Advertisement

ಸರ್ಕಾರಿ ಯೋಜನೆ ಅರಿವಿಗೆ ಜನ ಜಾಗೃತಿ

09:57 PM Aug 28, 2019 | Lakshmi GovindaRaj |

ದೇವನಹಳ್ಳಿ: ಆರೋಗ್ಯ, ಜಲ ಸಂರಕ್ಷಣೆ, ಸ್ವತ್ಛತೆ ಸೇರಿದಂತೆ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು 2 ದಿನಗಳ ಕಾಲ ಜನ ಜಾಗೃತಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು. ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಒಳಾವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ಕಾರ್ಯಕ್ರಮಗಳ ಕುರಿತಂತೆ ಆಯೋಜಿಸಲಾಗಿದ್ದ ಜನ ಜಾಗೃತಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಸರ್ಕಾರಿ ಕಾರ್ಯಕ್ರಮ ಜನರಗೆ ತಲುಪಲಿ: ಸರ್ಕಾರದ ಪ್ರತಿಯೊಂದು ಕಾರ್ಯಕ್ರಮವು ಜನರಗೆ ತಲುಪಬೇಕು. ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಿಳಿಯಲು ಹಾಗೂ ಅನುಷ್ಠಾನಗಳ ಬಗ್ಗೆ ಮಾಹಿತಿ ಇರಬೇಕು. ಶಾಲಾ ಮಕ್ಕಳು ಈ ಜನಜಾಗೃತಿ ವಸ್ತು ಪ್ರದರ್ಶನದ ಮೂಲಕ ಅವರಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜ್ಞಾನಾರ್ಜನೆ ಹಾಗೂ ಪೋಷಕರಿಗೆ ತಿಳಿ ಹೇಳಲು ಅನುಕೂಲವಾಗುವುದು. ಚಿತ್ರಗಳ ಮೂಲಕ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ನಾವು ಓದುವ ಸಂದರ್ಭದಲ್ಲಿ ಇಂತಹ ಚಿತ್ರಗಳನ್ನು ನೋಡಿರುವುದನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಪ್ರದರ್ಶನದಲ್ಲಿ ಉತ್ತಮ ಮಾಹಿತಿ ಅಳವಡಿಕೆ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಸಂಪೂರ್ಣ ಲಸಿಕೆ-ಪರಿಪೂರ್ಣ ಆರೋಗ್ಯ, ಪೌಷ್ಟಿಕ ಆಹಾರ, ಪುನಶ್ಚೇತನ ಕೇಂದ್ರಗಳು, ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ, ರಕ್ತ ಹೀನತೆಯನ್ನು ತಡೆಗಟ್ಟುವಿಕೆ, ತುರ್ತು ಸಂದರ್ಭದಲ್ಲಿ ಜೀವ ರಕ್ಷಣೆಗೆ 108ಕ್ಕೆ ಉಚಿತ ಕರೆ ಮಾಡುವುದು, ಕ್ಷಯ ರೋಗ, ಮಾನಸಿಕ ಕಾಯಿಲೆ ರೋಗಗಳ ಉಲ್ಬಣಕ್ಕೆ ಕಾರಣಗಳು ಮತ್ತು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆಯ ಸೇವೆಗಳು ಹಾಗೂ ನೀರಿನ ಸಂರಕ್ಷಣೆ, ಶೌಚಾಲಯದ ಬಳಕೆ, ಕಸ ವಿಂಗಡಣೆ ಮಹತ್ವ ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಉತ್ತಮ ಮಾಹಿತಿಗಳನ್ನು ಪ್ರದರ್ಶನದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.

ಮಾಹಿತಿ ಫಲಕ ಪ್ರದರ್ಶನ: ಜನಜಾಗೃತಿ ವಸ್ತು ಪ್ರದರ್ಶನದಲ್ಲಿ ನೀರು ಉಳಿಸಿ- ಹಸಿರು ಬೆಳೆಸಿ, ಸಮೃದ್ಧ ಕರ್ನಾಟಕದ ನಿರ್ಮಾಣಕ್ಕೆ ದೃಢ ಹೆಜ್ಜೆಗಳು, ಉಚಿತ ಆರೋಗ್ಯ ಸಹಾಯವಾಣಿ-104, ಮೀನುಗಾರರ ಸಾಲಮನ್ನಾ ಅಭಿವೃದ್ಧಿಯೇ ಆಡಳಿತ ಮಂತ್ರ, ಶೌಚಾಲಯದ ಬಳಕೆ ಬಗ್ಗೆ ಅರಿವು, ಸ್ವಚ್ಛಾಲಯ-ಶೌಚಾಲಯ, ಕಾಂಗರೂ ಮಾದರಿ ಮಗುವಿನ ಆರೈಕೆ, ತಾಯಿ ಕಾರ್ಡ್‌, ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಿ, ಜನನಿ-ಶಿಶು ಸುರಕ್ಷಾ ಕಾರ್ಯಕ್ರಮಗಳು ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮಗಳು, ನವಜಾತ ಶಿಶುಗಳ ಆರೈಕೆ, ಮಾನಸಿಕ ಆರೋಗ್ಯ, ತುರ್ತು ವೈದ್ಯಕೀಯ ಸೇವೆ, ಜಲ ಸಂರಕ್ಷಣೆ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡುವ ಪ್ರದರ್ಶನ ಫಲಕಗಳನ್ನು ಪ್ರದರ್ಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿನುತಾ ರಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎಸ್‌.ಶಂಕರಪ್ಪ, ಸಹಾಯಕ ನಿರ್ದೇಶಕ ಮಹೇಶ್‌ ಎನ್‌.ಎಸ್‌. ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

ಸರ್ಕಾರದ ಕಾರ್ಯಕ್ರಮಗಳು ಪರಿಚಯವಾಗುವ ಮೂಲಕ ಯೋಜನೆಗಳನ್ನು ಬಳಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳನ್ನು ಜನ ಜಾಗೃತಿ ವಸ್ತು ಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ವಿಚಾರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ.
-ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next