Advertisement

ಗದ್ದಿಗೌಡರ “ಬೌಂಡರಿ’ಗೆ ವೀಣಾ ಜಾತಿ “ಬೌನ್ಸರ್‌’

11:54 AM Apr 19, 2019 | Sriram |

ಬಾಗಲಕೋಟೆ: ಎರಡು ಜಿಲ್ಲೆಗಳ 8 ವಿಧಾನಸಭೆ ಕ್ಷೇತ್ರ ಒಳಗೊಂಡ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ಮಧ್ಯೆ ನೇರ ಪೈಪೋಟಿ ನಡೆಯುತ್ತಿದೆ.

Advertisement

15 ವರ್ಷಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು, ಬಿಜೆಪಿ ಮೂರು ಅವಧಿಗಳಿಂದ ತನ್ನ ಕೈವಶ ಮಾಡಿಕೊಂಡಿದೆ. ಆ ಮೂಲಕ ಸದ್ಯಕ್ಕೆ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿದೆ.

ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಿಜೆಪಿಯ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, 2004ರಿಂದ ಕ್ಷೇತ್ರದ ಸಂಸದರಾಗಿದ್ದರೂ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎಂಬ ವೈಫಲ್ಯವನ್ನೇ ಕಾಂಗ್ರೆಸ್‌ ತನ್ನಪ್ರಚಾರದ ಅಸ್ತ್ರವನ್ನಾಗಿಸಿಕೊಂಡಿದೆ. ಆದರೆ, ಗದ್ದಿಗೌಡರಿಗೆ ಸ್ವಪಕ್ಷವೂ ಸೇರಿ ವಿರೋಧ ಪಕ್ಷದಲ್ಲೂ ಅಂತ ರಂಗದ ರಾಜಕೀಯ ಗೆಳೆಯರಿದ್ದಾರೆ. ಈ ಅಂಶದೊಂದಿಗೆ ಮೋದಿ ಅಲೆಯಲ್ಲಿ ಮತ್ತೂಂದು ಬಾರಿ ಗೆಲುವ ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಜಿಪಂ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ,ಪ್ರಸ್ತುತ ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ, ಜಿಪಂ ಅಧ್ಯಕ್ಷೆಯಾಗಿ ಗ್ರಾಮ ವಾಸ್ತವ್ಯದ ಮೂಲಕ ಜಿಲ್ಲೆಯ ಬಹುತೇಕ ಗ್ರಾಮೀಣ ಜನರಿಗೆ ಪರಿಚಿತರಾಗಿದ್ದಾರೆ. ಹೀಗಾಗಿ ಗದ್ದಿಗೌಡರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಪಕ್ಷ ರಾಜಕಾರಣಕ್ಕಿಂತ ಮೋದಿ ಅಲೆ ಹಾಗೂ ಜಾತಿಯೇ ಕ್ಷೇತ್ರದಲ್ಲಿ ಚುನಾವಣೆ ಅಸ್ತ್ರವೂ ಆಗಿದೆ.

ಕ್ಷೇತ್ರ ವ್ಯಾಪ್ತಿ: ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ,ತೇರ ದಾಳ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನ ಸಭೆ ಕ್ಷೇತ್ರಗಳು, ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಒಟ್ಟು 8 ಕ್ಷೇತ್ರಗಳಲ್ಲಿ ಬಿಜೆಪಿ ಆರು ಹಾಗೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನು ಹೊಂದಿದೆ.

Advertisement

ಸಿದ್ದು-ಶಿವಾನಂದಗೆ ಪ್ರತಿಷ್ಠೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಈ ಕ್ಷೇತ್ರ, ರಾಜ್ಯ ಅಷ್ಟೇ ಅಲ್ಲ, ದೇಶದ ಗಮನವೂ ಸೆಳೆದಿದೆ. ಇದೇ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಸದ್ಯ ಸಿದ್ದರಾಮಯ್ಯ ಶಾಸಕರು.

ಮೇಲಾಗಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರ ಬರಲು ಅದೇ ವರ್ಗಕ್ಕೆ ಸೇರಿದ ವೀಣಾ ಕಾಶಪ್ಪನವರಿಗೆ ಟಿಕೆಟ್‌ ಕೊಡಿಸಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ಇಡೀ ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊಣೆಯೂ ವಹಿಸಿದ್ದಾರೆ.

