Advertisement

ಕೈ ಹಿಡಿದ ಚಿಂಚನ್ಸೂರ; ಲಾಭ-ನಷ್ಟದ ಲೆಕ್ಕಾಚಾರ

12:06 AM Mar 24, 2023 | Team Udayavani |

ಕಲಬುರಗಿ: ಮಾಜಿ ಸಚಿವ, ಕೋಲಿ ಸಮಾಜದ ಮುಖಂಡ ಬಾಬುರಾವ ಚಿಂಚನಸೂರ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆ ರಾಜಕೀಯ ವಲಯದಲ್ಲಿ ಕೆಲ ದಿನಗಳಿಂದ ತೆರೆಮರೆಯಲ್ಲಿ ಚರ್ಚಿತ ವಾಗಿತ್ತಾದರೂ ಸಾರ್ವಜನಿಕವಾಗಿರಲಿಲ್ಲ. ಆದರೆ ದಿಢೀರ್‌ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರ್ಪಡೆ ಯಾಗಿರುವುದು ಆಶ್ಚರ್ಯ ತಂದಿದ್ದಲ್ಲದೇ ವ್ಯಾಪಕ ಚರ್ಚೆಗೀಡು ಮಾಡಿದೆ.

Advertisement

ಆರು ತಿಂಗಳ ಹಿಂದೆಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗುವುದನ್ನೇ ಸೂಕ್ಷ್ಮವಾಗಿ ಅರಿತೇ ಬಿಜೆಪಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಿರುವುದು ಎಲ್ಲರಿಗೂ ಗೊತ್ತಿದ್ದ ವಿಷಯ. ಎಂಎಲ್‌ಸಿ ಆದ ನಂತರ ಪಕ್ಷದಲ್ಲೇ ಉಳಿಯುತ್ತಾ ರೆಂದು ಬಿಜೆಪಿ ನಾಯಕರು ಬಲವಾಗಿ ನಂಬಿದ್ದರು. ಹೀಗಾಗಿ ಚಿಂಚನಸೂರ ಹಾದಿ ಕಡೆ ಲಕ್ಷ್ಯ ವಹಿಸ ಲಿಲ್ಲ. ಆದರೆ ಚಿಂಚನಸೂರು ಅವರೊಂದಿಗೆ ಕಾಂಗ್ರೆಸ್‌ನವರು ನಡೆಸಿದ ಮಾತುಕತೆ ಫ‌ಲಪ್ರದ ವಾಗಿ ಈಗ ಮರಳಿ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಈಗ ರಾಜಕೀಯ ಲಾಭ-ನಷ್ಟಗಳ ಕುರಿತಾಗಿ ಜೋರಾಗಿ ಚರ್ಚೆ ನಡೆದಿದೆ.

ದಿ. ವಿಠ್ಠಲ ಹೇರೂರ ನಂತರ ಸಮಾಜದ ಪ್ರಶ್ನಾತೀತ ನಾಯಕರಾಗಿ ಚಿಂಚನಸೂರ ಹೊರ ಹೊಮ್ಮಬೇಕಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ ಸಮಾಜದ ನಾಯಕರೆಂದೇ ಬಾಬುರಾವ ಚಿಂಚನಸೂರ ಹೆಸರು ಮಾಡಿದ್ದರೂ ಮೊದಲಿನ ಹಾಗೆ ಈಗ ಹವಾ ಇಲ್ಲ ಎಂದು ಹೇಳುತ್ತಿರುವುದು ಅದರಲ್ಲೂ ಈಚೆಗಿನ ನಡೆ-ನುಡಿ ಆತ್ಮಾವಲೋಕನಕ್ಕೆ ದಾರಿ ಮಾಡಿ ಕೊಟ್ಟಿದೆ.

