ಹೆಬ್ರಿ : ಆತ್ರಾಡಿ ಗ್ರಾಪಂ ವ್ಯಾಪ್ತಿಯ ಮದಗ ಮುಳ್ಳಗುಜ್ಜೆ ಬಳಿ ಇರುವ ಮನೆಯೊಂದರಲ್ಲಿ ತಾಯಿ ಮಗಳ ಮೃತದೇಹ ಪತ್ತೆ ಪ್ರಕರಣ ಇದೀಗ ಕೊಲೆ ಎಂದು ಸಾಬೀತಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನಲೆ : ಚೆಲುವಿ (28) ಮತ್ತು ಪ್ರಿಯಾ 10 ವರ್ಷ ಪ್ರಾಯದ ಮಗಳನ್ನು ಮೇ.8 ರಂದು ರಾತ್ರಿ ಯಾರೋ ಅಪರಿಚಿತರು ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಮೃತಳ ತಂಗಿ ದೇವಿ ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ರವರ ನೇತೃತ್ವದಲ್ಲಿ ಹಿರಿಯಡಕ ಪಿ.ಎಸ್.ಐ ಅನಿಲ್ ಬಿ ಮಾದರ, ಮಧು ಬಿ.ಇ, ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ, ರವಿ ಬಿ ಕಾರಗಿ ಸಿಬ್ಬಂದಿಯವರಾದ ರಾಘವೇಂದ್ರ ಮತ್ತು ನಿತಿನ್ ರವರ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಆರೋಪಿ ಹರೀಶ. ಆರ್ ಯಾನೆ ಗಣೇಶ (29) ಎಂಬಾತನನ್ನು ಮೇ 11ರಂದು ಬಂಧಿಸಿದ್ದಾರೆ.
ಪ್ರಕರಣದ ಆರೋಪಿ ಹರೀಶ ಮೃತೆ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿರುತ್ತಾರೆ. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು ಚೆಲುವಿಯನ್ನು ಮದುವೆ ಆಗಬೇಕೆಂದು ಒತ್ತಾಯಿಸುತ್ತಿದ್ದನು. ಚೆಲುವಿಯು ಬೇರೆ ಗಂಡಸರೊಂದಿಗೆ ಪೋನ್ನಲ್ಲಿ ಮಾತನಾಡುತ್ತಿದ್ದಾಳೆ ಎಂಬುದಾಗಿ ಸಂಶಯದಿಂದ ದ್ವೇಷಗೊಂಡು ಮೇ 8 ರಂದು ರಾತ್ರಿ ಅವಳ ಮನೆಗೆ ತೆರಳಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಪೋನಿನಲ್ಲಿ ಸಂಪರ್ಕದಲ್ಲಿರುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದ್ದು ಚೆಲುವಿ ಮಲಗಿದ್ದ ಸಮಯ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾರೆ. ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50,000/- ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.
Related Articles
ಇದನ್ನೂ ಓದಿ : ಟೊಮೆಟೊ ಫ್ಲೂ ತಡೆಗಟ್ಟಲು ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ:ಸಚಿವ ಡಾ.ಕೆ.ಸುಧಾಕರ್
ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ:
ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯ್ಕ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿ.ಪಿ.ಐ ಅನಂತ ಪದ್ಮನಾಭ, , ಹಿರಿಯಡ್ಕ ಠಾಣಾ ಪಿ.ಎಸ್.ಐ ಅನಿಲ್ ಬಿ ಮಾದರ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿ.ಎಸ್.ಐ ಮಂಜುನಾಥ ಮರಬದ, ರವಿ ಬಿ.ಕಾರಗಿ ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್.ಐ ಕೃಷ್ಣಪ್ಪ, ಪ್ರದೀಪ್ ನಾಯಕ, ವಾಸುದೇವ ಪಿ, ರವೀಂದ್ರ ಹೆಚ್. ಶೇಖರ ಸೇರಿಗಾರ ಹಿರಿಯಡ್ಕ ಠಾಣೆಯ ಎ.ಎಸ್.ಐ ಗಂಗಪ್ಪ , ಜಯಂತ, ಸಿಬ್ಬಂದಿಯವರಾದ ರಘ, ಸದಾಶಿವ, ರಾಘವೇಂದ್ರ ಕೆ, ದಯಾನಂದ ಪ್ರಭು, ಉದಯ ಕಾಮತ್, ರಾಜೇಶ ಡಿ ಗಾರ್, ಸುರೇಖಾ, ರಾಕೇಶ ಶೆಟ್ಟಿ, ನಿತಿನ್, ಭೀಮಪ್ಪ, ಅಶೋಕ, ಸಂತೋಷ, ಕಾರ್ತಿಕ, ಆನಂದ ಕೋಟ ಠಾಣೆಯ ಗಣೇಶ, ರಾಘವೇಂದ್ರ ಬ್ರಹ್ಮಾವರ ಠಾಣೆಯ ಪ್ರವೀಣ ಶೆಟ್ಟಿಗಾರ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿ ಶಿವಾನಂದ, ದಿನೇಶ ಅವರು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎಸ್. ಪಿ.ಯಿಂದ ಮೆಚ್ಚುಗೆ : ಪ್ರಕರಣ ನಡೆದು 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡವನ್ನು ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅಭಿನಂದಿಸಿದ್ದಾರೆ.