Advertisement

ಜಿಲ್ಲಾ  ಕಾರಾಗೃಹಕ್ಕೆ ದಾಳಿ: ಗಾಂಜಾ, ಮೊಬೈಲ್‌ ಪತ್ತೆ 

06:00 AM Apr 15, 2018 | |

ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ಶನಿವಾರ ಸಂಜೆ ದಿಢೀರ್‌ ದಾಳಿ ವ್ಯಾಪಕ ತಪಾಸಣೆ ನಡೆಸಿದರು.  ಜೈಲಿನ ಎಲ್ಲ ವಿಭಾಗಗಳ ಪ್ರತಿಯೊಂದು ಕೊಠಡಿಗೆ ತೆರಳಿ ತಪಾಸಣೆ ನಡೆಸಲಾಗಿದೆ. ಸುಮಾರು 200 ಗ್ರಾಂ ಗಾಂಜಾ, ಹಲವಾರು ಸಿಗರೇಟುಗಳು, ಬೀಡಿಗಳು, ತಂಬಾಕು, ಲೈಟರ್‌ಗಳು, ಕಟ್ಟರ್‌ಗಳು, ಕಬ್ಬಿಣದ ರಾಡ್‌, ಒಂದು ಮೊಬೈಲ್‌ ಫೋನ್‌ ಮತ್ತು ಎರಡು ಸಿಮ್‌ಗಳು ಸಹಿತ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ. 20 ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಮಹಿಳಾ ಪೊಲೀಸರು ಸಹಿತ 30  ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌  ನೇತೃತ್ವ ವಹಿಸಿದ್ದರು. 

Advertisement

ಬರ್ಕೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಜೈಲಿನ ವಿಚಾರಣಾಧೀನ ಕೈದಿಗಳ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗು ತ್ತಿದ್ದ ಬಗ್ಗೆ ಈ ಹಿಂದೆ ಹಲವು ಬಾರಿ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿದ್ದರು. ಇತ್ತೀಚೆಗೆ ಸುಮಾರು ನಾಲ್ಕು ತಿಂಗಳಿಂದ ಮಾತ್ರ ಜೈಲು ಸುದ್ದಿಯಲ್ಲಿರಲಿಲ್ಲ. ಈಗ ಚುನಾವಣೆ ಸಮೀಪಿಸಿದ್ದು, ಪೊಲೀಸರು   ಈ ಹಿಂದೆ ಸಮಾಜ ವಿರೋಧಿ ಕೃತ್ಯ ಎಸಗಿದ ಹಿನ್ನೆಲೆ ಇರುವವರು ಮತ್ತು ರೌಡಿಗಳನ್ನು ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮುಚ್ಚಳಿಕೆಯನ್ನೂ ಬರೆಸಿಕೊಂಡಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳ ಒತ್ತಡದಿಂದಾಗಿ ಜೈಲಿನ ತಪಾಸಣೆಯನ್ನು ಪೊಲೀಸರು ಮಾಡಿರಲಿಲ್ಲ.   

ಜೈಲಿನ ಸ್ಥಿತಿ ಸುಧಾರಿಸಿಲ್ಲ
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಗಾಂಜಾ, ಮೊಬೈಲ್‌ ಮತ್ತಿತರ ನಿಷೇಧಿತ ವಸ್ತುಗಳು ಸಿಗಬಾರದೆಂದು ಜೈಲಿನ ಹೊರ ಭಾಗದಲ್ಲಿ  ಸುತ್ತಲೂ ಪೊಲೀಸರು ಸಾಕಷ್ಟು  ಬಂದೋಬಸ್ತು ಕ್ರಮಗಳನ್ನು ಕೈಗೊಂಡಿದ್ದರೂ ಪರಿಸ್ಥಿತಿ ಪೂರ್ತಿ ನಿಯಂತ್ರಣಕ್ಕೆ ಬಂದಿಲ್ಲ ಎನ್ನುವುದಕ್ಕೆ ಶನಿವಾರದ ದಾಳಿಯ ಸಂದರ್ಭದಲ್ಲಿ ಜೈಲಿನ ಒಳಗಡೆ ಪತ್ತೆಯಾದ ಸೊತ್ತುಗಳೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next