ಚಿಂಚನ್ಸೂರ ಮತ ಸೆಳೆಯುವ ನಾಯಕರೇ?: 2018ರ ವಿಧಾನಸಭೆ ಚುನಾವಣೆಯಲ್ಲಿ ಗುರುಮಿ ಠಕಲ್‌ನಲ್ಲಿ ಬಾಬುರಾವ ಚಿಂಚನಸೂರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತ ನಂತರ 2019ರ ಲೋಕಸಭೆ ಚುನಾವಣಾ ವೇಳೆ ಯಲ್ಲಿ ಬಿಜೆಪಿಗೆ ಸೇರಿದ್ದಾರೆ. ಲೋಕಸಭೆ ಚುನಾ ವಣೆಯಲ್ಲಂತೂ ಮೋದಿ ಗಾಳಿಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿವೆ. ಅದು ಬಾಬುರಾವ ಚಿಂಚನಸೂರ ಅಂತ ವರಿಂದಲ್ಲ ಎಂಬುದು ಮೇಲ್ನೋಟಕ್ಕೆ ಕಾಣಬಹು ದಾಗಿದೆ. 2018ರ ಚುನಾವಣೆಯಲ್ಲಿ ಚಿಂಚನ ಸೂರು ಕೋಲಿ ಸಮಾಜದ ನಾಯಕರಾಗಿ ಕಾಂಗ್ರೆ ಸ್‌ಗೆ ಹೆಚ್ಚಿನ ಮತಗಳ ಕ್ರೋಡೀಕರಣ ಗೊಳಿಸುವಲ್ಲಿ ಅಷ್ಟಾಗಿ ಸಫ‌ಲವಾಗಿಲ್ಲ ಎಂಬುದು ವಿಧಾನಸಭಾ ಚುನಾವಣೆ ಫ‌ಲಿತಾಂಶದಿಂದ ಕಾಣ ಬಹುದಾಗಿದೆ. ಈಗಲೂ ಅಷ್ಟೇ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖವಾಗಿ ಮಾ.23ರಂದು ನಡೆದ ಕಲಬುರಗಿ ಮಹಾಪೌರರ ಚುನಾವಣೆಯಲ್ಲಿ ಬಾಬುರಾವ ಚಿಂಚನಸೂರು ಮತದಾರರ ಪಟ್ಟಿಯ ಲ್ಲಿತ್ತು. ಆದರೆ ರಾಜೀನಾಮೆ ನೀಡಿದ್ದರಿಂದ ಮತ ತೆಗೆದು ಹಾಕಲಾಯಿತು. ಒಂದು ಮತ ಮೈನಸ್‌ ಆಗಿದ್ದರೂ ಬಿಜೆಪಿಗೆ ಲಾಸ್‌ ಆಗಲಿಲ್ಲ. ಇದೇ ತೆರನಾಗಿ ಮುಂದಿನ ವಿಧಾನಸಭೆ ಚುನಾವಣೆ ಯಲ್ಲೂ ಆಗೋದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

Advertisement

ಪ್ರಿಯಾಂಕ್‌ಗೆ ಸಹಾಯಕವಾದೀತೆ?: ಕಲ್ಯಾಣ ಕರ್ನಾ ಟಕದ ಅದರಲ್ಲೂ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌, ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ಹಾಗೂ ಅಫ‌ಜಲಪುರ ಸೇರಿ ಇತರೆಡೆ ಕೋಲಿ ಸಮಾಜದವರು ಫ‌ಲಿತಾಂಶ ನಿರ್ಧರಿಸಬಲ್ಲ ಜನ ಸಂಖ್ಯೆಯಿದೆ. ಅದನ್ನೆಲ್ಲ ಬಾಬು ರಾವ ಚಿಂಚನ ಸೂರು ಕ್ರೋಡೀಕ ರಿಸುತ್ತಾರೆಂದು ಕಾಂಗ್ರೆಸ್‌ ಬಲ ವಾಗಿ ನಂಬಿದೆಯಲ್ಲದೇ, ಮೂರು ಸಲ ಚಿತ್ತಾಪುರದಲ್ಲಿ ಗೆದ್ದಿರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಅವರಿಗೆ ಚುನಾವಣೆ ಯಲ್ಲಿ ಸಹಾಯಕವಾಗುತ್ತದೆಂದು ಹೆಚ್ಚಿನ ನಿರೀಕ್ಷೆ ಹೊಂದಿರುವುದು ಒಂದೆಡೆ ಯಾದರೆ, ಈಗ ಮೊದಲಿನ ಹಾಗೆ ಸಮಾಜದೊಳಗೆ ವರ್ಚಸ್ಸು ಹೊಂದಿಲ್ಲ. ಪಕ್ಷ ಎಲ್ಲ ಕೊಟ್ಟರೂ, ಪ್ರಮುಖವಾಗಿ ಕೋಲಿ ಸಮಾಜದ ತಳವಾರ ಸಮುದಾಯ ಎಸ್ಟಿಗೆ ಸೇರಿಸಲಾ ಗಿದ್ದರೂ ಸಮಾಜವನ್ನು ಸ್ವಾರ್ಥಕ್ಕಾಗಿ ಉಪಯೋಗಿ ಸಿಕೊಳ್ಳುತ್ತಿದ್ದಾರೆಂಬ ಬಿಜೆಪಿ ಹೇಳಿಕೆ ಜತೆಗೆ ಇದೇ ತೆರನಾದ ವಾಸ್ತವಿಕತೆಯನ್ನು ವಿವಿಧ ಸ್ಥರಗಳಲ್ಲಿ ಮಂಥನ ಮಾಡಲಾಗುತ್ತಿದೆ.