ಕಾಂಗ್ರೆಸ್‌ ಇಡೀ ರಾಜ್ಯದ ಅಷ್ಟೂ ಕ್ಷೇತ್ರಗಳ ಪೈಕಿ ಮಹಿಳೆಗೆ ಅವಕಾಶ ಕೊಟ್ಟಿದ್ದು ಈ ಕ್ಷೇತ್ರದಲ್ಲಿ ಮಾತ್ರ.ಅದನ್ನೇ ಚುನಾವಣೆ ಪ್ರಚಾರದ ಅಸ್ತ್ರಗ ಳಲ್ಲಿ ಒಂದಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಗೆಲುವಿನ ಲೆಕ್ಕಾಚಾರ: ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, 8 ಕ್ಷೇತ್ರಗಳಲ್ಲಿ ಬಿಜೆಪಿ 6,09,299 ಮತ ಪಡೆದಿದ್ದರೆ, ಕಾಂಗ್ರೆಸ್‌ 5,19,008 ಮತ ಪಡೆದಿತ್ತು. ಜೆಡಿಎಸ್‌ ಅಭ್ಯರ್ಥಿಗಳು 73,272 ಮತ ಗಳಿಸಿದ್ದರು. ಈಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ಒಂದೇ ಅಭ್ಯರ್ಥಿ ಕಣಕ್ಕಿಳಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳು 6,12,033 ಆಗುತ್ತಿದ್ದು, ಬಿಜೆಪಿಗಿಂತ 2,734
ಮತಗಳು ಹೆಚ್ಚಾಗುತ್ತವೆ. ಈ ಹೆಚ್ಚಿನ ಮತಗಳ ಜತೆಗೆ ಬಿಜೆಪಿ ಪಾಲಾಗಿದ್ದ ಲಿಂಗಾಯತ ಮತಗಳು ಒಂದಷ್ಟು ಬಂದರೆ, ಕಾಂಗ್ರೆಸ್‌ ಗೆಲುವು ಸುಲಭ ಎಂಬುದು, ಪಕ್ಷದ ಕೆಲವರ ಲೆಕ್ಕಾಚಾರ. ಕಾಂಗ್ರೆಸ್‌ ಪಡೆದ ಮತಗಳೇ ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಬಹಳ ಕಡಿಮೆ ಎಂಬ ಮಾತೂ ಕೇಳಿ ಬರುತ್ತಿದೆ. ಇಡೀ ಕ್ಷೇತ್ರದಲ್ಲಿ 8,42,513 ಮಹಿಳಾ ಮತದಾರರಿದ್ದು,ಮಹಿಳಾ ಅಭ್ಯರ್ಥಿಯಾಗಿದ್ದರಿಂದ ಕನಿಷ್ಠ 3 ಲಕ್ಷ ಮಹಿಳೆಯರ ಮತ ಪಡೆಯಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್‌ ಮಾಡಿದೆ. ಅದಕ್ಕಾಗಿ ಮಹಿಳಾ ಸಂಘಟನೆಗಳು, ಆಶಾ ಕಾರ್ಯಕರ್ತೆಯರ ಸಂಘಟನೆಗಳ ಮೊರೆ ಹೋಗಲಾಗಿದೆ ಎನ್ನಲಾಗಿದೆ.

ನಿರ್ಣಾಯಕ ಅಂಶ
ಕ್ಷೇತ್ರದಲ್ಲಿ ಮೋದಿ ಅಲೆಯೂ ದೊಡ್ಡ ಮಟ್ಟದಲ್ಲಿದೆ. 2009ರ ಚುನಾವಣೆಯಲ್ಲಿ ಕೇವಲ 35,446 ಮತಗಳಿಂದ ಗೆದ್ದಿದ್ದ ಬಿಜೆಪಿಯ ಗದ್ದಿಗೌಡರ, 2014ರ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿ ಹೋದ ಮೇಲೆ ಈ ಅಂತರ 1,16,560 ಮತಗಳಿಗೆ ದಾಟಿತ್ತು. ಈ ಬಾರಿಯೂ ಗದ್ದಿಗೌಡರು ತಮ್ಮ ಕ್ರಿಯಾಶೀಲ ಕಾರ್ಯಕ್ಕಿಂತ ಮೋದಿ ಅಲೆ, ಬಿಜೆಪಿ ಶಾಸಕರ ಬಲದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಪ್ರಮುಖ ಪಾತ್ರ ವಹಿಸುವ ದಲಿತ, ರಡ್ಡಿ, ನೇಕಾರ,ಮುಸ್ಲಿಂ ಮತಗಳು ಪೂರ್ಣ ಪ್ರಮಾಣದಲ್ಲಿ ತಮಗೆ ಲಭಿಸಿದರೆ ಗದ್ದಿಗೌಡರ 4ನೇ ಬಾರಿಯ ಗೆಲುವಿನ ಓಟಕ್ಕೆ ಬ್ರೇಕ್‌ ಬೀಳಲಿದೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಇದು ಕ್ಷೇತ್ರದಲ್ಲಿ ಜಾತಿ ನಿರ್ಣಾಯಕ ಅಂಶವೂ ಆಗಿದೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next