Advertisement

ಐತಿಹಾಸಿಕ ಆವತಿ ಬೆಟ್ಟ ಅಭಿವೃದ್ಧಿಗೆ ನಿರ್ಲಕ್ಷ್ಯ

02:13 PM Jun 27, 2022 | Team Udayavani |

ದೇವನಹಳ್ಳಿ: ನಾಡಪ್ರಭು ಕೆಂಪೇಗೌಡ ವಂಶಸ್ಥ ರಣಭೈರೇಗೌಡರ ಕರ್ಮಭೂಮಿ ಆವತಿ ಬೆಟ್ಟವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಯಾವುದೇ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ವಿಫ‌ಲವಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಆವತಿ ಬೆಟ್ಟದ ಮೇಲೆ ರಣಭೈರೇಗೌಡ ವಾಸವಿದ್ದ ಮನೆ ಕುರುಹುಗಳಿವೆ. ಮುದ್ದೆ ಬಂಡೆ ಸೇರಿದಂತೆ ಅನೇಕ ಜೀವವೈವಿಧ್ಯ, ಸಸ್ಯ ಸಂಕುಲಗಳಿವೆ. ಇತಿಹಾಸದ ಕುರುಹುಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ಈ ಬೆಟ್ಟವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕಾಗಿದೆ. ಕೇವಲ ಜಯಂತಿಗಳಲ್ಲಿ ಘೋಷಣೆಗಷ್ಟೇ ಮೀಸಲಾಗಿದೆ ಹೊರತು, ಯಾವುದೂ ಕಾರ್ಯಗತವಾಗಿಲ್ಲ. ಚರಿತ್ರೆಯ ಪುಟದಲ್ಲಿರುವ ಆವತಿ ಗ್ರಾಮ ರಣಭೈರೇಗೌಡ ಕಟ್ಟಿದ ಸಂಸ್ಥಾನ ರಣಭೈರೇಗೌಡರ ಪುತ್ರಿ ವೀರಕೆಂಪಮ್ಮ ಗ್ರಾಮಸ್ಥರ ಒಳತಿಗಾಗಿ ಪ್ರಾಣ ತ್ಯಾಗ ಮಾಡಿದ ಸ್ಥಳ ಬೆಟ್ಟದಲ್ಲಿದೆ.

3 ದಿಕ್ಕಿನಲ್ಲೂ ಆಂಜನೇಯಸ್ವಾಮಿ ದೇಗುಲ: ವಿಶೇಷವೆಂದರೆ ಬೆಟ್ಟಕ್ಕೆ ಕಾಲುದಾರಿ ಇದ್ದು, ಬೆಟ್ಟದ ಪೂರ್ವ ಪಶ್ಚಿಮ ಉತ್ತರಾಭಿಮುಖವಾಗಿ ಮೂರು ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ದೇವಾಲಯಗಳಿದೆ. 2014ರ ಡಿಸೆಂಬರ್‌ನಲ್ಲಿ ಕೆಂಪೇಗೌಡ ಕಾಲದ ಐತಿಹಾಸಿಕ ಕುರುಹು ಹೊಂದಿರುವ ಸರ್ವೇ ನಂ.211ರ 44.7 ಎಕರೆ ವಿಸ್ತೀರ್ಣದ ಬೆಟ್ಟದ ಪೈಕಿ 32 ಎಕರೆ ಪ್ರದೇಶವನ್ನು ಖಾಸಗಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ 99 ವರ್ಷಗಳ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿತ್ತು. ಇದರ ಮಾಹಿತಿ ತಿಳಿದ ಗ್ರಾಮಸ್ಥರು ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು.

ಬೆಟ್ಟದಲ್ಲಿ ಐತಿಹಾಸಿಕ ಕುರುಹು: ಕೆಂಪೇಗೌಡ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುವ ಒಕ್ಕಲಿಗ ಸಮುದಾಯದ ಮುಖಂಡರು, ರಣಭೈರೇಗೌಡರ ಕರ್ಮಭೂಮಿ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫ‌ಲರಾಗಿದ್ದಾರೆ. ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸಬೇಕು. ವಿವಿಧ ರಾಜಕೀಯ ಪಕ್ಷಗಳು ಒಕ್ಕಲಿಗರ ವೋಟ್‌ಬ್ಯಾಂಕ್‌ಗಾಗಿ ಕಾಟಚಾರಕ್ಕೆ ಜಯಂತಿ ಆಚರಿಸುವ ಬದಲು ಕೆಂಪೇಗೌಡ ವಂಶಸ್ಥರ ಕರ್ಮಭೂಮಿ ಅಭಿವೃದ್ಧಿಗೆ ಕಾಯಕಲ್ಪ ನೀಡಬೇಕು. ತಾಲೂಕಿನಲ್ಲಿ ಏಕೈಕ ಐತಿಹಾಸಿಕ ಕುರುಹು ಹೊಂದಿರುವ ಆವತಿ ಬೆಟ್ಟಕ್ಕೆ ಪ್ರವಾಸಿಗರನ್ನು ಸೆಳೆಯುವ ಶಕ್ತಿಯಿದೆ. ಆದರೆ, ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರು ಹೇಳುತ್ತಾರೆ.

