ಮೈಸೂರು: “ಪ್ರಧಾನಿಯನ್ನು ಪ್ರಶ್ನೆ ಮಾಡೋಕೆ ಸಿದ್ದರಾಮಯ್ಯಗೆ ಏನು ಯೋಗ್ಯತೆ ಇದೆ. ಪ್ರಧಾನಿ ಬಗ್ಗೆ ಮಾತನಾಡೋ ನೈತಿಕತೆ ಸಿಎಂಗಿದೆಯಾ?’ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಏಕವಚನದಲ್ಲಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನರೇಂದ್ರ ಮೋದಿಗೆ ಟ್ವೀಟರ್ನಲ್ಲಿ ಸಿದ್ದರಾಮಯ್ಯ ಪಂಚ ಪ್ರಶ್ನೆ ಕುರಿತು
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಬಿಎಸ್ವೈ, ಸಿದ್ದರಾಮಯ್ಯ ಅವರದ್ದೇ ಒಡೆದ ಮನೆಯಾಗಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಒಟ್ಟಾಗಿ ಪ್ರಚಾರ ಮಾಡಲಿ ನೋಡೋಣ. ಒಬ್ಬಂಟಿಗನಾಗಿ ಅಲೆದಾಡೋ ಸಿದ್ದರಾಮಯ್ಯಗೆ ಪ್ರಧಾನಿ ಬಗ್ಗೆ ಮಾತನಾಡೋ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಬರಲಿ, ಇನ್ನಷ್ಟುಮಾತನಾಡಲಿ. ನಮಗೆ ಅವರಿಂದ ಅನುಕೂಲವಾಗಲಿದೆ. ಅವರು ಬಂದು ಎಲ್ಲೇಪ್ರಚಾರ ಮಾಡಿದರೂ, ಗೆಲ್ಲೋಕ್ಕೆ ಆಗಲ್ಲ. ಕ್ಷೇತ್ರದಲ್ಲಿಯೇ ನೆಲೆಸಿ ಪ್ರಚಾರ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡಿರುವುದರಿಂದ ಸಹಜವಾಗಿ ವಿಜಯೇಂದ್ರ ಮೇಲೆ ಅಭಿಮಾನವಿದೆ. ಅತಿಯಾದ ಅಭಿಮಾನ ಅಷ್ಟೊಂದು ಒಳ್ಳೆಯದಲ್ಲ. ನನಗೆ ಟಿಕೆಟ್ ಕೊಡುವ ವಿಚಾರಕ್ಕಿಂತಲೂ ಬಿಜೆಪಿ ಗೆಲ್ಲುವುದು, ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಮುಖ್ಯ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ನೋಟಾ ಅಭಿಯಾನ ಮಾಡುವುದು ಸರಿಯಲ್ಲ. ಇದನ್ನು ನಮ್ಮ ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ವಿಡಿಯೋ ವಿಚಾರ ದುರ್ಬಳಕೆ: ವರುಣಾದ ಬಿಜೆಪಿ ಅಭ್ಯರ್ಥಿಗೆ ಧಮಕಿ ಹಾಕಿರುವುದು, ಅಸಭ್ಯ ಮಾತುಗಳನ್ನಾಡಿರುವ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಿದ್ದೇನೆ. ವಿಡಿಯೋ ಪರೀಕ್ಷಿಸಿದರೆ ಅದು ಬೇರೆ ಕೇತ್ರದಿಂದ ಬಂದಿರುವವರು ಮಾಡಿದ ವಿಡಿಯೋ ತರಹ ಕಣಿಸುತ್ತಿದೆ. ಹಾಗಾಗಿ, ಕಾರ್ಯಕರ್ತರು ಮೋಸ ಹೋಗಬಾರದು. ಕೆಲವರು ಈ ವಿಡಿಯೋ ವಿಚಾರವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾರ್ಯಕರ್ತರು ಎಚ್ಚರದಿಂದಿರಬೇಕು ಎಂದು ಹೇಳಿದರು.