ಮುಂಬಯಿ: ತೊಂಬತ್ತರ ಹರೆಯದ ಹಿರಿಜೀವ ಡಾ| ಸುನೀತಾ ಎಂ. ಶೆಟ್ಟಿ ಅವರನ್ನು ಗೌರವಿಸುವುದು ನನಗೆ ಅಭಿಮಾನವೆನಿಸುತ್ತಿದೆ. ವ್ಯಕ್ತಿ ಇಂದು ಇದ್ದು ನಾಳೆ ಇಲ್ಲವಾಗಬಹುದು. ಆದರೆ ಸಾಹಿತಿಗಳಾದವರು ತಮ್ಮ ಕೃತಿಗಳ ಮೂಲಕ ಎಂದೆಂದೂ ಅಮರರಾಗಿರುತ್ತಾರೆ. ಸಾಹಿತಿಗಳೆಂದರೆ ನನಗೆ ಗೌರವ, ಅಷ್ಟೇ ಪ್ರೀತಿ ಪಾತ್ರರು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ತಿಳಿಸಿದರು.
ಶುಕ್ರವಾರ ಮಧ್ಯಾಹ್ನ ಮಹಾರಾಷ್ಟ್ರ ರಾಜಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ನೇತೃತ್ವದಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ “ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಪುರಸ್ಕಾರ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು, ಮುಂಬಯಿಗೆ ಬರುವ ಮೊದಲು ಬಂಗಾಲಿ ಒಂದೇ ಒಳ್ಳೆಯ ಸಾಹಿತ್ಯ ಹೊಂದಿರುವ ಭಾಷೆ ಅಂದುಕೊಂಡಿದ್ದೆ. ಇಲ್ಲಿಗೆ ಬಂದ ಬಳಿಕ ಇತರ ಭಾಷೆಗಳಲ್ಲೂ ಶ್ರೇಷ್ಠ ಸಾಹಿತ್ಯ ರಚನೆಯಾಗಿರುವುದನ್ನು ಗಮನಿಸಿದ್ದೇನೆ. ನಮ್ಮ ಭಾಷೆ, ಪ್ರದೇಶ, ನಮ್ಮ ಸಮುದಾಯ, ಸಾಹಿತ್ಯಗಳನ್ನು ಪ್ರೀತಿಸುವಂತೆ, ಗೌರವಿಸುವಂತೆ ನಮ್ಮ ಭಾರತವನ್ನೂ ನಾವು ಪ್ರೀತಿಸಬೇಕು ಮತ್ತು ಗೌರವಿಸಬೇಕು. ವಯಸ್ಸಿನಲ್ಲಿ ಹಿರಿಯರಾದರೂ ಆತ್ಮವಿಶ್ವಾಸದಲ್ಲಿ ಯೌವನ ತುಂಬಿದ ತೊಂಬತ್ತರ ಸುನೀತಾ ದೀದಿ ಅವರನ್ನು ಸಮ್ಮಾನಿಸುವುದು ನನ್ನ ಭಾಗ್ಯ. ಇಂದು ನನಗೆ ಇಷ್ಟೊಂದು ಬಹುಮುಖ ಪ್ರತಿಭೆಯ ಸಾಹಿತಿಯ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವ ಅವಕಾಶ ನೀವು ಕಲ್ಪಿಸಿದ್ದೀರಿ. ತಮಗೆಲ್ಲರಿಗೂ ಕೃತಜ್ಞತೆಗಳು. ಕನ್ನಡಿಗರು ಮುಂಬಯಿಯಲ್ಲಿದ್ದು ನಾಡು-ನುಡಿಯ ಬಗ್ಗೆ ಹೊಂದಿರುವ ಅಭಿಮಾನ ಕಂಡು ಸಂತೋಷವಾಗುತ್ತಿದೆ. ಸುನೀತಾ ದೀದಿಯವರ ಲೇಖನಿಯ ತಾಕತ್ತಿಗೆ ಸಂದ ಗೌರವ ಇದಾಗಿದ್ದು, ಅವರು ಶತಾಯುಷಿಯಾಗಿ ಬಾಳಲಿ ಎಂದು ತಿಳಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ರಾಜ್ಯಪಾಲರು ಕಪಸಮ ಸಲಹಾ ಸಮಿತಿ ಸದಸ್ಯೆ, ಹಿರಿಯ ಸಾಹಿತಿ, ಕವಯತ್ರಿ, ಪ್ರಾಧ್ಯಾಪಕಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ “ಚೆನ್ನಭೈರದೇವಿ’ ಬಿರುದಿನೊಂದಿಗೆ ಪುರಸ್ಕಾರ ಫಲಕ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭ ಸುನೀತಾ ಶೆಟ್ಟಿ ಅವರ ಪುತ್ರ ಭರತ್ ಎಂ. ಶೆಟ್ಟಿ, ಪುತ್ರಿಯರಾದ ಭೂಮಿಕಾ ಎಂ. ಶೆಟ್ಟಿ ಮತ್ತು ಸತ್ಯಾ ಪ್ರದೀಪ್ ಶೆಟ್ಟಿ, ಅಳಿಯ ಮಹಾಬಲ್ ಬಿ. