Advertisement

Govt ಆದಾಯ ವೃದ್ಧಿಗೆ “ಬಿ ಖಾತಾ’ ತೆರಿಗೆ ಸೂತ್ರ!

01:00 AM Nov 29, 2023 | Team Udayavani |

ಮಂಗಳೂರು: ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳಿಂದಲೂ ತೆರಿಗೆ ವಸೂಲಿ ಮಾಡುವ ರೀತಿಯಲ್ಲಿಯೇ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಅನಧಿಕೃತ ಆಸ್ತಿಗಳನ್ನು ಕೂಡ ತೆರಿಗೆ ವ್ಯವಸ್ಥೆಯೊಳಗೆ ತರುವುದಕ್ಕಾಗಿ “ಬಿ ಖಾತಾ’ ಪರಿಚಯಿಸುವ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಚಿಂತನೆ ನಡೆಸಿದೆ.

Advertisement

ಭೂ ಪರಿವರ್ತನೆಯಾದ ಆಸ್ತಿಗಳಿಗೆ “ಎ’ ಖಾತಾ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಭೂ ಪರಿವರ್ತನೆಯಾಗದ ಸ್ವತ್ತುಗಳಿಗೆ “ಬಿ’ ಖಾತಾ ನೀಡಲಾಗಿದೆ. ಇದೇ ರೀತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ “ಬಿ’ ಖಾತಾ ನೀಡಿದರೆ ಹೆಚ್ಚುವರಿ ಆದಾಯ ಸಂಗ್ರಹಿಸಬಹುದು ಎಂಬುದು ಸರಕಾರದ ಆಲೋಚನೆ.

ಆಸ್ತಿ-ಕಟ್ಟಡ ಇದ್ದು ದಾಖಲೆಗಳು ಸಮರ್ಪಕವಾಗಿಲ್ಲದೆ ಅಥವಾ ಕೆಲವು ನಿಯಮಾವಳಿ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಹಲವು ಆಸ್ತಿಗಳಿಗೆ ಡೋರ್‌ ನಂಬರ್‌ ಸಹಿತ ಖಾತಾ ದೊರಕಿರುವುದಿಲ್ಲ. ಹೀಗಾಗಿ ಅವರು ತೆರಿಗೆ ಪಾವತಿ ವ್ಯವಸ್ಥೆಗೆ ಒಳಪಟ್ಟಿರುವುದಿಲ್ಲ. ಆದರೆ ಅಂತಹ ಆಸ್ತಿಗಳ ಮಾಲಕರು ಸಂಬಂಧಪಟ್ಟ ಸ್ಥಳೀಯಾಡಳಿತದಿಂದ ಕುಡಿಯುವ ನೀರು ಸಹಿತ ವಿವಿಧ ಸೌಲಭ್ಯಗಳನ್ನು ಪಡೆದು ಕೊಂಡಿರುತ್ತಾರೆ. ಹೀಗಾಗಿ ಸ್ಥಳೀಯಾಡಳಿತದ ಅನು ಕೂಲ ಪಡೆಯುವ ಇಂತಹ ಆಸ್ತಿಗಳಿಂದ ತೆರಿಗೆ ವಸೂಲಿ ಮಾಡಲು “ಬಿ’ ಖಾತಾ ಪರಿ ಚಯಿಸಲು ನಗರಾಭಿವೃದ್ಧಿ ಇಲಾಖೆ ಮುಂದಡಿ ಇಟ್ಟಿದೆ.

ಏನಿದು “ಬಿ’ ಖಾತಾ?
1976ರ ಕೆಎಂಸಿ ಕಾಯಿದೆ ಪ್ರಕಾರ ಪಾಲಿಕೆಯು ತನ್ನ ವ್ಯಾಪ್ತಿಯ ಕಟ್ಟಡಗಳು, ಖಾಲಿ ಜಾಗಗಳಿಗೆ ಆಸ್ತಿ ತೆರಿಗೆ ವಿಧಿಸಲು ಅವಕಾಶವಿದೆ. ಪಾಲಿಕೆ ಆಯುಕ್ತರು ಅಥವಾ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿಯು ತೆರಿಗೆ ವಿವರವುಳ್ಳ ಪ್ರಮಾಣ ಪತ್ರವನ್ನು ಆಸ್ತಿ ಮಾಲಕರಿಗೆ ನೀಡಬಹುದು. ಯಾವುದೇ ಉಲ್ಲಂಘನೆಗಳಿಲ್ಲದ ಆಸ್ತಿ ಮಾಲಕರಿಂದ ಸಂಗ್ರಹಿಸುವ ತೆರಿಗೆ ವಿವರಗಳನ್ನು ನಮೂನೆ “ಎ’ಯಲ್ಲಿ ನಿರ್ವಹಿಸಲಾಗುತ್ತಿದೆ. ಅದನ್ನು ಆಡುಭಾಷೆಯಲ್ಲಿ “ಎ ಖಾತಾ’ ಎನ್ನಲಾಗುತ್ತಿದೆ. ಅನಧಿಕೃತ ಬಡಾವಣೆಯಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನ, ಕಟ್ಟಡ ಬೈಲಾ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳು, ಒಸಿ, ಸಿಸಿ ಪಡೆಯದ ಕಟ್ಟಡಗಳಿಂದಲೂ ತೆರಿಗೆ ವಸೂಲಿ ಮಾಡಲು ಈ ನಿಯಮದಲ್ಲಿ ಅವಕಾಶ ಇದೆ. ಇಂತಹ ಆಸ್ತಿಗಳಿಂದ ತೆರಿಗೆ ಸಂಗ್ರಹಿಸುವುದಕ್ಕೆ ಪ್ರತ್ಯೇಕ ನೋಂದಣಿಯನ್ನು ನಿರ್ವಹಿಸಲಾಗುತ್ತಿದೆ. ಅದನ್ನೇ “ಬಿ ಖಾತಾ’ ಎನ್ನುತ್ತಾರೆ.

