Advertisement

ಕೋವಿಡ್ ವಾರಿಯರ್ಸ್‌ ಮೇಲೆ ಸೋಂಕಿತರ ಕುಟುಂಬದಿಂದ ಹಲ್ಲೆ

05:09 PM Jun 13, 2020 | keerthan |

ಕಲಬುರಗಿ: ಕೋವಿಡ್ ಕರ್ತವ್ಯದಲ್ಲಿರುವ ಆಶಾ ಕಾರ್ಯಕರ್ತೆ ಮತ್ತು ಆಕೆಯ ಪತಿಯ ಮೇಲೆ ಸೋಂಕಿತ ವ್ಯಕ್ತಿಗಳ ಕುಟುಂಬದವರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಾಂಪೂರಹಳ್ಳಿಯಲ್ಲಿ ನಡೆದಿದೆ.

Advertisement

ವಾಡಿ ಪೊಲೀಸ್ ಠಾಣೆಯ ಶಾಂಪೂರಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಒಂದೇ ಕುಟುಂಬದ ಮೂವರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಮುಂಬೈನಿಂದ ಆಗಮಿಸಿದ ಇವರಿಗೆ ಸರ್ಕಾರಿ ಕ್ವಾರಂಟೈನ್ ನಿಂದ ಮನೆಗೆ ತೆರಳಿ ಮೇಲೆ ಪಾಸಿಟಿವ್ ಎಂದು ವರದಿ ಬಂದಿದೆ. ಅಂದೇ ಮೂವರು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ.

ಆದರೆ, ಕ್ವಾರಂಟೈನ್ ಅವಧಿ ಮುಗಿಸಿ ಬಂದಿರುವ ಮೂವರೂ ಆರೋಗ್ಯವಾಗಿಯೇ ಇದ್ದಾರೆ. ಅವರಲ್ಲಿ ಕೋವಿಡ್ ಲಕ್ಷಣಗಳು ಇಲ್ಲ. ಸುಖಾಸುಮ್ಮನೆ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದಕ್ಕೆಲ್ಲ ನೀನೆ ಕಾರಣ ಎಂದು ಅದೇ ಗ್ರಾಮದ ಆಶಾ ಕಾರ್ಯಕರ್ತೆ ಜ್ಯೋತಿ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಪತ್ನಿಗೆ ಹಲ್ಲೆ ಮಾಡುವುದನ್ನು ಸಹಿಸದ ಸ್ಥಳದಲ್ಲೇ ಇದ್ದ ಪತಿ ತಾರಾಸಿಂಗ್ ಪವಾರ್ ಜ್ಯೋತಿ ರಕ್ಷಣೆಗೆ ಹೋಗಿದ್ದಾರೆ. ಆಗ ಆತನ ಮೇಲೂ ಸೋಂಕಿತರ ಕುಟುಂಬದವರು ಹಲ್ಲೆ ಮಾಡಿದ್ದಾರೆ.

ಈ ಘಟನೆ ಬಗ್ಗೆ ಆಶಾ ಕಾರ್ಯಕರ್ತೆಯರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next