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್. ಪೂಜಾರಿ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ನಾಗರಾಜ್ ಕೆ. ದೇವಾಡಿಗ, ಅನಿತಾ ಪಿ. ಪೂಜಾರಿ ತಾಕೋಡೆ, ಜಯಂತ್ ಕೆ. ಸುವರ್ಣ ಉಪಸ್ಥಿತರಿದ್ದರು.
ಸಲಹಾ ಸಮಿತಿಯ ಸದಸ್ಯರಾದ ಸಿಎ ಐ. ಆರ್. ಶೆಟ್ಟಿ, ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ನ್ಯಾಯವಾದಿ ಕೆ. ಪಿ. ಪ್ರಕಾಶ್ ಎಲ್. ಶೆಟ್ಟಿ, ಗ್ರೆಗೋರಿ ಡಿ. ಅಲ್ಮೇಡಾ, ಸುರೇಂದ್ರ ಎ. ಪೂಜಾರಿ, ಕಡಂದಲೆ ಸುರೇಶ್ ಎಸ್. ಭಂಡಾರಿ, ಪಂಡಿತ್ ನವೀನ್ಚಂದ್ರ ಆರ್. ಸನೀಲ್, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರಾದ ಗೋಪಾಲ್ ತ್ರಾಸಿ, ಸವಿತಾ ಎಸ್. ಶೆಟ್ಟಿ, ಕರುಣಾಕರ್ ಶೆಟ್ಟಿ, ಸದಾನಂದ ಕೆ. ಸಫಲಿಗ, ಸಿಎ ಜಗದೀಶ್ ಬಿ. ಶೆಟ್ಟಿ, ಪೋಷಕ ಸದಸ್ಯ ಡಾ| ಶಿವರಾಮ ಕೆ. ಭಂಡಾರಿ, ಸದಸ್ಯರಾದ ತಾರಾ ಆರ್. ಬಂಟ್ವಾಳ್, ಆರೀಫ್ ಕಲಕಟ್ಟಾ, ಚಂದ್ರಶೇಖರ್ ಆರ್. ಬೆಳ್ಚಡ, ಸತೀಶ್ ಎಸ್. ಸಾಲ್ಯಾನ್, ಸಂಪದಮನೆ ಸದರಾಮ ಎನ್. ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯಪಾಲರನ್ನು ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಅಕ್ಷತೆ, ಮಂಗಳೂರು ಮಲ್ಲಿಗೆ, ಹಿಂಗಾರ, ವೀಳ್ಯದೆಲೆ, ಅಡಿಕೆ, ಬೆಲ್ಲ, ಜಲ ಗಡಿಕೆವುಳ್ಳ ಹರಿವಾಣ ನೀಡಿ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ತುಳು ನಾಡ ಸಂಪ್ರದಾಯದಂತೆ ವಿಶೇಷವಾಗಿ ಗೌರವಿಸಿದರು. ಗೌರವ ಪ್ರಧಾನ ಕಾರ್ಯ ದರ್ಶಿ ಅಶೋಕ್ ಎಸ್. ಸುವರ್ಣ ಪ್ರಸ್ತಾವನೆ ಗೈದರು. ಜತೆ ಕೋಶಾಧಿಕಾರಿ ಡಾ| ಜಿ. ಪಿ. ಕುಸುಮಾ ಅವರು ಸುನೀತಾ ಶೆಟ್ಟಿ ಅವರನ್ನು ಪರಿಚಯಿಸಿದರು. ವಿಶೇಷ ಆಮಂತ್ರಿತ ಸದಸ್ಯ ಸಾ. ದಯಾ ಗೌರವಾನ್ವಿತರ ಯಾದಿ ವಾಚಿಸಿದರು. ಸಲಹಾ ಸಮಿತಿಯ ಸದಸ್ಯ ಡಾ| ಆರ್. ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿಯ ಸದಸ್ಯ ಡಾ| ಸುರೇಶ್ ಎಸ್. ರಾವ್ ವಂದಿಸಿದರು.