ಚಿತ್ತಾಪುರ ಸೇರಿದಂತೆ ಇತರೆಡೆ ಕೋಲಿ ಸಮಾಜದ ಕೆಲವೊಂದಿಷ್ಟು ಮತಗಳನ್ನು ಸೆಳೆಯುವ ಕೌಶಲ್ಯ ಬಾಬುರಾವ ಚಿಂಚನಸೂರ ಹೊಂದಿದ್ದಾರೆ. ಆದರೆ ಮೊದಲಿನ ವರ್ಚಸ್ಸು ಈಗ ಹೊಂದಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಗುರುಮಿಠಕಲ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಸಮಾಜದ ಮತಗಳನ್ನು ಮೊದಲಿನಷ್ಟು ಈಗ ಪಡೆಯುವುದಿಲ್ಲ ಎನ್ನಲಾಗುತ್ತಿದೆ.

ಮಾತಿಗೆ ಬದ್ಧರಲ್ಲ
ಬಾಬುರಾವ ಚಿಂಚನಸೂರು ಪಕ್ಷಕ್ಕೆ ಬಂದಿರು ವುದರಿಂದ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ ಹೇಳುತ್ತಿದ್ದರೆ ಬಿಜೆಪಿಯವರು ಪಕ್ಷಕ್ಕೆ ನಷ್ಟವಾಗುವು ದಿಲ್ಲ. ಕಳೆದ ಸಲ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಲ್ಲೇ ಇರಲಿಲ್ಲ. ಗುರು ಮಿಠಕಲ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ ನಂತರ ಬಿಜೆಪಿಗೆ ಬಂದಿದ್ದಾರೆ. 2018ರಲ್ಲೇ ಬಾಬುರಾವ ಚಿಂಚನಸೂರ ಅವರಿಂದ ಕಾಂಗ್ರೆಸ್‌ಗೆ ಆಗದ ಲಾಭ ಈಗ ಆಗುತ್ತದೆಯೇ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಅಪ್ಪನನ್ನು ಸೋಲಿ ಸಿದ ಹಾಗೆ ಮಗ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ತೊಡೆ ತಟ್ಟಿದ್ದ ಹಾಗೂ ಬಿಜೆಪಿಗೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ ಎಂಬ ಮಾತುಗಳ ಟ್ರೋಲ್‌ ಬಿಜೆಪಿ ವ್ಯಾಪಕಗೊಳಿಸಿ ಜನ ಮಾನಸದಲ್ಲಿ ಚಿಂಚನಸೂರ ಮಾತಿಗೆ ಬದ್ಧನಲ್ಲ ಎಂಬುದನ್ನು ಮನೆ ಮಾತಾಗಿಸಲಾಗುತ್ತಿದೆ.

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next