Advertisement

ಶಾಸಕರ ಕಿಡ್ನ್ಯಾಪ್‌ ಮಾಡಿದ್ದಕ್ಕೆ ಶಾಗೆ ಎಚ್‌1ಎನ್‌1!

12:30 AM Jan 18, 2019 | Team Udayavani |

ಹೊಸದಿಲ್ಲಿ/ಬೆಂಗಳೂರು: ಕಾಂಗ್ರೆಸ್‌ ಶಾಸಕರನ್ನು ಅಪಹರಣ ಮಾಡಿರುವುದರಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಎಚ್‌1ಎನ್‌1 ಜ್ವರ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದು, ಇದು ರಾಜಕೀಯ ವಾಗ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ಆಪರೇಷನ್‌ ಕಮಲ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಸಂವಿಧಾನಬದ್ಧವಾಗಿರುವ ಸರಕಾರ ವನ್ನು ಉರುಳಿಸಲು ಬಿಜೆಪಿ ಅಕ್ರಮ ಹಣ ಬಳಕೆ ಮಾಡುತ್ತಿದೆ. ಕಾಂಗ್ರೆಸ್‌ ಶಾಸಕರನ್ನು ಅಪಹರಣ ಮಾಡಿದ್ದರಿಂದಲೇ ಅಮಿತ್‌ ಶಾ ಅವರಿಗೆ ಎಚ್‌1ಎನ್‌1 ಜ್ವರ ಬಂದಿದೆ ಎಂದು ಆರೋಪಿಸಿದರು. 

Advertisement

ರಫೇಲ್‌ ಯುದ್ಧ ವಿಮಾನ ಖರೀದಿ ಡೀಲ್‌ನಲ್ಲಿ ಬಿಜೆಪಿಯವರಿಗೆ 30 ಸಾವಿರ ಕೋಟಿ ರೂಪಾಯಿ ಸಿಕ್ಕಿದೆ. ಅದೇ ಅಹಂಕಾರದಲ್ಲಿ ಬಿಜೆಪಿ ಮೈತ್ರಿ ಸರಕಾರವನ್ನು ಉರುಳಿಸಲು ಹೊರಟಿತ್ತು. ಇನ್ನೂ ಲಕ್ಷ ಕೋಟಿ ರೂ. ನೀಡಿದರೂ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಶಾಸಕರನ್ನು ಅಮಿತ್‌ ಶಾ ಅಪಹರಣ ಮಾಡಿಸಿರುವುದರಿಂದ ಶಾಸಕರ ಕುಟುಂಬಸ್ಥರು ಹೆಬಿಯಸ್‌ ಕಾರ್ಪಸ್‌ ಅರ್ಜಿ ಹಾಕಬೇಕು ಎಂದು ಮನವಿ ಮಾಡಿದರು. 

ಬಿಜೆಪಿ ಆಕ್ರೋಶ
ಹರಿಪ್ರಸಾದ್‌ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಶಾ ಅವರಿಗೆ ಬಂದಿರುವಂಥ ಜ್ವರವನ್ನಾದರೂ ಶಮನ ಮಾಡಬಹುದು. ಆದರೆ ಕಾಂಗ್ರೆಸ್‌ ನೇತಾರರ ಮಾನಸಿಕ ಅಸ್ವಸ್ಥತೆಯನ್ನು ಶಮನ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ. ಅವಹೇಳನಕಾರಿ ಹೇಳಿಕೆ ನೀಡಿರುವ ಹರಿಪ್ರಸಾದ್‌ ಅವರನ್ನು ಕೂಡಲೇ ಕಾಂಗ್ರೆಸ್‌ ವಜಾ ಮಾಡಬೇಕು. ಅವರ ವಿಷಕಾರಿ ಮನಃಸ್ಥಿತಿಗೆ ಪಕ್ಷದ ನಾಯಕತ್ವದ ಬೆಂಬಲವೂ ಇದೆ ಎಂಬಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ. ಬಿಜೆಪಿಯ ಇತರ ನಾಯಕರು ಕೂಡ ಹರಿಪ್ರಸಾದ್‌ ಹೇಳಿಕೆಯನ್ನು ಖಂಡಿಸಿದ್ದಾರೆ.

ಶಾ ಚೇತರಿಕೆ
ಎಚ್‌1ಎನ್‌1 ನಿಂದ ಬಳಲುತ್ತಿರುವ ಶಾ ಚೇತರಿಸುತ್ತಿದ್ದು, ಶೀಘ್ರ ಡಿಸಾcರ್ಜ್‌ ಆಗಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next