Advertisement

Dharwad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ

07:30 PM May 15, 2024 | sudhir |

ಧಾರವಾಡ : ಮುಂದಿನ ಪೀಳಿಗೆಗೆ ಬಸವಾದಿ ಶರಣರ ವಚನಗಳನ್ನು ತಲುಪಿಸಲು ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ಬೀದರ ಭಾಲ್ಕಿಯ ಹಿರೇಮಠ ಸಂಸ್ಥಾನ ಮಠದಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಜಯಂತಿ ಅಂಗವಾಗಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠವು 50 ವರ್ಷ ಪೂರೈಸಿದ ಪ್ರಯುಕ್ತ ಹಮ್ಮಿಕೊಂಡಿದ್ದ ಬಸವೇಶ್ವರ ಶ್ರೀ ಬಸವೇಶ್ವರ ಪೀಠದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವ ತತ್ವ ಪ್ರಸಾರವನ್ನು ಲಕ್ಷಕ್ಕಿಂತ ಹೆಚ್ಚು ಜನರು ವಚನ ಪ್ರಚಾರಕರು ವಚನಗಳ ಪ್ರಚಾರ ಮಾಡಿದ್ದು ವಿಶೇಷ. ಈಗಲೂ ಸಹ ಬಸವಾದಿ ಶರಣರ ವಚನಗಳ ಪ್ರಚಾರ ಮಾಡಬೇಕಾದ ಅವಶ್ಯಕತೆ ಇದೆ. ಬಸವೇಶ್ವರ ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅವಶ್ಯಕತೆ ಇದೆ. ಅದರಲ್ಲೂ ಮನುಷ್ಯನ ಮಾನಸಿಕ ಅಂಗವೈಕಲ್ಯತೆಯನ್ನು ನಿವಾರಣೆಗಾಗಿ ವಚನಗಳನ್ನು ನಾವು ಅಳವಡಿಸಿಕೊಳ್ಳವದು ಅವಶ್ಯವಿದ್ದು, ಹೀಗಾಗಿ ಮುಂದಿನ ಪೀಳಿಗೆಗೆ ವಚನಗಳನ್ನು ತಲುಪಲು ವಚನ ವಿಶ್ವವಿದ್ಯಾಲಯದ ಸ್ಥಾಪನೆ ಅತ್ಯಗತ್ಯ ಎಂದು ಪ್ರತಿಪ್ರಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ಸುತ್ತೂರಿನ ಶ್ರೀವೀರ ಸಿಂಹಾಸನಮಠದ ಜಗದ್ಗುರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಜನ ಭಾಷೆಯನ್ನೇ ದೈವ ಭಾಷೆಯನ್ನಾಗಿ ಮಾಡಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ. ಬಸವೇಶ್ವರ ವಚನಗಳಲ್ಲಿ ಮನುಷ್ಯನ ಸಮಸ್ಯೆಗಳಿಗೆ ಪರಿಹಾರ ಇದೆ. ಬಸವಾದಿ ಶರಣರ ವಚನ ಮತ್ತು ತತ್ವಗಳನ್ನು ವಿದ್ಯಾರ್ಥಿಗಳಿಗೆ ವಿವಿಧ ಮಾಧ್ಯಮದ ಮೂಲಕ ತಲುಪಿಸುವ ಕಾರ್ಯ ಆಗಬೇಕಾಗಿದೆ. ಕಾಲ ಬದಲಾದಂತೆ ನವ ಮಾಧ್ಯಮಗಳ ಮೂಲಕ ಬಸವೇಶ್ವರ ವಚನ ಮತ್ತು ತತ್ವಗಳನ್ನು ಪ್ರಸಾರ ಮಾಡಬೇಕಾಗಿದೆ. ಅದಕ್ಕಾಗಿ ವಚನ ಮತ್ತು ಹಸ್ತ ಪ್ರತಿಗಳನ್ನು ಡಿಜಿಟಲೀಕರಣ ಮಾಡುವದು ಸೂಕ್ತ ಎಂದರು.

ಸಾನಿಧ್ಯ ವಹಿಸಿದ್ದ ಗದಗ ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮಿಜಿ ಮಾತನಾಡಿ, ಕಾಯಕ ದಾಸೋಹದಂತಹ ಸಂಸ್ಕೃತಿಯನ್ನು ಬಸವಣ್ಣನವರು ನೀಡಿದ್ದಾರೆ. ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಆಗಿದೆ. ಭಾರತದ ಸಂವಿಧಾನದಲ್ಲಿ ಬಸವಾದಿ ಶರಣರ ಆಶಯಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.

