ಬೆಂಗಳೂರು: ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಶನಿವಾರದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಭಾರತ ತಂಡ ಮೊದಲ ಟೆಸ್ಟ್ನಲ್ಲಿ ಮಖಾಡೆ ಮಲಗಿದ್ದು ನಾಯಕ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದೆ. ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ನಡುಗಿಸಿದ್ದು ಆಸೀಸ್ನ ಒಬ್ಬ ಕೀಫ್ ಎನ್ನುವುದು ವಿಶೇಷ. ತಮ್ಮ ಸ್ಪಿನ್ ಮಾರಕ ದಾಳಿಯಿಂದಲೇ ಕೊಹ್ಲಿ ಟೀಂಗೆ ಕೀಫ್ ನೀರು ಕುಡಿಸಿದ್ದರು. ಎರಡೂ ಇನಿಂಗ್ಸ್ಗಳಲ್ಲೂ ಸೇರಿದಂತೆ ಒಟ್ಟು 70ಕ್ಕೆ 12 ವಿಕೆಟ್ ಹಾರಿಸಿದ್ದರು. ಒಟ್ಟಾರೆ ಸ್ಮಿತ್ ಪಡೆ ಭಾರೀ ಶಾಕ್ ಟ್ರೀಟೆ¾ಂಟ್ ನೀಡಿ ಪುಣೆಯಲ್ಲಿ ಗೆಲುವಿನ ಕೇಕೆ ಹಾಕಿತ್ತು.
ಒತ್ತಡದಿಂದ ಹೊರಬರಬೇಕಿದೆ ಕೊಹ್ಲಿ ಪಡೆ: ಕೊಹ್ಲಿ ನಾಯಕತ್ವ ವಹಿಸಿಕೊಂಡ ಬಳಿಕ ಯಶಸ್ವಿ ಆರಂಭ ಪಡೆದಿದ್ದರು. ಟೀಂ ಇಂಡಿಯಾ ಅಜೇಯವಾಗಿ ಮುಂದಡಿ ಇಟ್ಟಿತ್ತು. ಅಲ್ಲದೆ ಕೊಹ್ಲಿ ನಾಯಕತ್ವ ಹೊರತು ಪಡಿಸಿ ಒಟ್ಟಾರೆ ಟೆಸ್ಟ್ನಲ್ಲಿ 19 ಸೋಲು ಕಾಣದೆ ಮುಂದುವರಿದಿತ್ತು. ಆದರೆ ಆಸೀಸ್ ವಿರುದ್ಧದ ಕಳೆದ ಪಂದ್ಯದಲ್ಲಿನ 333 ರನ್ ಸೋಲು ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿತು. ಇದು ಕೊಹ್ಲಿಗೆ ಪಾಲಿಗೆ ಸದಾ ನೆನಪಿನಲ್ಲಿರುವಂತಹ ಗಾಯ. ಇದಕ್ಕೆ ಕಾರಣ ಅಭಿಮಾನಿಗಳಿಂದ ಎದುರಾದ ಭಾರೀ ಟೀಕೆ. ಒಂದು ಸೋಲಿಗೆ ಟ್ವೀಟರ್ನಲ್ಲಿ ಅಭಿಮಾನಿಗಳು ಭಾರತದ ಬ್ಯಾಟಿಂಗ್ ಕ್ರಮಾಂಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ಮಾಜಿ ಕ್ರಿಕೆಟಿಗರು ಟೀಕಾಸ್ತ್ರ ವಿಶ್ಲೇಷಣೆಯನ್ನೂ ಮಾಡಿದ್ದರು. ಈ ಸಂದರ್ಭಲ್ಲಿ ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಒಂದು ಸೋಲಿನಿಂದ ತಂಡದ ಸಾಮರ್ಥ್ಯವನ್ನು ಅಳಯಬೇಡಿ ಎಂದು ಕೊಹ್ಲಿ ಪಡೆ ಪರ ಬ್ಯಾಟಿಂಗ್ ಮಾಡಿದ್ದರು. ಒತ್ತಡ ಬದಿಗಿಟ್ಟು ಆಡುವ ಧೈರ್ಯವನ್ನು ಕೊಹ್ಲಿ ಪಡೆ ಮಾಡಿದರೆ ಮಾಡಿದ ತಪ್ಪಿನ್ನು ಸರಿಪಡಿಸಿಕೊಳ್ಳಲು ಅವಕಾಶ ಇದೆ.