ಮರೆಯಲಾಗದ ಕ್ಷಣ:
ನಾನು ಕರ್ನಾಟಕದಿಂದ ಮುಂಬಯಿಗೆ ಬಂದು 65 ವರ್ಷಗಳು ಸಂದು ಹೋದವು. ಈ ಆವಧಿಯಲ್ಲಿ ಅನೇಕ ಭಾಷಿಗರ ಸಂಪರ್ಕ ನನಗೆ ಒದಗಿ ಬಂದಿದೆ. ಇದರಿಂದ ಬರವಣಿಗೆಯಲ್ಲೂ ಏನಾದರೂ ಸಾಧನೆ ಮಾಡುವುದು ನನ್ನಿಂದ ಸಾಧ್ಯವಾಯಿತು. ಈ ಮಹಾನಗರದ ಎಲ್ಲ ಬಂಧುಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಮುಂಬಯಿಯ ಹಾಗೂ ಒಳನಾಡಿನ ಪತ್ರಿಕಾ ಮಾಧ್ಯಮಗಳು ನನ್ನ ಬರವಣಿಗೆಗೆ ಪ್ರೋತ್ಸಾಹ ಕೊಟ್ಟಿದ್ದು, ಎಲ್ಲರಿಗೂ ನಾನು ಋಣಿ ಆಗಿರುವೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಮಧುರ ಸಂಬಂಧಕ್ಕೆ ಪ್ರಾಚೀನ ಇತಿಹಾಸವಿದೆ. ಆದ್ದರಿಂದ ಕನ್ನಡಿಗಳಾದ ನಾನು ಇಂದು ಮಹಾರಾಷ್ಟ್ರದ ರಾಜಭವನದಲ್ಲಿ ಕನ್ನಡದಲ್ಲಿ ಮಾತಾಡುವುದು ಅಂದರೆ ತುಂಬ ಸಂತೋಷವೆನಿಸುತ್ತದೆ. ಇಲ್ಲಿನ ರಾಜ್ಯಪಾಲರ ಕೈಯಿಂದ ಗೌರವ ಸ್ವೀಕಾರ ಮಾಡುವುದು ನನ್ನ ಬದುಕಿನಲ್ಲೇ ಮರೆಯಲಾಗದ ಕ್ಷಣ. ಬಹುಭಾಷಿಗರಿರುವ ಮಹಾರಾಷ್ಟ್ರದಲ್ಲಿ ಭಾಷಾ ಬಾಂಧವ್ಯವಿದೆ. ಇದಕ್ಕಾಗಿ ನಾನು ಮಹಾರಾಷ್ಟ್ರ ಸರಕಾರವನ್ನೂ ಅಭಿನಂದಿಸುತ್ತೇನೆ.
-ಡಾ| ಸುನೀತಾ ಎಂ. ಶೆಟ್ಟಿ , ಹಿರಿಯ ಸಾಹಿತಿ, ಸಮ್ಮಾನಿತರು