Advertisement

ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಅಪಾರ ಜ್ಞಾನಿಯಾಗಿ ಬಸವಣ್ಣನವರು ಯಾವಾಗಲೂ ಪ್ರಸ್ತುತರಾಗಿದ್ದಾರೆ. ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆ. ಅದರಲ್ಲೂ ಬಸವ ತತ್ವ ಬೇರೆ ಅಲ್ಲ ಸಂವಿಧಾನ ಬೇರೆ ಅಲ್ಲ ಎಂದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ವಿಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸವೇಶ್ವರ ತತ್ವಗಳು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಬೇಕಾಗಿವೆ. ಬಸವೇಶ್ವರ ತತ್ವಗಳು ಬದುಕಿನ ತತ್ವಗಳಾಗಿಬೇಕು ಎಂದರು. ಬುದ್ದ ಗುರುನಾನಕ್, ಅಂಬೇಡ್ಕರ್ ಅವರು ಅನೇಕ ತತ್ವಗಳನ್ನು ನೀಡಿದ್ದು, ಅವುಗಳನ್ನು ಅನುಸರಿಸುವ ಅಗತ್ಯವಿದೆ ಎಂದರು.

ಕವಿವಿ ಬಸವೇಶ್ವರ ಪೀಠ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮಾದರಿ. ಹೀಗಾಗಿ ಬಸವ ಅಧ್ಯಯನ ಪೀಠಕ್ಕೆ ಸರಕಾರ ಅನುದಾನ ನೀಡಬೇಕು. ಎಲ್ಲಾ ದಾರ್ಶನಿಕರ ಅಧ್ಯಯನದ ಜತೆಗೆ ಬಸವೇಶ್ವರ ವಚನಗಳನ್ನು ಅಧ್ಯಯನ ಮಾಡಬೇಕು ಎಂದರು.

ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಪ್ರತಿಯೊಬ್ಬರೂ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಬಸವಣ್ಣನನ್ನು ಅಂತರಂಗದಲ್ಲಿ ಅಳವಡಿಸಿಕೊಳ್ಳುವದು ಅವಶ್ಯಕವಾಗಿದೆ ಎಂದರು.

ಹುಬ್ಬಳ್ಳಿಯ ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ ಮಾತನಾಡಿ, ಕಾಯಕವೇ ಕೈಲಾಸ ಎಂಬ ತತ್ವವನ್ನು ನಾನು ನಂಬಿದ್ದೇನೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರು ಬಸವೇಶ್ವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ವೀರಣ್ಣ ರಾಜೂರ ಮಾತನಾಡಿ, ರಾಜ್ಯದಲ್ಲೇ ಶ್ರೀ ಬಸವೇಶ್ವರ ಪೀಠ ಮೊದಲ ಪೀಠವಾಗಿದೆ. ಶರಣರಿಂದಲೇ ನಡೆಯುತ್ತಿರುವ ಏಕೈಕ ಪೀಠವಾಗಿದ್ದು, ಕವಿವಿ ಶ್ರೀಬಸವೇಶ್ವರ ಪೀಠವು ದಾಸೋಹದ ಪರಿಕಲ್ಪನೆಯ ಮೇಲೆ ನಡೆಯುತ್ತದೆ. ಬಸವ ಪೀಠವು ಬಸವತತ್ವ ಪ್ರಸಾರದಲ್ಲಿ ತೊಡಗಿದೆ. ಬಸವೇಶ್ವರ ಪೀಠವು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಇದು ಮಾನವ ಕುಲದ ಪೀಠವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ಬಸವಣ್ಣನವರನ್ನು ಭಾವನಾತ್ಮಕ ನೋಡದೆ ಅವರನ್ನು ಮಹಾನ್ ಸಮಾಜ ಸುಧಾರಕನನ್ನಾಗಿ, ತತ್ವಜ್ಞಾನಿಯಾಗಿ ನೋಡಬೇಕು ಮತ್ತು ಬಸವೇಶ್ವರ ಅವರನ್ನು ದೇವರನನ್ನಾಗಿ ಮಾಡಬೇಡಿ ಎಂದರು. ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ, ಮುರುಗೋಡದ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ,ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾ ಸ್ವಾಮಿಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ವೀರಣ್ಣ ರಾಜೂರ ಮತ್ತು ಡಾ.ಸಿ.ಎಂ.ಕುಂದಗೋಳ ಸಂಪಾದನೆಯ ಸುವರ್ಣ ದೀಪ್ತಿ ಸ್ಮರಣೆ ಸಂಚಿಕೆ ಸೇರಿದಂತೆ ಒಟ್ಟು 16 ವಿವಿಧ ಪುಸ್ತಕಗಳನ್ನು ಮತ್ತು ಬಸವೇಶ್ವರ ಪೀಠದ ಕುರಿತು ಮಾಡಿದ ಸಾಕ್ಷ್ಯ ಚಿತ್ರವನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ, ಕವಿವಿ ಮೌಲ್ಯಮಾಪನ ಕುಲಸಚಿವ ಡಾ.ನಿಜಲಿಂಗಪ್ಪ ಮಟ್ಟಿಹಾಳ್, ಕವಿವಿ ಹಣಕಾಸು ಅಧಿಕಾರಿ ಡಾ.ಸಿ.ಕೃಷ್ಣಮೂರ್ತಿ, ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ.ಕುಂದಗೋಳ, ಡಾ.ವೀರಣ್ಣ ರಾಜೂರ ಸೇರಿದಂತೆ ಬಸವ ಅನುಯಾಯಿಗಳು, ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಇದ್ದರು.