ಪರಿಶೀಲಿಸಿ ಸಮಗ್ರ ವರದಿ ಸಲ್ಲಿಕೆ: ವರದಿ ಅನ್ವಯ ರಣಭೈರೇಗೌಡರ ಇತಿಹಾಸ ಅರಿತ ಅನೇಕ ಕುರುಹುಗಳು ಬೆಳಕಿಗೆ ಬಂದಿತ್ತು. ರಾಜ್ಯ ಸರ್ಕಾರ ರಣಭೈರೇಗೌಡರ ಕರ್ಮಭೂಮಿ ಅಭಿವೃದ್ಧಿಪಡಿಸಿ, ಕೆಂಪೇಗೌಡರ ಇತಿಹಾಸ ವಿಶ್ವಮಾನ್ಯವಾಗುವಂತೆ ಮಾಡುವುದಾಗಿ ತಿಳಿಸಿದ್ದರು. ಅಂದಿನಿಂದ ಸರ್ಕಾರ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ನೋಡಿಲ್ಲ. ನಾಡಪ್ರಭು ಕೆಂಪೇಗೌಡ ಎಂದ ತಕ್ಷಣ ನೆನಪಾಗುವುದು ಬೆಂಗಳೂರು. ಆದರೆ, ಅವರ ವಂಶಸ್ಥರು ಆವತಿಯಲ್ಲಿ ನೆಲೆ ನಿಂತು ನಂತರ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಂರಕ್ಷಣಾ ಇಲಾಖೆ ತಂಡ ಇಡೀ ಬೆಟ್ಟದಲ್ಲಿರುವ ಕುರುಹುಗಳನ್ನು ಸಂಗ್ರಹಿಸಿ, ಪರಿಶೀಲನೆ ನಡೆಸಿದ ನಂತರ ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆದರೂ, ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

Advertisement

ಒಕ್ಕಲಿಗರ ಸಂಘದಿಂದ ಅಭಿವೃದ್ಧಿಯ ಚಿಂತನೆ: ಮುಂದಿನ ದಿನಗಳಲ್ಲಿ ಸರ್ಕಾರ ಅಭಿವೃದ್ಧಿಪಡಿಸದಿದ್ದರೆ, ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯ ನಿರ್ಣಯ ಕೈಗೊಂಡು ಅಭಿವೃದ್ಧಿಪಡಿಸುವ ಚಿಂತನೆಯಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆ ಐತಿಹಾಸಿಕ ಸ್ಥಳ ಅಭಿವೃದ್ಧಿಗೆ ವಿಫ‌ಲವಾಗಿದೆ. ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಸಂತಸ ತಂದಿದೆ. ಅದೇ ಮಾದರಿಯಲ್ಲಿ ಕೆಂಪೇಗೌಡ ವಂಶಸ್ಥ ರಣಭೈರೇಗೌಡರ ಕರ್ಮಭೂಮಿಯನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜೊನ್ನಹಳ್ಳಿ ಮುನಿರಾಜು ಮನವಿ ಮಾಡಿದ್ದಾರೆ.

ಪಾರಂಪರಿಕ ನೆಲೆ ಮತ್ತು ಕುರುಹು ಉಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಹೆಚ್ಚಿನ ಜನ ಬರುತ್ತಾರೆ. ಬೆಟ್ಟ ಉಳಿದರೆ ರಣಭೈರೇಗೌಡರ ಇತಿಹಾಸ ತಿಳಿಯಬಹುದಾಗಿದೆ.ಬಸವರಾಜು, ಗ್ರಾಮಸ್ಥ

ರಣಭೈರೇಗೌಡರ ಕರ್ಮಭೂಮಿಯಾದ ಆವತಿ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆವತಿ ಬೆಟ್ಟದಲ್ಲಿ ಯಾವರೀತಿ ಅಭಿವೃದ್ಧಿಪಡಿಸಬೇಕು ಎಂಬ ಸಮಗ್ರ ಮಾಹಿತಿ ನೀಡಲಾಗಿದೆ. ಚೆಲುವಾಂಬ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಆವತಿ ಐತಿಹಾಸಿಕ ಬೆಟ್ಟವಾಗಿದೆ. ರಣಭೈರೇಗೌಡ ಆಳ್ವಿಕೆಯ ಕುರುಹುಗಳಿವೆ. ಅವರ ಕಾಲದಲ್ಲಿ ಮಣ್ಣಿನ ಕೋಟೆಯಿತ್ತು. ಅವರ ಇತಿಹಾಸವನ್ನು ಮತ್ತೆ ಮರುಕಳಿಸಲು ಸರ್ಕಾರ ಅಭಿವೃದ್ದಿಪಡಿಸಬೇಕು. ಬಿಟ್ಟಸಂದ್ರ ಬಿ.ಜಿ.ಗುರುಸಿದ್ದಯ್ಯ, ಇತಿಹಾಸಕಾರ

Advertisement

Udayavani is now on Telegram. Click here to join our channel and stay updated with the latest news.

Next