Advertisement

ಕೋವಿಡ್ ದೂರಮಾಡಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ : ಗ್ರಾಮಸ್ಥರ ಕ್ರಮಕ್ಕೆ ಅಸಮಾಧಾನ

08:57 PM May 25, 2021 | Team Udayavani |

ಬಳ್ಳಾರಿ: ಗಣಿನಾಡಿನ ಬಳ್ಳಾರಿ/ವಿಜಯನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಮಹಮ್ಮಾರಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ತಾಲೂಕಿನ ಡಿ.ಕಗ್ಗಲ್ ಗ್ರಾಮದ ಜನರು ಮೌಢ್ಯಾಚರಣೆಯ ಮೊರೆ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೂರಾರು ಕೆಜಿ ಅನ್ನವನ್ನು ಕೊಂಡೊಯ್ದು ಗ್ರಾಮದ ಹೊರವಲಯದಲ್ಲಿ ಚೆಲ್ಲುವ ಮೂಲಕ ಮೌಢ್ಯಾಚರಿಸಿದ್ದಾರೆ.

Advertisement

ಬಳ್ಳಾರಿ/ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೂ ಕೋವಿಡ್ ಸೋಂಕು ಆವರಿಸಿದ್ದು, ನೂರಾರು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅದರಂತೆ ತಾಲೂಕಿನ ಡಿ.ಕಗ್ಗಲ್ ಗ್ರಾಮಕೂ ಸೋಂಕು ವ್ಯಾಪಿಸಿದೆ. ಗ್ರಾಮವನ್ನು ಕೊರೊನಾದಿಂದ ದೂರವಾಗಿಸಲು, ಮುಕ್ತಗೊಳಿಸಲು ಮೌಢ್ಯಾಚರಣೆಗೆ ಮುಂದಾಗಿರುವ ಗ್ರಾಮಸ್ಥರು, ಗ್ರಾಮದಲ್ಲಿ ಪ್ರತಿ ಮನೆಯಿಂದ ತಲಾ ಐದೈದು ಕೆಜಿ ಅನ್ನವನ್ನು ಮಾಡಿಸಿಕೊಂಡು ನೂರಾರು ಕೆಜಿ ಅನ್ನವನ್ನು ಟ್ರ್ಯಾಕ್ಟರ್ ಗಳಲ್ಲಿ ಸಂಗ್ರಹಿಸಿಕೊಂಡು ಗ್ರಾಮದ ಹೊರವಲಯದಲ್ಲಿ ಚೆಲ್ಲಿ ಮಣ್ಣುಪಾಲು ಮಾಡಿದ್ದಾರೆ.

ಇದನ್ನೂ ಓದಿ :ಕೋವಿಡ್ ಸೋಂಕು ದೃಢಪಟ್ಟರೂ ಎದೆಗುಂದದೆ ಇತರರಿಗೆ ಮಾದರಿಯಾದ ವಯೋವೃದ್ದೆ

ಕೋವಿಡ್ ಸೋಂಕು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಂಬಂಧಿಕರು, ಬಡ ಜನರು ಆಹಾರ ಸಿಗದೆ ಪರದಾಡುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮಗಳಲ್ಲಿ ನೂರಾರು ಕೆಜಿ ಅನ್ನವನ್ನು ಚೆಲ್ಲಿ ಮಣ್ಣು ಪಾಲು ಮಾಡಿ ಮೌಢ್ಯಾಚರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳೆದೊಂದು ವಾರದ ಹಿಂದೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲೂ ಇದೇ ರೀತಿ ಅನ್ನವನ್ನು ಚೆಲ್ಲುವ ಮೂಲಕ ಮೌಢ್ಯಾಚರಣೆ ಮಾಡಿದ್ದರು.

ದೂರಿನ ಪತ್ರ ವೈರಲ್;
ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಕೊರೊನಾ ದೂರವಾಗಿಸಲು ಮಾಡಿದ ಮೌಢ್ಯಾಚರಣೆಗೆ ಕಾರಣರಾದ ಗ್ರಾಮದ ಮುಖಂಡರ ಮೇಲೆ ಕ್ರಮಕೈಗೊಳ್ಳುವಂತೆ ಗ್ರಾಮದ ಯುವಕರು ಮೋಕಾ ಠಾಣೆ ಪಿಎಸ್‌ಐಗೆ ಬರೆದ ದೂರಿನ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

Advertisement

ಕೊರೊನಾ ಸೋಂಕು ಗ್ರಾಮದಲ್ಲಿ ವ್ಯಾಪಿಸಿರುವುದರಿಂದ ಈಚೆಗೆ ಗ್ರಾಮದಲ್ಲಿ ಡಂಗೂರ ಸಾರಿಸಿರುವ ಮುಖಂಡರು ಡಂಗೂರ ಸಾರಿಸಿ ಭೂತ-ಪ್ರೇತಗಳಿಗೆ ಬೃಹತ್ ಅನ್ನಸಂತರ್ಪಣೆ ಮಾಡಿದರೆ, ಕೊರೊನಾ ದೂರವಾಗುವುದು ಎಂಬ ಭಾವನೆ ಜನರಲ್ಲಿ ಸೃಷ್ಟಿಸಿ, ಪ್ರತಿ ಮನೆಮನೆಯಿಂದ ಐದು ಕೆಜಿಯಂತೆ ನೂರಾರು ಕೆಜಿ ಅನ್ನ ಮಾಡಿಸಿ, ಟ್ರಾö್ಯಕ್ಟರ್‌ಗಲ್ಲಿ ಸಂಗ್ರಹಿಸಿಕೊಂಡು ಇಡೀರಾತ್ರಿ ಗ್ರಾಮದ ಸುತ್ತಲೂ ಚೆಲ್ಲಿದ್ದಾರೆ.

ಈ ಮೌಢ್ಯಾಚರಣೆ ಗ್ರಾಮದ ವಿದ್ಯಾವಂತ ಯುವಕರನ್ನು ತಲೆತಗ್ಗಿಸುವಂತೆ ಮಾಡಿದೆ. ಗ್ರಾಮದ ಅನಕ್ಷರಸ್ಥ, ಭಂಡ ಮುಖಂಟರು ಗ್ರಾಮದಲ್ಲಿ ಆಗಾಗ ಮಾಡುತ್ತಿರುತ್ತಾರೆ. ಈ ಮುಖಂಡರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಗ್ರಾಮದ ಕೆಲ ಮುಖಂಡರ ಹೆಸರುಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಡಿ.ಕಗ್ಗಲ್ ಗ್ರಾಮದಲ್ಲಿ ನಡೆದಿರುವ ಈ ಮೌಢ್ಯಾಚರಣೆ ಘಟನೆ ಬಗ್ಗೆ ಈವರೆಗೂ ಯಾರೊಬ್ಬರೂ ಠಾಣೆಗೆ ಬಂದು ಖುದ್ದು ಭೇಟಿನೀಡಿಯಾಗಲಿ ಅಥವಾ ಅಂಚೆ ಮೂಲಕವಾಗಲಿ ಯಾವುದೇ ದೂರು ಬಂದಿಲ್ಲ. ಪ್ರಕರಣವೂ ದಾಖಲಾಗಿಲ್ಲ ಎಂದು ಮೋಕಾ ಠಾಣೆಯ ಪಿಎಸ್‌ಐ ರಘು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next