ಬ್ಯಾಟಿಂಗ್ ತಪ್ಪು ಮರುಕಳಿಸದಿರಲಿ: ಭಾರತ ಮೊದಲ ಟೆಸ್ಟ್ನಲ್ಲಿ ಮುಖ್ಯವಾಗಿ ಮಾಡಿಕೊಂಡದ್ದು ಬ್ಯಾಟಿಂಗ್ನಲ್ಲಿ ಮಾಡಿಕೊಂಡ ಎಡವಟ್ಟು. ಕೆ.ಎಲ್.ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ದಯನೀಯ ಬ್ಯಾಟಿಂಗ್ ಹಿನ್ನಡೆ ಅನುಭವಿಸಿದರು. ಅದರಲ್ಲೂ ಭಾರೀ ನಿರೀಕ್ಷೆ ಮೂಡಿಸಿದ್ದ ವಿರಾಟ್ ಕೊಹ್ಲಿ 2 ಇನಿಂಗ್ಸ್ ಸೇರಿ ಗಳಿಸಿದ ಒಟ್ಟು ರನ್ ಕೇವಲ 13!. ಒಟ್ಟಾರೆ ಭಾರತ 1ನೇ ಇನಿಂಗ್ಸ್ನಲ್ಲಿ 105 ಮತ್ತು 2ನೇ ಇನಿಂಗ್ಸ್ನಲ್ಲಿ 107 ರನ್ಗಳಿಗೆ ಸರ್ವಪತನವಾಗಿತ್ತು.
ಬೌಲಿಂಗ್ನಲ್ಲಿ ಎಡವದಿರಲಿ: ಭಾರತಕ್ಕೆ ತನ್ನದೇ ನೆಲದಲ್ಲಿ ಬಲಾಡ್ಯì ಸ್ಪಿನ್ ಬಲ ಹೊಂದಿದೆ. ಎಂತಹ ಎದುರಾಳಿಗೂ ಎದೆ ನಡುಗಿಸಬಲ್ಲ ಸಾಮರ್ಥ್ಯ ಹೊಂದಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಬೌಲಿಂಗ್ನಿಂದಲೇ ಮೂಡಿ ಮಾಡಬಲ್ಲರು. ಆದರೆ ಇವರಿಂದ ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿರಲಿಲ್ಲ. ಜತೆಗೆ ವೇಗಿ ಉಮೇಶ್ ಯಾದವ್, ಇಶಾಂತ್ ಶರ್ಮಾ, ಜಯಂತ್ ಯಾದವ್ ವಿಕೆಟ್ ಉರುಳಿಸುವಲ್ಲಿ ವಿಫಲರಾಗಿದ್ದಾರೆ.
ಕೀಫ್, ಸ್ಮಿತ್ ಬಲ, ಆಸೀಸ್ಗೆ ಹೆಚ್ಚಿದ ಆತ್ಮವಿಶ್ವಾಸ: ಸ್ಟೀವನ್ ಸ್ಮಿತ್ 2ನೇ ಇನಿಂಗ್ಸ್ನಲ್ಲಿ ತಾಳ್ಮೆಯ ಶತಕ ಬಾರಿಸಿದ್ದರು. ಜತೆಗೆ ಆರಂಭಿಕ ರೆನ್ ಶಾ, ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್ ತಂಡವನ್ನು ಗೆಲ್ಲಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಈ ಎಲ್ಲದರಿಂದ ಸರಣಿಯಲ್ಲಿ ಆಸೀಸ್ ಆರಂಭಿಕ ಮೇಲುಗೈ ಪಡೆದಂತಾಗಿದೆ. ಜತೆಗೆ ಒಟ್ಟಾರೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಂಡಿದೆ. ಕೀಫ್ ಎಂಬ ಸ್ಪಿನ್ ಮಾಯಾವಿ ಆಸೀಸ್ ಪರ ಮತ್ತೂಂದು ಜಾದೂ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ತಂಡಗಳು
ಭಾರತ (ಸಂಭಾವ್ಯರು): ಕೆ.ಎಲ್.ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್.
ಆಸ್ಟ್ರೇಲಿಯಾ (
ಆಡುವ ಬಳಗ): ಡೇವಿಡ್ ವಾರ್ನರ್, ಮ್ಯಾಟ್ ರೆನ್ಶಾ, ಸ್ಟೀವನ್ ಸ್ಮಿತ್ (ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್ಕಾಂಬ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಒ’ಕೀಫ್, ನಥನ್ ಲಿಯೋನ್, ಜೋಶ್ ಹೇಜಲ್ವುಡ್.
ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್ 1
ಬೆಂಗಳೂರಿನಲ್ಲಿ ಭಾರತ-ಆಸ್ಟ್ರೇಲಿಯಾ
ವರ್ಷ ಫಲಿತಾಂಶ
1979 ಡ್ರಾ
1998 ಆಸ್ಟ್ರೇಲಿಯಾಕ್ಕೆ 8 ವಿಕೆಟ್ ಜಯ
2004 ಆಸ್ಟ್ರೇಲಿಯಾಕ್ಕೆ 217 ರನ್ ಜಯ
2008 ಡ್ರಾ
2010 ಭಾರತಕ್ಕೆ 7 ವಿಕೆಟ್ ಜಯ