ಬಂಟ್ವಾಳ: ಬಿ.ಸಿ. ರೋಡಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಕಳವಾಗಿದ್ದ ಬೈಕ್ ರಾಮನಗರದಲ್ಲಿ ಪತ್ತೆಯಾಗಿದ್ದು, ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಮನಗರದ ಬಿಡದಿ ತಾ|ನ ಬಾಣಂದೂರು ನಿವಾಸಿ ರಾಜು ಕೆ. ಬಂಧಿತ ಆರೋಪಿ. ಜೂ. 26ರಂದು ಬಿ.ಸಿ. ರೋಡು ನಿವಾಸಿ ಪವನ್ ಅವರು ಬೈಕನ್ನು ನಿಲ್ಲಿಸಿ ಕೀಯನ್ನು ಅದರಲ್ಲೇ ಬಿಟ್ಟು ಹೊಟೇಲೊಂದಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಹೊಟೇಲ್ನಿಂದ ಹೊರಬರುತ್ತಿದ್ದ ಆರೋಪಿ ರಾಜು, ಬೈಕ್ ನಿಲ್ಲಿಸುವುದನ್ನು ಗಮನಿಸಿ ಬೈಕನ್ನು ಚಲಾಯಿಸಿಕೊಂಡು ನೇರವಾಗಿ ಊರಿಗೆ ತೆರಳಿದ್ದಾನೆ.
ಲಾರಿ ಚಾಲಕನಾಗಿದ್ದ ರಾಜು ಬೈಕ್ ಕದ್ದಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಅದರ ಆಧಾರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಆನಂತಪದ್ಮನಾಭ ಅವರ ತಂಡ ರಾಮನಗರಕ್ಕೆ ತೆರಳಿ ಬೈಕ್ ಸಹಿತ ಆರೋಪಿಯನ್ನು ಕರೆದುಕೊಂಡು ಬಂದು ಬೈಕನ್ನು ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ.
ಪೊಲೀಸ್ ಸಿಬಂದಿ ಗಣೇಶ್, ಬಸವರಾಜ್ ಹಾಗೂ ಸುರೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.