀಡಿದರು.

ಗೋಮಾತೆ ರಕ್ಷಣೆ
ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಗಂಗೊಳ್ಳಿ ಶಿವಾಜಿಯ ಪ್ರತಾಪಗಢವಿದ್ದಂತೆ. ಇಲ್ಲಿ ಪ್ರತಿಯೊಂದು ಮನೆಯಲ್ಲೂ ಹಿಂದುತ್ವದ ಕೆಚ್ಚು ಇದೆ. ಬೇರೆ ಕಡೆ ಹೋದರೆ ಹಿಂದುತ್ವವನ್ನು ಹೇಳಿ ಕೊಡಬೇಕಾದರೆ, ಗಂಗೊಳ್ಳಿಯಲ್ಲಿ ಮಾತ್ರ ಹಿಂದುತ್ವದ ಕೆಚ್ಚನ್ನು ತೆಗೆದುಕೊಂಡು ಹೋಗಬಹುದು. ಶಾಸಕನಾಗಿ ಆಯ್ಕೆಯಾದರೆ ತಾಯಂದಿರ ರಕ್ಷಣೆ, ಗೋ ಮಾತೆಯ ರಕ್ಷಣೆ ಜತೆಗೆ ಪ್ರತಿಯೊಬ್ಬ ಹಿಂದು ಕಾರ್ಯಕರ್ತರ ಬೆನ್ನಿಗೆ ನಿಂತು ಸಮಾಜದ ಪರವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ಬೈಂದೂರು ಮಂಡಲ ಬಿಜೆಪಿ ಉಸ್ತುವಾರಿ ಬ್ರಿಜೇಶ ಚೌಟ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಗೋವಿಂದ ಬಾಬು ಪೂಜಾರಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಉಪಾಧ್ಯಕ್ಷ ಆನಂದ ಖಾರ್ವಿ, ತಾ.ಪಂ. ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್‌ ತ್ರಾಸಿ, ಬಿಜೆಪಿ ಮುಖಂಡರು, ಗ್ರಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

2 ಕಿ.ಮೀ. ರೋಡ್‌ ಶೋ
ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯಿಂದ ಗಂಗೊಳ್ಳಿ ಬಂದರು ಬಸ್‌ ನಿಲ್ದಾಣದವರೆಗೆ ಸುಮಾರು 2 ಕಿ.ಮೀ. ದೂರದವರೆಗೆ ಬೃಹತ್‌ ರೋಡ್‌ ಶೋ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರು ಹಾಗೂ ಯುವ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು.

Advertisement

ಮೀನುಗಾರರ ಸಂಕಷ್ಟ ಆಲಿಸಿದರು..
ಮರವಂತೆಯ ಮೀನುಗಾರರನ್ನು ಗುರುವಾರ ಬೆಳಗ್ಗೆ ಅಲ್ಲಿನ ಬಂದರಿನಲ್ಲಿ ಭೇಟಿಯಾಗಿ, ಅವರೊಂದಿಗೆ ಕುಳಿತ ಸಂಕಷ್ಟವನ್ನು ಆಲಿಸಿದ ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಅವರು, ಇಲ್ಲಿನ ಬಂದರಿನ ಎರಡನೇ ಹಂತದ ಕಾಮಗಾರಿ ನನ್ನ ಆದ್ಯತೆಗಳಲ್ಲಿ ಒಂದಾಗಿದ್ದು, ಈ ಬಗ್ಗೆ ನನ್ನ ಮೇಲೆ ನಂಬಿಕೆಯಿರಲಿ. ಮೀನುಗಾರರ ಸಂಕಷ್ಟವನ್ನು ಅರಿತುಕೊಂಡು ಬಗೆಹರಿಸಲು ಬದ್ಧನಾಗಿರುವೆ ಎಂದವರು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next