ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗದಾಗ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳಿಂದ ನನ್ನ ಬಗ್ಗೆ ರಾಜಕೀಯ ಕೇಂದ್ರಿತ ಸುದ್ಧಿಗಳು ಹರಿದಾಡಿವೆ. ಎಲ್ಲರ ನಿರೀಕ್ಷೆಯಂತೆ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. ನಾನು ನನ್ನ ಸ್ನೇಹಿತರ ಜೊತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದರು.
ವಿಧಾನಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್ ಸೇರಬೇಕಿತ್ತು. ಆಗ ಜೆಡಿಎಸ್ ನಿಂದ ನಾನು ಸ್ಪರ್ಧೆಗಿಳಿಯಬೇಕಾಯ್ತು. ಮುಂಬರುವ ಚುನಾವಣೆಯಲ್ಲಿ ಸಮಯ, ಶಕ್ತಿ ನೀಡಿ ದುಡಿಯುವ ನಿಲುವನ್ನು ಹೊಂದಿದ್ದೇನೆ. ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಇದನ್ನೂ ಓದಿ:Thalaivar 170: ರಜಿನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರ ಫಾಹದ್ ಫಾಸಿಲ್?
ಕಾಂಗ್ರೆಸ್ ಗೆ ಈಗ ಸೇರಿಕೊಳ್ಳುತ್ತಿದ್ದೇನೆ. ಆಗ ಅನಿವಾರ್ಯವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದೆ. ಇದು ನನ್ನ ಕೊನೆಯ ಬಸ್ ಸ್ಟಾಪ್ ಆಗಿದೆ. ಆತಂಕಕ್ಕೆ ಒಳಗಾಗಿರುವ ಕೆಲ ನಾಲ್ಕು ಜನರು ನನಗೆ ವಿರೋಧಿಸುತ್ತಿದ್ದಾರೆ. ಕೆಲವರ ವಿರೋಧ ಇದ್ದರೂ ಶೇ. 99 ರಷ್ಟು ಜನರು ನನ್ನನ್ನು ಒಪ್ಪಿದ್ದಾರೆ. ನನಗೆ ವಿರೋಧಿಸುವವರಿಗೆ ನಾನು ಯಾವುದೇ ಅಡ್ಡಿಯಾಗಲ್ಲ. ನಿರಾಶೆಯಾದವರು ಯಾಕೋ ಆತಂಕಕ್ಕೊಳಗಾಗಿದ್ದಾರೆ. ನಾನು ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿರೋಧ ಮಾಡುವವರಿಗೆ ನಾನು ಅಡ್ಡಿಯಾಗಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.