Advertisement

Bengaluru: ತ್ರಿಬಲ್‌ ರೈಡಿಂಗ್‌ ವೇಳೆ ಹಿಂಬದಿ ಸವಾರ ಸಾವು

10:06 AM Sep 03, 2024 | Team Udayavani |

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಹೋಗುವಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಇಬ್ಬರು ಸವಾರರು ಗಾಯಗೊಂಡಿರುವ ಘಟನೆ ಸಿಟಿ ಮಾರ್ಕೆಟ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಜೆ.ಜೆ.ನಗರದ ನಿವಾಸಿ ಮೊಹಮ್ಮದ್‌ ನೌಹಿದುರ್‌ ರೆಹಮಾನ್‌(19) ಮೃತ ಸವಾರ. ಸವಾರ ಮೊಹಮ್ಮದ್‌ ಶೋಯೆಬ್‌ ಉಲ್ಲಾಖಾನ್‌ ಮತ್ತು ಹಿಂಬದಿ ಸವಾರ ಅಮೀರ್‌ ಫ‌ಸಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ರಾತ್ರಿ ಸುಮಾರು 8.30ಕ್ಕೆ ಬಿಜಿಎಸ್‌ ಮೇಲು ಸೇತುವೆಯ ಜಾಮೀಯ ಮಸೀದಿ ಮುಂಭಾಗ ದುರ್ಘ‌ಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಜೆ.ಜೆ.ನಗರದ ರಾಯಪುರ ನಿವಾಸಿಗಳಾದ ಮೂವರು ಯುವಕರು, ಆ.31ರಂದು ರಾತ್ರಿ ಕೆ.ಆರ್‌. ಮಾರ್ಕೆಟ್‌ ಕಡೆಯಿಂದ ಜೆ.ಜೆ ನಗರದ ಕಡೆಗೆ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದರು. ಮೊಹಮ್ಮದ್‌ ಶೋಯೆಬ್‌ ಉಲ್ಲಾಖಾನ್‌ ಬೈಕ್‌ ಚಲಾಯಿಸುತ್ತಿದ್ದ. ಮಾರ್ಗ ಮಧ್ಯೆ ಬಿಜಿಎಸ್‌ ಮೇಲು ಸೇತುವೆಯಲ್ಲಿ ಬರುವಾಗ, ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿಯಾದ ಪರಿಣಾಮ ಮೂವರು ಸವಾರರು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಧ್ಯೆ ಕುಳಿತ್ತಿದ್ದ ಮೊಹಮ್ಮದ್‌ ನೌಹಿದುರ್‌ ರೆಹಮಾನ್‌ಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತ ಸ್ರಾವವಾಗಿದ್ದು, ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ಕೂಡಲೇ ಸ್ಥಳೀಯರು ಮೂವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ನೌಹಿದುರ್‌ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಹೆಲ್ಮೆಟ್‌ ಧರಿಸದೆ ಅತಿ ವೇಗ ಚಾಲನೆ:

ತ್ರಿಬಲ್‌ ರೈಡಿಂಗ್‌ ವೇಳೆ ಬೈಕ್‌ ಚಲಾಯಿಸುತ್ತಿದ್ದ ಮೊಹಮ್ಮದ್‌ ಶೋಯೆಬ್‌ ಉಲ್ಲಾಖಾನ್‌ನ ಅತೀವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಘಟನೆ ವೇಳೆ ಮೂವರು ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೆ.ಆರ್‌. ಮಾರ್ಕೆಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next