Advertisement

ಓದು ಇಷ್ಟವಿಲ್ಲದ ಮನೆಬಿಟ್ಟಿದ್ದ ವಿದ್ಯಾರ್ಥಿ ಮನೆಗೆ ಮರಳಿಸಿದ ಬಜಪೆ ಪೊಲೀಸರು

10:08 AM Jan 02, 2020 | mahesh |

ಬಜಪೆ: ವಿದ್ಯಾಭ್ಯಾಸ ಮುಂದುವರಿಸಲು ಇಷ್ಟವಿಲ್ಲದೆ ಮನೆ ತ್ಯಜಿಸಿ ಸೋಮವಾರ ಮಧ್ಯರಾತ್ರಿ ವೇಳೆ ಅಲೆದಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಮನವೊಲಿಸಿ ಮನೆಯವರಿಗೆ ಒಪ್ಪಿಸಿದ ಬಜಪೆ ಪೊಲೀಸ್‌ ಠಾಣೆಯ ಪ್ರೊಬೆಷನರಿ ಎಸ್‌ಐ ಅನಿತಾ ನಿಕ್ಕಂ ಮತ್ತು ಪೊಲೀಸ್‌ ಸಿಬಂದಿ ದೇವು ಹೊಸಮನಿ ಅವರ ಕಾರ್ಯಕ್ಕೆ ವಿದ್ಯಾರ್ಥಿಯ ತಾಯಿಯಿಂದ ಕೃತಜ್ಞತೆ, ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಜತೆಗೆ, ಈ ಸುದ್ದಿ ಈಗ ವಾಟ್ಸ್‌ ಆ್ಯಪ್‌ನಲ್ಲಿ ವೈರಲ್‌ ಅಗಿದೆ.

Advertisement

ವಿದ್ಯಾರ್ಥಿ ತೋಡಾರು ಸಮೀಪದ ಹಂಡೇಲು ನಿವಾಸಿಯಾಗಿದ್ದು, ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿ. ಸೋಮವಾರ ತಡರಾತ್ರಿ ಸುಮಾರು 2.45ರ ವೇಳೆಗೆ ಈತ ಗುರುಪುರ ಕೈಕಂಬ ವಿಕಾಸ್‌ನಗರದಲ್ಲಿ ರಸ್ತೆಯಲ್ಲಿ ಅಲೆದಾಡುತ್ತಿದ್ದ. ಇದನ್ನು ಗಮನಿಸಿದ ಬೀಟ್‌ನಲ್ಲಿದ್ದ ಅನಿತಾ ನಿಕ್ಕಂ ಮತ್ತು ದೇವಪ್ಪ ಹೊಸಮನಿ ಅವನನ್ನು ವಿಚಾರಿಸಿದಾಗ ಉತ್ತರಿಸಲು ನಿರಾಕರಿಸಿದ. ವಿಳಾಸ ಕೇಳಿದಾಗ ನೀಡಲಿಲ್ಲ. ಸಂಶಯ ತಾಳಿದ ಪೊಲೀಸರು ಅತನ ಐಡಿ ಕಾರ್ಡ್‌, ಮನೆ ಬಗ್ಗೆ ಕೇಳಿದರು. ಸುಮಾರು ಅರ್ಧತಾಸು ಪೊಲೀಸರು ಬುದ್ಧಿಯ ಮಾತು ಹೇಳಿದ ಬಳಿಕ ಆತ ತನ್ನ ವಿಳಾಸ ನೀಡಿದ. ಓದು ಇಷ್ಟವಿಲ್ಲ, ಮನೆಯವರ ಒತ್ತಾಯಕ್ಕೆ ಕಾಲೇಜು ಸೇರಿದೆ. ಜೀವನ ಸಾಕಾಗಿದೆ. ಅದಕ್ಕಾಗಿ ಮನೆ ಬಿಟ್ಟು ಬಂದಿದ್ದು, ಮನೆಯವರಲ್ಲಿ ಹೇಳಬೇಡಿ ಎಂದು ವಿನಂತಿಸಿದ.

ವಿದ್ಯಾರ್ಥಿಯಲ್ಲಿ ಒಂದು ಬ್ಯಾಗ್‌ ಮಾತ್ರ ಇದ್ದು, ಹಣ ಇರಲಿಲ್ಲ. ನಡೆದುಕೊಂಡೇ ಕೈಕಂಬ ತನಕ ಬಂದಿದ್ದೇನೆ ಎಂದು ಪೊಲೀಸರ ಬಳಿಯಲ್ಲಿ ತಿಳಿಸಿದ್ದಾನೆ.

ಮನೆಯವರಿಗೆ ಗೊತ್ತಿಲ್ಲ!
ಪೊಲೀಸರು ವಿದ್ಯಾರ್ಥಿಯಿಂದ ವಿಳಾಸ ಮತ್ತು ಮೊಬೈಲ್‌ ನಂಬರ್‌ ಪಡೆದುಕೊಂಡು ಫೋನಾಯಿಸಿದಾಗ ಆತನ ತಾಯಿ ಮಗ ಮನೆಯಲ್ಲೇ ಇದ್ದಾನೆ ಎಂದು ಉತ್ತರಿಸಿದ್ದರು. ಪರಿಶೀಲಿಸಿ ನೋಡಿ ಎಂದು ಪೊಲೀಸರು ಹೇಳಿದ ಬಳಿಕವಷ್ಟೇ ಆಕೆಗೆ ಮಗ ಮನೆಯಲ್ಲಿ ಇಲ್ಲದಿರುವುದು ಅರಿವಿಗೆ ಬಂತು.

ಕೃತಜ್ಞತೆಯ ಕಣ್ಣೀರು, ಸಾರ್ವಜನಿಕರ ಶ್ಲಾಘನೆ
ಪೊಲೀಸರು ವಿದ್ಯಾರ್ಥಿಯನ್ನು ಆತನ ಮನೆಗೆ ತಲುಪಿಸಿದಾಗ ತಾಯಿ ಅಳುತ್ತಾ ಕೈ ಮುಗಿದು ನಿಮ್ಮಿಂದಾಗಿ ಮಗನೂ ನಾನೂ ಬದುಕಿದೆವು. ನಿಮಗೆ ಮತ್ತು ನಿಮ್ಮ ಇಲಾಖೆಗೆ ಚಿರಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಯ ತಂದೆ ಬೆಂಗಳೂರಿನಲ್ಲಿದ್ದು, ತಾಯಿ ಮಾತ್ರ ಹಂಡೇಲು ಬಾಡಿಗೆ ಮನೆಯಲ್ಲಿ ಇಬ್ಬರು ಪುತ್ರರೊಂದಿಗೆ ವಾಸವಿದ್ದಾರೆ. ಇವರು ಮೂಲತಃ ಶಿವಮೊಗ್ಗದವರಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ.

Advertisement

ಪೊಲೀಸರ ಕಾರ್ಯದ ಬಗ್ಗೆ ಜಾಲ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ, ಪ್ರಶಂಸೆ ವ್ಯಕ್ತವಾಗಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next