ಬಸವೇಶ್ವರ ಭಾವಚಿತ್ರ-ವಚನ ಗ್ರಂಥಗಳ ಮೆರವಣಿಗೆ: ಈ ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಕಚೇರಿಯಿಂದ ಕವಿವಿ ಸುವರ್ಣ ಮಹೋತ್ಸವ ಸಭಾಂಗಣವರಗೆ ಶ್ರೀಬಸವೇಶ್ವರ ಅವರ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠದ ಸ್ವಾಮೀಜಿಗಳು ಮೆರವಣಿಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ವಚನದ ಗ್ರಂಥಗಳನ್ನು ವಿದ್ಯಾರ್ಥಿನಿಯರು ತೆಲೆ ಮೇಲೆ ಹೊತ್ತಿದ್ದರು. ಈ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಶರಣರ ವಚನಗಳ ಪಟಗಳನ್ನು ಪ್ರದರ್ಶನ ಮಾಡಿದರೆ ಮೆರವಣಿಗೆ ಉದ್ದಕ್ಕೂ ವಚನಗಾಯನ ಮಾಡಿದ್ದು ವಿಶೇಷವಾಗಿತ್ತು.

ಕವಿವಿ ಬಸವ ಪೀಠಕ್ಕೆ ದೇಣಿಗೆ
ಹುಬ್ಬಳ್ಳಿಯ ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಂದ 5 ಲಕ್ಷ, ಬಿಜಕಲ್‌ನ ವಿರಕ್ತಮಠದ ಶಿವಲಿಂಗ ಸ್ವಾಮೀಜಿ 2 ಲಕ್ಷ, ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ 1 ಲಕ್ಷ, ಬೀದರ ಭಾಲ್ಕಿಯ ಹಿರೇಮಠ ಸಂಸ್ಥಾನ ಮಠದ ಬಸವಲಿಂಗ ಪಟ್ಟದ್ದೇವರು 1 ಲಕ್ಷ ರೂ.ಗಳನ್ನು ಕವಿವಿಯ ಬಸವೇಶ್ವರ ಪೀಠಕ್ಕೆ ದೇಣಿಗೆ ಘೋಷಿಸಿದರು. ಇದಲ್ಲದೇ ಬೆಳಗಾವಿಯ ಚಂದ್ರಶೇಖರ ಬೆಂಬಳಗಿ 1 ಲಕ್ಷ, ಡಾ. ಎಸ್.ಎಸ್ ನರೇಗಲ್ಲ ಅವರು 1 ಲಕ್ಷ , ಬೆಳಗಾವಿಯ ದಾನಮ್ಮ ದೇವಿ ಟ್ರಸ್ಟ್‌ನ ವತಿಯಿಂದ 51 ಸಾವಿರ,ಬೆಳಗಾವಿಯ ಬಾಬುರಾವ ಕಿತ್ತೂರ 11,110 ರೂ. ಹಾಗೂ ಕರ್ನಾಟಕ ಕಲಾ ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ಹಂಪಮ್ಮಮಾದರ ಅವರು 25 ಸಾವಿರ ರೂ.ಗಳ ದೇಣಿಗೆ ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next