ಆರಂಭವಾದದ್ದು ಹೇಗೆ?
ಬೆಂಗಳೂರಿನಲ್ಲಿ 2007ಕ್ಕಿಂತ ಮೊದಲು “ಬಿ’ ಖಾತಾ ವ್ಯವಸ್ಥೆ ಇರಲಿಲ್ಲ. ಅಲ್ಲಿಯವರೆಗೆ ಸುಧಾರಣ ಶುಲ್ಕ ಕಟ್ಟಿಸಿಕೊಂಡು ಎಲ್ಲ ಆಸ್ತಿಗಳಿಗೂ “ಎ’ ಖಾತಾ ನೀಡಲಾಗುತ್ತಿತ್ತು. 2006ರಲ್ಲಿ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಭೂಪರಿವರ್ತನೆಯಾಗದ ನಿವೇಶನಗಳಿಗೆ “ಎ’ ಖಾತಾ ನೀಡಬಾರದೆಂದು ಅಧ್ಯಾದೇಶ ಹೊರಡಿಸಲಾಗಿತ್ತು. ಅನಂತರ ಕೇವಲ ತೆರಿಗೆ ಸಂಗ್ರಹಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆಯೇ ನಿರ್ಮಿಸಿರುವ ಬಡಾವಣೆಗಳಲ್ಲಿರುವ ನಿವೇಶನಗಳು, ಭೂಪರಿವರ್ತನೆ ಮಾಡದೆ ಕಟ್ಟಡ ನಿರ್ಮಿಸಿರುವ ನಿವೇಶನಗಳನ್ನು “ಬಿ’ ವಹಿಯಲ್ಲಿ ದಾಖಲಿಸುವ ಪದ್ಧತಿ ಆರಂಭವಾಯಿತು.

Advertisement

ಪರಿಶೀಲನೆಗೆ “ಸದನ ಸಮಿತಿ’
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ “ಬಿ’ ಖಾತಾ ವ್ಯವಸ್ಥೆಯನ್ನು ರಾಜ್ಯದ ಇತರಡೆಗೆ ವಿಸ್ತರಿಸಲು ಇರುವ ಅವಕಾಶಗಳ ಬಗ್ಗೆ ಪರಾ ಮರ್ಶೆಗೆ ಈಗಾಗಲೇ ಸದನ ಸಮಿತಿ ಯನ್ನು ಸರಕಾರ ರಚಿಸಿದೆ. ಸಚಿವರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸದನ ಸಮಿತಿಯಲ್ಲಿ ಸಚಿವ ಬೈರತಿ ಸುರೇಶ್‌, ಎಚ್‌.ಕೆ. ಪಾಟೀಲ್‌ ಇದ್ದಾರೆ. ಈಗಾಗಲೇ ಸಮಿತಿಯಿಂದ ಪರಾ ಮರ್ಶೆ ನಡೆಯುತ್ತಿದ್ದು, ಶೀಘ್ರದಲ್ಲಿ ವರದಿ ಸಿದ್ಧ ಗೊಳ್ಳಲಿದೆ. ಇದರ ಆಧಾರದಲ್ಲಿ ಬಿ ಖಾತಾ ವನ್ನು ರಾಜ್ಯಾದ್ಯಂತ ಪರಿಚಯಿಸಲು ನಿರ್ಧರಿಸಲಾಗಿದೆ.

ಸ್ಥಳೀಯ ಸಂಸ್ಥೆಯಿಂದ ಸೌಲಭ್ಯ ಪಡೆಯುವ ಆಸ್ತಿಗಳು ಹಲವು ಕಾರಣಗಳಿಂದ ಎ ಖಾತಾ ವ್ಯವಸ್ಥೆಯೊಳಗೆ ಬಾರದೆ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಅವುಗಳನ್ನು ತೆರಿಗೆ ವ್ಯವಸ್ಥೆಯೊಳಗೆ ತರಬೇಕಾಗುತ್ತದೆ. ಇದಕ್ಕಾಗಿ ಬಿಬಿಎಂಪಿಯಲ್ಲಿ ಇರುವಂತೆ ಎಲ್ಲ ಸ್ಥಳೀಯ ಆಡಳಿತಗಳ ಮಟ್ಟದಲ್ಲಿಯೂ ಬಿ ಖಾತಾ ಪರಿಚಯಿಸಲು ಉದ್ದೇ ಶಿಸಲಾಗಿದೆ. ಸದನ ಸಮಿತಿಯ ತೀರ್ಮಾನ ಪರಿಶೀಲಿಸಿ 2 ತಿಂಗಳೊಳಗೆ ಇದರ ಜಾರಿಗೆ ಕ್ರಮ ಕೈಗೊಳ್ಳಲಾಗುವುದು.
– ಬೈರತಿ ಸುರೇಶ್‌,
ನಗರಾಭಿವೃದ್ಧಿ ಸಚಿವರು

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next